ಪರಿಸರದ ಮಹಾಶತ್ರು ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತಿದೆ ಡಾ.ರಾಜ್ ಕುಟುಂಬ
ಸಮಾಜದ ಪರ ಚಿಂತನೆಗಳನ್ನು ಹೊಂದಿದ್ದ ಡಾ.ರಾಜ್ ಕುಮಾರ್ ರವರ ವಿಚಾರಧಾರೆಗಳನ್ನು ಅವರ ಕುಟುಂಬ ಚಾಚು ತಪ್ಪದೆ ಪಾಲಿಸುತ್ತಾ ಬಂದಿದೆ. ತಮ್ಮ ಟ್ರಸ್ಟ್ ನ ಮುಖಾಂತರ ಈಗಾಗಲೇ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಅಣ್ಣಾವ್ರ ಮಕ್ಕಳು ಇದೀಗ ಜನರಿಗೆ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಲು ಸಜ್ಜಾಗಿದೆ.
ಪರಿಸರ ಸಂರಕ್ಷಣೆಗೆ ಮುಂದಾಗಿರುವ ಡಾ.ರಾಜ್ ಕುಮಾರ್ ಮಕ್ಕಳು, ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಬ್ಯಾಗುಗಳನ್ನು ಬಳಸುವಂತೆ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಕರೆ ಕೊಟ್ಟಿದೆ.
''ನಾಳಿನ ಭಾರತ ನಿರ್ಮಾಣದ ಸ್ವಚ್ಛತೆಯ ನಡೆಗೆ ನಮ್ಮದೊಂದು ಪ್ರಯತ್ನ'' ಎನ್ನುತ್ತ ಡಾ.ರಾಜ್ ಕುಮಾರ್ ರವರ ಭಾವಚಿತ್ರವುಳ್ಳ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳನ್ನು ಅಣ್ಣಾವ್ರ ಮಕ್ಕಳು ಸಿದ್ಧಪಡಿಸಿದ್ದಾರೆ.
ಅಸಲಿಗೆ, ಈ ಬಟ್ಟೆ ಬ್ಯಾಗುಗಳ ಐಡಿಯ ಮೊದಲು ಹೊಳೆದಿದ್ದು ರಾಘವೇಂದ್ರ ರಾಜ್ ಕುಮಾರ್ ಗೆ. ರಾಘಣ್ಣನ ಐಡಿಯಗೆ ಮನಸೋತು ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಕೂಡ ಕೈಜೋಡಿಸಿದ್ದಾರೆ.

ಪ್ಲಾಸ್ಟಿಕ್ ನ ಸಂಪೂರ್ಣವಾಗಿ ನಿವಾರಿಸಲು ಮೊದಲ ಹೆಜ್ಜೆ ಬಟ್ಟೆ ಬ್ಯಾಗ್ ಗಳನ್ನು ಬಳಸುವುದು ಎಂಬುದು ಅಣ್ಣಾವ್ರ ಮಕ್ಕಳ ಅಭಿಪ್ರಾಯ. ಡಾ.ರಾಜ್ ಕುಮಾರ್ ಮನೆಗೆ, ಕಛೇರಿಗೆ, ಅಕಾಡೆಮಿಗೆ ಬರುವವರಿಗೆ ಸದ್ಯ ಈ ಬ್ಯಾಗ್ ಗಳು ಸಿಗಲಿವೆ. ಎಲ್ಲರಿಗೂ ಈ ಬ್ಯಾಗ್ ಗಳು ಸಿಗುವಂತೆ ವಿತರಣೆ ಮಾಡಲು ಅಣ್ಣಾವ್ರ ಮಕ್ಕಳು ಪ್ಲಾನ್ ಮಾಡಿದ್ದಾರೆ.
ಶಬರಿಮಲೆಗೆ ಹೋದಾಗಲೂ ಬ್ಯಾಗ್ ಗಳನ್ನು ವಿತರಿಸಲು ಅಣ್ಣಾವ್ರ ಕುಟುಂಬ ತಯಾರಾಗಿದೆ. ಅಣ್ಣಾವ್ರ ಹೆಸರಿನಲ್ಲಿ ಈ ಒಳ್ಳೆಯ ಕೆಲಸ ಶುರುವಾದರೆ, ಅದನ್ನ ಎಲ್ಲರೂ ಪಾಲಿಸುತ್ತಾರೆ ಎಂಬ ನಂಬಿಕೆ ಅವರ ಮಕ್ಕಳಿಗಿದೆ.


Click it and Unblock the Notifications











