ಅಗ್ನಿ ಶ್ರೀಧರ್ 'ಎದೆಗಾರಿಕೆ' ಚಿತ್ರೀಕರಣ ಮುಕ್ತಾಯ

ಮಾರತ್ ಹಳ್ಳಿಯ ಈಜೋನ್ ಕ್ಲಬ್ ನಲ್ಲಿ ನಾಯಕ ಆದಿತ್ಯ, ನಾಯಕಿ ಆಕಾಂಕ್ಷಾ ಹಾಗೂ ಗುರುದತ್ ಅಭಿನಯದ ದೃಶ್ಯವೊಂದನ್ನು ಚಿತ್ರೀಕರಣ ಮಾಡುವುದರೊಂದಿಗೆ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು, ಮುಂಬೈ, ಸಕಲೇಶಪುರ, ಮಂಗಳೂರು ಮುಂತಾದ ಕಡೆ ಮೂವತ್ತೈದು ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ಚೀತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದು ನಿರಾಂತಂಕ ಅನುಭವಿಸುತ್ತಿರುವ ಚಿತ್ರತಂಡ, ಈ ಚಿತ್ರವನ್ನು ಸಾಕಷ್ಟು ಹೋಮ್ ವರ್ಕ್ ಮಾಡಿ ಚಿತ್ರೀಕರಣ ಮಾಡಿದ್ದಾರೆ. ಕಥೆಗೆ ಅಗತ್ಯವಿತ್ತಾದ್ದರಿಂದ ಮುಂಬೈನಲ್ಲಿ ಕೂಡ ಚಿತ್ರೀಕರಣ ನಡೆಸಿದ್ದು ಸರ್ವ ರೀತಿಯಲ್ಲೂ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದಿದೆ ಚಿತ್ರತಂಡ.
ಸುಮನಾ ಕಿತ್ತೂರ್ ಈ ಮೊದಲು ನಿರ್ದೇಶಿಸಿದ್ದ ಕಳ್ಳರ ಸಂತೆ ಒಂದುಮಟ್ಟಿಗೆ ಯಶಸ್ವಿಯಾಗಿತ್ತು. ಹೀಗಾಗಿ ಸುಮನಾ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ. ಈಗ ಚಿತ್ರೀಕರಣ ಮುಗಿದಿದೆಯೆಂದು ಚಿತ್ರತಂಡ ಘೋಷಿಸಿರುವುದರಿಂದ ನಿರೀಕ್ಷೆ ಇಮ್ಮಡಿಯಾಗಿದೆ. ಇನ್ನೇನು ಬಿಡುಗಡೆಗೆ ಸ್ವಲ್ಪಕಾಲವಷ್ಟೇ ಬಾಕಿ.
ಮೊದಲು ನಾಯಕಿಯಾಗಿ ಸುಮನಾ ಕಿತ್ತೂರ್ ಆಯ್ಕೆಮಾಡಿದ್ದು ನಟಿ ಭಾವನಾಳನ್ನು. ಆದರೆ ಅನಾರೋಗ್ಯದ ಕಾರಣದಿಂದ ಭಾವನಾ ಈ ಚಿತ್ರದಿಂದ ಹಿಂದೆ ಸರಿಯಬೇಕಾಯಿತು. ಖಾಲಿಯಾದ ಭಾವನಾ ಜಾಗಕ್ಕೆ ಬಂದವರು 'ಒಲವೇ ಮಂದಾರ' ಖ್ಯಾತಿಯ ನಟಿ ಆಕಾಂಕ್ಷಾ. ಈ ಬದಲಾವಣೆ ಯಾವುದೇ ವಿವಾದ, ಮನಸ್ತಾಪಗಳಿಲ್ಲದೇ ನಡೆದಿದ್ದು ವಿಶೇಷ.
ಒಟ್ಟಿನಲ್ಲಿ, ಅಗ್ನಿ ಶ್ರೀಧರ್ ಕಥೆ, ಸಂಭಾಷಣೆ ಸುಮನಾ ನ್ಯಾಯ ಒದಗಿಸಿ ನಿರ್ದೇಶನ ಮಾಡಿದ್ದಾರೆ. ಆದಿತ್ಯ ಹಾಗೂ ಆಕಾಂಕ್ಷಾ ಜೋಡಿ ಚೆನ್ನಾಗಿ ನಟಿಸಿದೆ. ಮುಖ್ಯ ಪಾತ್ರವೊಂದರಲ್ಲಿ ಗುರುದತ್ ಮಿಂಚಿದ್ದಾರೆ. ಉಳಿದಂತೆ ಚಿತ್ರದ ಮೇಕಿಂಗ್ ತೀರಾ ಚೆನ್ನಾಗಿ ಬಂದಿದೆ. ಜನರಿಟ್ಟ ನಿರೀಕ್ಷೆಗೆ ಮೋಸವಾಗುವುದಿಲ್ಲ ಎಂಬ ಮಾಹಿತಿ ಚಿತ್ರತಂಡದಿಂದ ಬಂದಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











