'ರಣವಿಕ್ರಮ' ನಡುವೆ 'ರನ್ನ'ನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಸಿನಿಮಾ ಇಂದು ರಾಜ್ಯದಾದ್ಯಂತ ತೆರೆಗೆ ಬಂದಿದೆ. ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕೆ ಮುಖ್ಯ ಚಿತ್ರಮಂದಿರ ಬೆಂಗಳೂರಿನ ಸಂತೋಷ್ ನಲ್ಲಿ ಅಭಿಮಾನಿ ವೃಂದ ತುಂಬಿ ತುಳುಕುತ್ತಿದೆ.
'ರಣವಿಕ್ರಮ'ನ ಪರಾಕ್ರಮ ನೋಡಿ ಸಂಭ್ರಮ ಪಡುತ್ತಿರುವಾಗಲೇ, ಸಂತೋಷ್ ಚಿತ್ರಮಂದಿರದ ಆಡಳಿತ ಮಂಡಳಿ ಮಾಡಿದ ಎಡವಟ್ಟಿಗೆ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. 'ರಣವಿಕ್ರಮ' ಚಿತ್ರದ ಇಂಟರ್ವಲ್ ಸಮಯದಲ್ಲಿ ಸಂತೋಷ್ ಥಿಯೇಟರ್ ನಲ್ಲಿ 'ರನ್ನ' ಚಿತ್ರದ ಟೀಸರ್ ಪ್ರದರ್ಶನ ಮಾಡಲಾಗಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕೈಗೆ ಸಿಕ್ಕ ಕೂಲ್ ಡ್ರಿಂಕ್ ಬಾಟಲ್ ಗಳನ್ನ ಪ್ರೊಜೆಕ್ಟರ್ ರೂಮ್ ಗೆ ಎಸೆದು, ಗಾಜನ್ನ ಪುಡಿ ಪುಡಿ ಮಾಡಿದ್ದಾರೆ. ಅಲ್ಲದೆ, ಕೆಲವರು ಪ್ರೊಜೆಕ್ಟರ್ ರೂಮಿಗೆ ನುಗ್ಗಿ ಪೀಠೋಪಕರಣಗಳನ್ನ ಧ್ವಂಸ ಮಾಡಿದ್ದಾರೆ. ['ರಣವಿಕ್ರಮ'ನ ಪರಾಕ್ರಮ ನೋಡೋಕೆ ನೂಕು ನುಗ್ಗಲು]

ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ ಟೀಸರ್ ಪ್ರದರ್ಶನ ತಕ್ಷಣ ನಿಲ್ಲುಸುವಂತೆ ಅಭಿಮಾನಿಗಳ ರಂಪಾಟ ಜೋರಾದ್ದರಿಂದ ಸಂತೋಷ್ ಚಿತ್ರಮಂದಿರದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಯಿತು.
ಈ ಗದ್ದಲದಲ್ಲಿ 'ಖುಷಿ ಖುಷಿಯಾಗಿ' ನಿರ್ದೇಶಕ ಯೋಗಿ ಅವರ ತಲೆಗೆ ಪೆಟ್ಟು ಬಿದ್ದಿದೆ. ಪ್ರೊಜೆಕ್ಟರ್ ರೂಮಿನ ಕಡೆ ಅಭಿಮಾನಿಗಳು ಗ್ಲಾಸ್ ಬಾಟಲ್ ಗಳನ್ನ ತೂರುತ್ತಿದ್ದಾಗ, ಅಲ್ಲೇ ಕೂತಿದ್ದ ಯೋಗಿ ತಲೆಗೆ ಬಾಟಲ್ ವೊಂದು ಬಿದ್ದ ಪರಿಣಾಮ ತಲೆಗೆ ಏಟು ಬಿದ್ದಿದೆ. ['ರಣವಿಕ್ರಮ' ಕುರಿತ ಹೇಳಲೇಬೇಕಾದ ವಿಚಾರಗಳು]
ಇಷ್ಟೆಲ್ಲಾ ರಾದ್ಧಾಂತವನ್ನ ನೋಡಿ 'ರನ್ನ' ಚಿತ್ರದ ಟೀಸರ್ ನಿಲ್ಲಿಸಿದ ಥಿಯೇಟರ್ ಆಡಳಿತ ಮಂಡಳಿ, ಪರಿಸ್ಥಿತಿಯನ್ನ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ. ಇದರಿಂದ ಮಧ್ಯಂತರದ ನಂತರ ಭಾಗ 10 ನಿಮಿಷ ತಡವಾಗಿ ಆರಂಭವಾಗಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











