ಸೆಪ್ಟೆಂಬರ್ 29 ರಂದು 'ಅಂಬರ್ ಕ್ಯಾಟರರ್ಸ್' ಧ್ವನಿಸುರುಳಿ ಬಿಡುಗಡೆ
ಮಂಗಳೂರು: ನಾಗೇಶ್ವರ ಸಿನಿ ಕಂಬೈನ್ಸ್ ನಲ್ಲಿ ತಯಾರಾಗಿರುವ ಬಿಗ್ ಬಜೆಟ್ 'ಅಂಬರ್ ಕ್ಯಾಟರರ್ಸ್' ಸಿನಿಮಾದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಸೆಪ್ಟೆಂಬರ್ 29 ರಂದು ಶುಕ್ರವಾರ ಸಂಜೆ 4 ಗಂಟೆಗೆ ಅಸೈಗೋಳಿಯಲ್ಲಿರುವ ಅಭಯಾಶ್ರಮದಲ್ಲಿ ನಡೆಯಲಿದೆ.
ಸುರೇಶ್.ಎಸ್.ಭಂಡಾರಿ ನಿರ್ಮಾಪಕರಾಗಿದ್ದು, ಈ ಸಿನಿಮಾವನ್ನು ಜೈಪ್ರಸಾದ್ ನಿರ್ದೇಶಿಸಿದ್ದಾರೆ. ಸೌರಭ ಭಂಡಾರಿ ಚಿತ್ರದ ನಾಯಕ ನಟರಾಗಿದ್ದು, ನಾಯಕಿಯಾಗಿ ಸಿಂಧು ಲೋಕನಾಥ್ ಕಾಣಿಸಿಕೊಂಡಿದ್ದಾರೆ. ಇನ್ನೂ ಚಿತ್ರದ ತಾರಾಬಳಗದಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಮೊದಲಾದವರಿದ್ದಾರೆ.

ಸೀಮಿತ ಟಾಕೀಸ್, ಸೀಮಿತ ಮಾರುಕಟ್ಟೆ, ಸೀಮಿತ ವೀಕ್ಷಕರು ಇರುವುದರಿಂದ ತುಳು ಚಿತ್ರಗಳು ಕೂಡ ಸೀಮಿತ ಬಜೆಟ್ ನಲ್ಲಿಯೇ ನಿರ್ಮಾಣವಾಗುತ್ತವೆ. ಬಜೆಟ್ ಕಾರಣದಿಂದಾಗಿ ಬೇರೆ ಭಾಷೆಯಲ್ಲಿ ಕಾಣುವ ಅದ್ಧೂರಿತನ ಇಲ್ಲಿ ಸಿಗುವುದಿಲ್ಲ. ಈ ಕೊರತೆಯನ್ನ ನೀಗಿಸಲು ಬರುತ್ತಿದೆ 'ಅಂಬರ್ ಕ್ಯಾಟರರ್ಸ್'.
ಉದ್ಯಮಿ ಸುರೇಶ್ ಭಂಡಾರಿ ತನ್ನ ಪುತ್ರ ಸ್ವರೂಪ್ ಭಂಡಾರಿಯನ್ನು ನಾಯಕನನ್ನಾಗಿ ಪರಿಚಯಿಸಲು ನಿರ್ಮಿಸುತ್ತಿರುವ 'ಅಂಬರ್ ಕ್ಯಾಟರರ್ಸ್'ನಲ್ಲಿ ಹೀರೋ ಎಂಟ್ರಿಯೇ ಸೂಪರ್ ಆಗಿರಲಿದೆ.
ಹೀರೋ ಎಂಟ್ರಿ ಹಾಡಿಗೆ ಬರೋಬ್ಬರಿ 17 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಖರ್ಚು-ವೆಚ್ಚದ ಲೆಕ್ಕ ಇಲ್ಲಿಗೆ ಮುಗಿಯುವುದಿಲ್ಲ. ತುಳು ಚಿತ್ರಗಳಲ್ಲಿ ಸ್ಟಂಟ್, ಫೈಟ್ ಗಳಿರುವುದೇ ಕಡಿಮೆ, ಇದ್ದರೂ ನೆಪಕ್ಕಷ್ಟೇ. ಆದರೆ 'ಅಂಬರ್ ಕ್ಯಾಟರರ್ಸ್'ನಲ್ಲಿ ಒಂದೇ ಒಂದು ಫೈಟ್ ಗಾಗಿ ಐದು ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.
ಯಾವ ಕನ್ನಡ ಚಿತ್ರಕ್ಕೂ ಕಮ್ಮಿ ಇಲ್ಲದಂತೆ 'ಅಂಬರ್ ಕ್ಯಾಟರರ್ಸ್' ತಯಾರಾಗಿದೆ. ಈ ಅದ್ದೂರಿ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಕಾರ್ಯಕ್ರಮದ ಸಿದ್ಧತೆಗಳು ನಡೆಯುತ್ತಿವೆ. ಇದೂ ಕೂಡ ಅದ್ಧೂರಿಯಾಗಿಯೇ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳು ಪ್ರೇಕ್ಷಕರ ಕಿವಿಗೆ ಇಂಪು ನೀಡಲಿದೆ ಎನ್ನುವುದು ಚಿತ್ರತಂಡದ ಮಾತು. ಅಕ್ಟೋಬರ್ ನಲ್ಲಿ 'ಅಂಬರ್ ಕ್ಯಾಟರರ್ಸ್' ಬಿಡುಗಡೆ ಆಗುವ ಸಾಧ್ಯತೆ ಇದೆ.


Click it and Unblock the Notifications











