ಕೋಮಲ್ 'ಲೊಡ್ಡೆ' ಅಡ್ಡೆಯಲ್ಲಿ ಆಕಾಂಕ್ಷ ಪುರಿ
ಈ ಬಾರಿ ಸೆನ್ಸೇಷನಲ್ ಸ್ಟಾರ್ ಕೋಮಲ್ ತಮ್ಮ ವರಸೆಯನ್ನು ಬದಲಾಯಿಸಿದಂತಿದೆ. ಈ ಸಲ ಅವರು ಹಾಸ್ಯದ ಜೊತೆಜೊತೆಗೆ ಒಂಚೂರು ಆಕ್ಷನ್ ಮಸಾಲೆಯನ್ನೂ ಅಂಶಗಳನ್ನೂ ಬೆರೆಸಿದ್ದಾರೆ. ಅವರ ಹೊಸ ಚಿತ್ರಕ್ಕೆ 'ಲೊಡ್ಡೆ' ಎಂದು ಹೆಸರಿಡಲಾಗಿದೆ. 'ಲೊಡ್ಡೆ' ಅಡ್ಡೆಗೆ ಬರುತ್ತಿರುವ ನಾಯಕಿ ಆಕಾಂಕ್ಷಾ ಪುರಿ.
ಈ ಹಿಂದೆ ಆಕಾಂಕ್ಷ ಅವರು ತಮಿಳಿನ 'ಅಲೆಕ್ಸ್ ಪಾಂಡಿಯನ್' ಹಾಗೂ ಮಲಯಾಳಂನ 'ಸಾಮ್ರಾಜ್ಯಂ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಲೊಡ್ಡೆ ಚಿತ್ರ ಆಕಾಂಕ್ಷ ಪಾಲಿಗೆ ಚೊಚ್ಚಲ ಕನ್ನಡ ಚಿತ್ರ. ಹಲವು ವಿಶೇಷಗಳ ಸಂಗಮವಾದ ಲೊಡ್ಡೆ ಚಿತ್ರ ಪಡ್ಡೆಗಳನ್ನು ಸೆಳೆಯುತ್ತಿದೆ.
ಚಿತ್ರದ ನಾಯಕಿ ಆಕಾಂಕ್ಷ ಹಗಲು ರಾತ್ರಿ ಮಳೆಯಲ್ಲಿ ನೆನೆದು ಮಳೆ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಜಯಂತ್ ಕಾಯ್ಕಿಣಿ ಅವರು ಬರೆದ "ಬಣ್ಣದ ಹೂವಿನ ಕೊಡೆಯನ್ನು ಬಿಚ್ಚಿದ ಗಿಡಗಳು ಮಳೆಯಲ್ಲಿ...." ಎಂಬ ಹಾಡಿಗೆ ಮೈಸೂರು, ಕೆಆರ್ಎಸ್, ಗಗನಚುಕ್ಕಿ ಭರಚುಕ್ಕಿ, ಬಲಮುರಿ, ಕೆಆರ್ಎಸ್ ನಾರ್ತ್ ಬ್ಯಾಂಕ್ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.ಇದೊಂದು ಸಂಪೂರ್ಣ ಮಳೆಯಲ್ಲೇ ಚಿತ್ರೀಕರಣವಾದ ಹಾಡು. ನಾಯಕಿಯ ಸಹಕಾರವನ್ನು ಅಂತ್ಯಂತ ಸಂತೋಷದಿಂದ ನಿರ್ಮಾಪಕ ಮಂಜುನಾಥ್ ಅವರು ಕೊಂಡಾಡಿದ್ದಾರೆ. ಈ ಒಂದು ಸುಂದರ ಗೀತೆಯನ್ನು ನೃತ್ಯ ನಿರ್ದೇಶನ ಮಾಡಿದವರು ತ್ರಿಭುವನ್ ಮಾಸ್ಟರ್.
ಶಯ್ಯಾಜಿ ಶಿಂಧೆ, ಗೋಪಿನಾಥ್ ಭಟ್ (ಬಾಬ್ಜಿ) ಹಾಗೂ ಇತರರು ಈ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ತಿರುಮಲಾ ಡೆವಲಪರ್ಸ್ ಅರ್ಪಿಸುವ ಉಲ್ಲಾಸ್ ಸಿನೆಮಾದ ಪ್ರಥಮ ಕಾಣಿಕೆ 'ಲೊಡ್ಡೆ'. ಕಥೆ ಹಾಗೂ ಸಂಭಾಷಣೆ ಎಂ ಎಸ್ ಶ್ರೀನಾಥ್ ಅವರದು. ಇವರು 'ರ್ಯಾಂಬೋ' ಹಾಗೂ 'ವಿಕ್ಟರಿ' ಚಿತ್ರಗಳಿಗೆ ನಿರ್ದೇಶನ ಹಾಗೂ ಕಥೆ ಒದಗಿಸಿರುವವರು. ಚಿತ್ರಕಥೆ ಹಾಗೂ ನಿರ್ದೇಶನವನ್ನು ಎಸ್ ವಿ ಸುರೇಶ್ ಅವರು ಮಾಡುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












