'ಆಪ್ತಮಿತ್ರರು' ಚಿತ್ರದ ನಟ ಕಾರ್ತಿಕ್ ವಿಕ್ರಂ ಮೇಲೆ ಹಲ್ಲೆ !
ಸ್ಯಾಂಡಲ್ ವುಡ್ ಯುವ ನಟ 'ಆಪ್ತಮಿತ್ರರು' ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕಾರ್ತಿಕ್ ವಿಕ್ರಂ ಮೇಲೆ ಹಲ್ಲೆ ನಡೆದಿದೆ. ನಿನ್ನೆ ತಡರಾತ್ರಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ಸದ್ಯ ವಿಕ್ರಂ ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಟ ಕಾರ್ತಿಕ್ ವಿಕ್ರಂ ನಿನ್ನೆ ರಾತ್ರಿ ಬಸವೇಶ್ವರ ನಗರದ ವಾಟರ್ ಟ್ಯಾಂಕ್ ಬಳಿ ಬರುತ್ತಿರುವಾಗ ಏಳು ಜನರ ತಂಡ ಅವರ ಮೇಲೆ ಅಡ್ಯಾಕ್ ಮಾಡಿದೆ. ಕಾರ್ತಿಕ್ ಮೇಲೆ ಹಲ್ಲೆ ಮಾಡಿದ ದುಷ್ಕಮಿಗಳು ಅವರ ಕಾರ್ ಕೀ, ಮೊಬೈಲ್ ಕಿತ್ತುಕೊಂಡು ಪರಾರಿ ಆಗಿದ್ದಾರೆ. ಕಾರ್ತಿಕ್ ಕಿವಿಯ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದೆ. ತಮ್ಮ ಗೆಳೆಯನನ್ನು ಮನೆಗೆ ಡ್ರಾಪ್ ಮಾಡಿ ಬರುವಾಗ ಈ ಘಟನೆ ನಡೆದಿದೆ. ಸದ್ಯ ಆಸ್ಪತ್ರೆಯಲ್ಲಿ ಕಾರ್ತಿಕ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಸವೇಶ್ವರ ನಗರ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ಅಂದಹಾಗೆ, ಕಾರ್ತಿಕ್ ವಿಕ್ರಂ 'ಆಪ್ತಮಿತ್ರರು' ಎಂಬ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲು ಈ ಸಿನಿಮಾಗೆ 'ಆಪ್ತಮಿತ್ರ 2' ಎಂದು ಹೆಸರಿಡಲಾಗಿದ್ದು, ನಂತರ ಅದನ್ನು ಆಪ್ತಮಿತ್ರರು' ಎಂದು ಬದಲಿಸಲಾಗಿತ್ತು. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ತಮ್ಮ ಸಿನಿಮಾದ ಬಿಡುಗಡೆಯ ಕೆಲಸದಲ್ಲಿ ತೋಡಗಿದ್ದ ಕಾರ್ತಿಕ್ ಮೇಲೆ ಈಗ ಇದ್ದಕ್ಕಿದ್ದ ಹಾಗೆ ಹಲ್ಲೆಯ ಘಟನೆ ನಡೆದಿದೆ.


Click it and Unblock the Notifications











