ಕಾರವಾರ ಬೀಚ್ ಸ್ವಚ್ಛ ಮಾಡಿದ ನಟ ಅರುಣ್ ಸಾಗರ್
ಕಾರವಾರ ನಗರದಲ್ಲಿ ಪ್ರತಿ ವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ಇಂದಿಗೆ ಆರು ವರ್ಷಗಳನ್ನು ಪೂರೈಸಿದೆ. ವಿಶೇಷ ಎಂದರೆ ಈ ದಿನದ ಸ್ವಚ್ಛತಾ ಕಾರ್ಯದಲ್ಲಿ ನಟ ಅರುಣ್ ಸಾಗರ್ ಕೂಡ ಭಾಗವಹಿಸಿದ್ದರು.
ಕಾಳಿ ಸಂಗಮದ ಕಡಲತೀರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು. ಬಳಿಕ ನೂರಾರು ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಇದೇ ವೇಳೆ ನಟ ಅರುಣ್ ಸಾಗರ್ ಕೂಡ ಪಾಲ್ಗೊಂಡು ಕಡಲ ತೀರದ ತ್ಯಾಜ್ಯಗಳನ್ನು ಆಯ್ದರು. ಬೆಳಿಗ್ಗೆ 7.15ರಿಂದ ಆರಂಭವಾದ ಈ ಕಾರ್ಯ ಸತತ ಮೂರು ಸತತ ಮೂರು ಗಂಟೆಗಳ ಕಾಲ ನಡೆದಿದ್ದು, ಒಂದು ಲಾರಿಯಷ್ಟು ತ್ಯಾಜ್ಯ ಸಂಗ್ರಹ ಮಾಡಲಾಯಿತು. ಇದರಲ್ಲಿ ಹೆಚ್ಚಾಗಿ, ಪ್ಲಾಸ್ಟಿಕ್ ಬಾಟಲಿ, ಕವರ್ ಗಳು ಮತ್ತು ಬಿಯರ್ ಬಾಟಲಿಗಳೇ ತುಂಬಿತ್ತು.
ಕಾರ್ಯಕರ್ತರಿಗೆ ಗ್ಲೌಸ್, ಸ್ವಚ್ಛತಾ ಪರಿಕರ, ಸ್ಯಾನಿಟೈಸರ್ ಗಳನ್ನು ನೀಡಲಾಗಿತ್ತು. ಈ ವೇಳೆ ಪಹರೆಯ ಕಾರ್ಯ ಶ್ಲಾಘಿಸಿದ ಅರುಣ್ ಸಾಗರ್, ಟ್ಯಾಗೋರ್ ನಡೆದಾಡಿದಂಥ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ಸಂತೋಷವೆನಿಸಿತು. ಇದು ನನ್ನ ಜೀವನದ ಒಳ್ಳೆಯ ದಿನಗಳಲ್ಲಿ ಒಂದು ಎಂದು ಹೇಳಿದ್ದಾರೆ.

ಜಾತಿ-ಮತ, ಪಕ್ಷ-ಭೇದ ಮರೆತು, ಭಾರತೀಯರಾಗಿ ಸ್ವಚ್ಛ ಭಾರತಕ್ಕೆ ಅರ್ಥ ಕೊಟ್ಟಿದ್ದಾರೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತ್ಯಾಜ್ಯಗಳನ್ನು ಹಾಗೆಯೇ ಎಸೆದು ಹೋಗುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.


Click it and Unblock the Notifications











