ಡ್ರಗ್ಸ್ ಪ್ರಕರಣ: ಮಂಗಳೂರು CCB ಅಧಿಕಾರಿಗಳ ಮುಂದೆ ಹಾಜರಾದ ಅನುಶ್ರೀ
ಡ್ರಗ್ಸ್ ಪ್ರಕರಣ ಸಂಬಂಧ ನಿರೂಪಕಿ ಮತ್ತು ನಟಿ ಅನುಶ್ರೀ ಇಂದು ಶನಿವಾರ ಮಂಗಳೂರು ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಮತ್ತು ನಟ ಕಿಶೋರ್ ಶೆಟ್ಟಿ ಹೇಳಿಕೆ ಆಧರಿಸಿ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ನಿನ್ನೆ (ಸೆಪ್ಟಂಬರ್ 25) ವಿಚಾರಣೆಗೆ ಹಾಜರಾವುದಾಗಿ ಹೇಳಿದ್ದ ಅನುಶ್ರೀ ಗೈರಾಗಿದ್ದರು.
ವಿಚಾರಣೆಯಲ್ಲಿ ಇಂದು ಸಿಸಿಬಿ ಪೊಲೀಸರು ಕಿಶೋರ್ ಶೆಟ್ಟಿ ಮತ್ತು ತರುಣ್ ಜೊತೆಗಿನ ನಂಟಿನ ಬಗ್ಗೆ ಅನುಶ್ರೀ ಅವರನ್ನು ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಕಿಶೋರ್ ಶೆಟ್ಟಿ ಆಪ್ತ ತರುಣ್, ಅನುಶ್ರೀ ಜೊತೆ ಪಾರ್ಟಿ ಮಾಡಿರುವುದಾಗಿ ಹೇಳಿಕೆ ನೀಡಿದ ಹಿನ್ನಲೆ ಅನುಶ್ರೀಯನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗುತ್ತಿದೆ.
ಸಿಸಿಬಿ ನೋಟಿಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅನುಶ್ರೀ, 'ಇದು ಕೇವಲ ವಿಚಾರಣೆ ಅಷ್ಟೆ, ಆದರೆ ಅಪರಾಧಿ ಎನ್ನುವ ಹಾಗೆ ಬಿಂಬಿಸಲಾಗುತ್ತಿದೆ. ಈ ಪ್ರಕರಣದಲ್ಲಿ ನನ್ನ ಪಾತ್ರವೇನು ಇಲ್ಲ, ವಿಚಾರಣೆ ಕರೆದ ಕೂಡಲೆ ಅಪರಾಧಿ ಎಂದಲ್ಲ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

'ಪೊಲೀಸರಿಗೆ ನಾನು ನನಗೆ ತಿಳಿದ ಮಾಹಿತಿ ನೀಡಿ, ಸಂಪೂರ್ಣ ಸಹಕರಿಸುತ್ತೇನೆ. ಮಾಧ್ಯಮಗಳು ತಪ್ಪು ವರದಿ ಪ್ರಸಾರ ಮಾಡಬೇಡಿ, ಅಪರಾಧಿ ಎಂದು ಬಿಂಬಿಸಬೇಡಿ' ಎಂದು ಅನುಶ್ರೀ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಬಂಧಿತ ತರಣ್ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅನುಶ್ರೀ, ತರುಣ್ ಕೇವಲ ನನ್ನ ಕೊರಿಯೋಗ್ರಾಫರ್ ಅಷ್ಟೆ ಎಂದಿದ್ದಾರೆ. ಕಿಶೋರ್ ಮತ್ತು ತರುಣ್ ಸಿಕ್ಕಿ ಮೂರು ವರ್ಷಗಳಾಯ್ತು ಎಂದಿದ್ದಾರೆ. ವಿಚಾರಣೆಯಲ್ಲಿ ಅನುಶ್ರೀ ಯಾವೆಲ್ಲ ವಿಚಾರಗಳನ್ನು ಬಹಿರಂಗಪಡಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications











