'ಪಿಕೆ' ಡೌನ್ಲೋಡ್ ಮಾಡಿ ಪೇಚಿಗೆ ಸಿಲುಕಿದ ಅಖಿಲೇಶ್
ಲಕ್ನೋ, ಜ. 2: ಭಾರೀ ನಿರೀಕ್ಷೆಯಿಂದ ಅಧಿಕಾರಕ್ಕೇರಿದ್ದ ಸದಾ ನಗುಮೊಗದ ಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಟೀಕೆ ಹಾಗೂ ಆರೋಪ ಎದುರಿಸಿದ್ದೇ ಹೆಚ್ಚು.
ಅಖಿಲೇಶ್ ಟೀಕೆಗೆ ಒಳಗಾಗುತ್ತಿರುವುದಕ್ಕೆ ಕಾರಣ ದೂರದೃಷ್ಟಿ ಕೊರತೆಯೋ ಅಥವಾ ಪ್ರಬುದ್ಧತೆ ಇಲ್ಲದಿರುವುದೋ ಗೊತ್ತಿಲ್ಲ. ಆದರೆ, ಅವರು ಮಾಡುವ ಕೆಲಸ, ಆಡುವ ಮಾತೆಲ್ಲವೂ ವಿವಾದಕ್ಕೊಳಗಾಗುತ್ತಿದೆ. ಈ ಎಲ್ಲ ಕಾರಣಗಳಿಂದ ರಾಜ್ಯದ ಜನತೆಯಲ್ಲಿ ಭರವಸೆ ಕಳೆದುಕೊಳ್ಳುತ್ತಿರುವ ಅಖಿಲೇಶ್ ಮತ್ತೆ ವಿವಾದಕ್ಕೆ ಈಡಾಗಿದ್ದಾರೆ. [ನೆಮ್ಮದಿ ಹಾಳುಗೆಡಹುವ ಚಲನಚಿತ್ರ ಯಾರಿಗೆ ಬೇಕು?]

ಆಗಿದ್ದೇನು? : ಅಮೀರ್ ಖಾನ್ ಅಭಿನಯದ ಪಿಕೆ ಹಿಂದಿ ಚಲನಚಿತ್ರ ಜನಪ್ರಿಯತೆ ಗಳಿಸುತ್ತಿರುವುದನ್ನು ಗಮನಿಸಿ ತೆರಿಗೆ ವಿನಾಯಿತಿ ಘೋಷಿಸಿದ್ದ ಅಖಿಲೇಶ್ ಎಡಪಂಥೀಯರಿಂದ ಶ್ಲಾಘನೆಗೊಳಗಾದಿದ್ದರು. ಆದರೆ, ಈಗ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳಲು ಹೋಗಿ ಪೇಚಿಗೆ ಸಿಲುಕಿದ್ದಾರೆ. ಅವರು ಹೇಳಿಕೊಂಡ ಮಾತೇ ವಿವಾದದ ಮೂಲ. [ಪಿಕೆ ಬೆಂಬಲಕ್ಕೆ ನಿಂತ ಅಖಿಲೇಶ್ ಯಾದವ್]
"ಅನೇಕರು ನನಗೆ ಪಿಕೆ ಚಲನಚಿತ್ರ ನೋಡುವಂತೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಆದ್ದರಿಂದ ಕೆಲವು ದಿನಗಳ ಹಿಂದೆ ಈ ಚಲನಚಿತ್ರವನ್ನು ಇಂಟರ್ನೆಟ್ನಿಂದ ಡೌನ್ಲೋಡ್ ಮಾಡಿಕೊಂಡಿದ್ದೆ. ಆದರೆ, ನೋಡಲು ಸಾಧ್ಯವಾಗಿರಲಿಲ್ಲ. ಬಿಡುವು ಸಿಕ್ಕಿದಾಗ ಆ ಚಲನಚಿತ್ರವನ್ನು ನೋಡಿದೆ. ಇದಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎನ್ನಿಸಿತು. ಕೂಡಲೇ ತೆರಿಗೆ ವಿನಾಯಿತಿ ಘೋಷಿಸಿದೆ" ಎಂದು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಇದೇ ಅವರಿಗೆ ತಿರುಗುಬಾಣವಾಗಿದೆ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಡಿ ಹಲವರಿಂದ ಟೀಕೆಗೊಳಗಾಯಿತು. "ಇಂಟರ್ನೆಟ್ನಿಂದ ಚಲಚನಚಿತ್ರ ಡೌನ್ಲೋಡ್ ಮಾಡುವುದು ಪೈರಸಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂಬುದು ಮುಖ್ಯಮಂತ್ರಿಯವರಿಗೆ ಗೊತ್ತಿಲ್ಲವೇ?" ಎಂದು ಹಲವರು ಪ್ರಶ್ನಿಸಿದ್ದಾರೆ. ಅಖಿಲೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದ್ದಾರೆ.
ಈ ವಿವಾದದಿಂದ ಅಖಿಲೇಶ್ ಹೇಗೆ ಪಾರಾಗ್ತಾರೆ ನೋಡಬೇಕು.


Click it and Unblock the Notifications











