ಮಗನನ್ನು ಕಂಡ ಅಂಬರೀಶ್ ಕಣ್ಣಲ್ಲಿ ಹೊಸ ಮಿಂಚು
ಕಳೆದ ಒಂದು ವಾರದಿಂದ ಬೆಂಗಳೂರು ಮಿಲ್ಲರ್ಸ್ ರಸ್ತೆಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಬರೀಶ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. ಶ್ವಾಸಕೋಶದ ಸೋಂಕಿನಿಂದ ಅವರು ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಅಂಬರೀಶ್ ಅವರ ಪುತ್ರ ಅಭಿಷೇಕ್ ಗೌಡ ಅವರು ವಿಕ್ರಂ ಆಸ್ಪತ್ರೆ ವೈದ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಅಂಬಿ ಆರೋಗ್ಯದ ಬಗ್ಗೆ ವಿವರ ನೀಡಿದರು. ಅಭಿಷೇಕ್ ಮಾತನಾಡುತ್ತಾ, "ಅಪ್ಪಾಜಿ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಅವರು ನನ್ನನ್ನು ಗುರುತಿಸಿದರು. ನನಗೆ ತುಂಬಾ ಖುಷಿಯಾಯಿತು" ಎಂದರು. [ಅಂಬರೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು]
"ಅವರ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಈಗ ಸಾಧ್ಯವಿಲ್ಲ. ಅಪ್ಪಾಜಿ ಬಗ್ಗೆ ತೋರಿದ ಪ್ರೀತಿ ಕಾಳಜಿಗೆ ನಾನು ನಾಡಿನ ಜನತೆಗೆ ಸದಾ ಚಿರಋಣಿ. ಅವರು ರೆಬೆಲ್ ಸ್ಟಾರ್, ಆದಷ್ಟು ಬೇಗ ಗುಣಮುಖರಾಗಿ ನಿಮ್ಮೆಲ್ಲರ ಮುಂದೆ ಬರುತ್ತಾರೆ" ಎಂದರು.ಅಂಬರೀಶ್ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶ್ವಾಸಕೋಶ, ಮೂತ್ರಪಿಂಡಗಳ ಸಮಸ್ಯೆಯನ್ನು ಎದುರಿಸುತ್ತಿರುವ ಕಾರಣ ದೇಶದ ತಜ್ಞ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸುತ್ತಿದ್ದೇವೆ. ಆರಂಭದ ದಿನಗಳಿಗೆ ಹೋಲಿಸಿದರೆ ಅವರ ಆರೋಗ್ಯ ಈಗ ಸಾಕಷ್ಟು ಸುಧಾರಿಸಿದೆ ಎಂದು ವಿಕ್ರಂ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಕೆ.ಎಸ್.ಸತೀಶ್ ವಿವರ ನೀಡಿದರು.
ಅವರು ಈಗ ಎಲ್ಲವನ್ನೂ ಗುರುತಿಸುತ್ತಿದ್ದು ಸಂಜ್ಞೆಯ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರ ಅಭಿಮಾನಿಗಳು ಗಾಬರಿಬೀಳುವ ಅಗತ್ಯವಿಲ್ಲ ಎಂದು ವೈದ್ಯರು ಮತ್ತೊಮ್ಮೆ ಸಮಾಧಾನಚಿತ್ತರಾಗಿ ಉತ್ತರಿಸಿದರು. (ಏಜೆನ್ಸೀಸ್)


Click it and Unblock the Notifications












