ಭರವಸೆಯ ಮಿಂಚು ಶ್ವೇತಾ ಪಂಡಿತ್ ಸಂದರ್ಶನ
'ಪರಮಾತ್ಮ' ಚಿತ್ರದ "ಕತ್ನಲ್ಲಿ ಕರಡೀಗೆ ಜಾಮೂನು ತಿನ್ಸಕ್ಕೆ ಹೋಗ್ಬಾರ್ದು ರೀ..." ಹಾಡಿನಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದ ಅಚ್ಚಗನ್ನಡದ ಬೆಡಗಿ ಶ್ವೇತಾ ಪಂಡಿತ್. ತಮಿಳು ಹಾಗೂ ತೆಲುಗಿನ ತಲಾ ಒಂದೊಂದು ಚಿತ್ರದಲ್ಲಿ ಅಭಿನಯಿಸುವ ಮೂಲಕ ಈಗವರು ತ್ರಿಭಾಷಾ ತಾರೆಯಾಗಿ ಬೆಳಗುತ್ತಿದ್ದಾರೆ.
ಇತ್ತೀಚೆಗೆ 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡ ತಾರೆ. ಕೇವಲ 21 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರೂ ಯಾರೊಂದಿಗೂ ವಿವಾದ ಮಾಡಿಕೊಳ್ಳಲಿಲ್ಲ. ಚಂದ್ರಿಕಾ ಜೊತೆಗೆ ಒಂದಷ್ಟು ಸ್ನೇಹ, ನಟ ತಿಲಕ್ ಜೊತೆಗೆ ತುಂಟಾಟ ಆಡಿ ಎಲ್ಲರ ಗಮನಸೆಳೆದಿದ್ದರು.
ಬಿಗ್ ಬಾಸ್ ಶೋನಲ್ಲಿ ಇದ್ದದ್ದು ಕೇವಲ 21 ದಿನವಾದರೂ ಕೆಟ್ಟ ಪದಗಳ ಪ್ರಯೋಗ ಮಾಡಲಿಲ್ಲ. ಮನೆಯಲ್ಲಿ ಇದ್ದಷ್ಟು ದಿನ ಎಲ್ಲರೊಂದಿಗೂ ಚೆನ್ನಾಗಿಯೇ ಇದ್ದರು. ಅದಾದ ಬಳಿಕ ಶ್ವೇತಾ ಪಂಡಿತ್ ಎಲ್ಲಿ ಹೋದರು. ಬನ್ನಿ ಅವರೊಂದಿಗೆ ಒಂದಷ್ಟು ಮಾತುಕತೆ ನಡೆಸಿ ಬರೋಣ...
1. ಚಿತ್ರರಂಗಕ್ಕೆ ಅಡಿಯಿಟ್ಟಿದ್ದು ಆಕಸ್ಮಿಕವಾಗಿಯೇ?ಚಿಕ್ಕಂದಿನಿಂದಲೂ ನನಗೆ ಕ್ಯಾಮೆರಾ ಎಂದರೆ ಹುಚ್ಚು ಪ್ರೀತಿ. ಈ ಕ್ಷೇತ್ರಕ್ಕೆ ನಾನೇ ಇಷ್ಟಪಟ್ಟು ಬಂದೆ.
2. ತಮ್ಮ ಬಾಲ್ಯ, ಹುಟ್ಟೂರಿನ ಬಗ್ಗೆ ಸ್ವಲ್ಪ ಹೇಳಿ?
ಹುಟ್ಟಿ ಬೆಳೆದದ್ದೆಲ್ಲಾ ಹೈದರಾಬಾದಿನಲ್ಲಿ. ಕೆಲವರ್ಷಗಳನ್ನು ಉತ್ತರ ಕನ್ನಡದಲ್ಲಿ ಕಳೆದಿದ್ದೇನೆ. ಅಪ್ಪ ಅಮ್ಮ ಮಂಗಳೂರಿನಲ್ಲೇ ಸೆಟ್ಲ್ ಆಗಿದ್ದಾರೆ. ಈಗಲೂ ಸಾಧ್ಯವಾದಾಗಲೆಲ್ಲಾ ಮಂಗಳೂರಿಗೆ ಹೋಗಿ ಬರುತ್ತಿರುತ್ತೇನೆ. ಕೊಂಕಣಿಯವರಾದ ನನಗೆ ಮಂಗಳೂರು ಬಿಟ್ಟು ಇರೋದಕ್ಕೇ ಆಗುವುದಿಲ್ಲ. ಸದ್ಯಕ್ಕೆ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದೇನೆ.
3. ತಮ್ಮ ಹವ್ಯಾಸಗಳ ಬಗ್ಗೆ ಒಂದಷ್ಟು ಹೇಳಿ?
ನನಗೆ ಅಡ್ವೆಂಚರ್ ಅಂದ್ರೆ ಇಷ್ಟ. ರಾಕ್ ಕ್ಲೈಂಬಿಂಗ್ ಮಾಡ್ತೀನಿ. ಸ್ಕೂಬಾ ಡೈವಿಂಗ್ ಸಹ ಮಾಡ್ತೀನಿ. ಆಗಾಗ ನನ್ನ ಖುಷಿಗೆ ಕವನಗಳನ್ನೂ ಬರೆಯುತ್ತೇನೆ.
4. ಜೀವನದಲ್ಲಿ ಮರೆಯಲಾಗದ ಘಟನೆ?
ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿಬಂದ ಘಟನೆ ಎಂದು ಹೇಳಬಹುದು. ಇದು ನನ್ನ ಜೀವಮಾನದಲ್ಲಿ ಸಿಕ್ಕಂತಹ ಅಪೂರ್ವ ಅವಕಾಶ.
5. ಯಾವ ಉದ್ದೇಶಕ್ಕಾಗಿ ಬಿಗ್ ಬಾಸ್ ಶೋನಲ್ಲಿ ಭಾಗಿಯಾದಿರಿ?
ಕರ್ನಾಟಕದ 12 ಜನಕ್ಕಷ್ಟೇ ಅವಕಾಶ ಸಿಕ್ಕಿತು. ಅದರಲ್ಲಿ ನಾನೂ ಒಬ್ಬಳಾಗಿದ್ದೆ. ತುಂಬಾ ಸಂತೋಷವಾಯಿತು. ಕೋಟಿ ಕೊಟ್ಟರು ಇಂಥಹ ಅವಕಾಶ ಸಿಗಲ್ಲ. ನನ್ನ ತಂಗಿಯ ಉನ್ನತ ಶಿಕ್ಷಣಕ್ಕಾಗಿ ಹಣ ಬೇಕಾಗಿತ್ತು. ಅದೂ ಒಂದು ಕಾರಣ ಎಂದು ಹೇಳಬಹುದು.
6. ಬಿಗ್ ಬಾಸ್ ನಲ್ಲಿ ನಿಜಕ್ಕೂ ರಿಯಾಲಿಟಿ ಇತ್ತಾ?
ಜನ ಏನೇನೋ ದೊಡ್ಡದಾಗಿ ಮಾಡಲು ಹೋಗುತ್ತಿರುತ್ತಾರೆ. ಆದರೆ ನೀವು ನೀವಾಗಿರುವುದೇ ದೊಡ್ಡ ಸಾಧನೆ ಎಂಬ ಪಾಠವನ್ನು ಅಲ್ಲಿ ಕಲಿತೆ. ನಾನೇನು ಎಂಬುದನ್ನು ಅಲ್ಲಿ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು.


Click it and Unblock the Notifications












