ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ ನಟ ಚೇತನ್
ದಾವಣಗೆರೆಗೆ ಆಗಮಿಸಿದ್ದ ಆ ದಿನಗಳು ಸಿನಿಮಾ ನಾಯಕ ನಟ ಖ್ಯಾತಿಯ ಚೇತನ್ ಮತಾಂತರ ನಿಷೇಧ ವಿಧೇಯಕ ಕಾಯ್ದೆ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆ ಮಂಡನೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತಾಂತರ ನಿಷೇಧ ವಿಧೇಯಕ ಕಾಯ್ದೆ ಜಾರಿಗೆ ಮುಂದಾಗಿರುವುದನ್ನು ಗಮನಿಸಿದರೆ ಕರ್ನಾಟಕ ಇತಿಹಾಸದಲ್ಲೇ ಅತ್ಯಂತ ಕೋಮುವಾದಿ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಜನತಾ ಪರಿವಾರದಿಂದ ಬಂದವರು. ಜಾತ್ಯಾತೀತ ವಿಚಾರಗಳಲ್ಲಿ ನಂಬಿಕೆ ಇಟ್ಟವರು. ಪ್ರಗತಿಪರ ಚಿಂತನೆಯುಳ್ಳವರು ಎಂಬ ಅಭಿಪ್ರಾಯ ನಮ್ಮೆಲ್ಲರಲ್ಲಿಯೂ ಇತ್ತು. ಅವರು ಸಿಎಂ ಆಗಿದ್ದಾಗ ಸಾಕಷ್ಟು ವಿಶ್ವಾಸ, ನಂಬಿಕೆ ಇತ್ತು. ಅತ್ಯುತ್ತಮ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವೂ ಇತ್ತು. ಆದರೆ, ಈಗ ಅವರು ನಡೆದುಕೊಳ್ಳುತ್ತಿರುವ ರೀತಿ ಗಮನಿಸಿದರೆ ಅವರೊಬ್ಬ ಕೋಮುವಾದಿ ಮುಖ್ಯಮಂತ್ರಿ'' ಎಂದು ಆರೋಪಿಸಿದರು.
''ಬಸವರಾಜ ಬೊಮ್ಮಾಯಿ ಅವರ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ಪ್ರಗತಿಪರ ವಿಚಾರಗಳಲ್ಲಿಯೂ ಹೆಸರು ಗಳಿಸಿದ್ದರು. ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದರು. ಒಳ್ಳೆಯ ರಾಜಕಾರಣಿ ಎನಿಸಿಕೊಂಡಿದ್ದರು. ನಾವು ಸಹ ತಂದೆ ಹಾದಿಯಲ್ಲಿಯೇ ಬೊಮ್ಮಾಯಿ ಅವರು ಕೆಲಸ ಮಾಡುತ್ತಾರೆ ಎಂಬುದು ಸುಳ್ಳಾಗಿದೆ. ಆರ್ ಎಸ್ ಎಸ್ ನವರು ಹೇಳಿದ ರೀತಿಯಲ್ಲಿ ಮತಾಂತರ ನಿಷೇಧ ವಿಧೇಯಕ ಜಾರಿಗೆ ಮುಂದಾಗಿರುವುಕ್ಕೆ ನಮ್ಮ ವಿರೋಧ ಇದೆ'' ಎಂದು ಹೇಳಿದ್ದಾರೆ.

''ಮತಾಂತರ ನಿಷೇಧ ಕಾಯ್ದೆ ವಿಧೇಯಕ ಅನ್ನೋದೇ ಅಸಂವಿಧಾನಿಕ. ಧರ್ಮ ಆಯ್ಕೆ ಮಾಡಿಕೊಳ್ಳುವ ಹಕ್ಕು ಆರ್ಟಿಕಲ್ 25, 28ರಲ್ಲಿದೆ. ಹೀಗಿದ್ದಾಗ ಮತಾಂತರ ನಿಷೇಧ ಅನ್ನೋ ಪ್ರಶ್ನೆ ಎಲ್ಲಿ ಬರುತ್ತೆ'' ಎಂದು ಪ್ರಶ್ನಿಸಿದ್ದಾರೆ.
''ಎಲ್ಲರಿಗೂ ಅವರದ್ದೇಯಾದ ಹಕ್ಕಿದೆ. ಬಸವಣ್ಣನವರ ಅವರದ್ದೇ ಆದ ಸ್ವಂತ ಧರ್ಮ ಕಟ್ಟಿದರು. ಅಂಬೇಡ್ಕರ್ 4 ಲಕ್ಷ ಜನರೊಂದಿಗೆ ಬೌದ್ದ ಧರ್ಮ ಸೇರಿದರು. ಇವೆಲ್ಲಾ ನಮ್ಮ ಅಡಿಪಾಯದಲ್ಲಿದೆ. ಬಲವಂತದ ಮತಾಂತರಕ್ಕೆ ಕಾನೂನು ರೀತಿ ಕ್ರಮವನ್ನು ಕೈಗೊಳ್ಳಬಹುದು. ಮತಾಂತರ ನಿಷೇಧ ಕಾಯ್ದೆ ಕ್ರಿಶ್ಚಿಯನ್ ರನ್ನ ಗುರಿಯಾಗಿಸಿಕೊಂಡು ಜಾರಿಗೆ ತಂದಿರೋ ಕಾಯ್ದೆಯಾಗಿದೆ. ಈ ರೀತಿ ಹೆದರಿಸೋದು, ಬೆದರಿಸೋದು ಸರಿಯಲ್ಲ'' ಎಂದು ಹೇಳಿದರು.
ದೇವದಾಸಿಯರ ಬದುಕು ಹಸನಿಗಾಗಿ ಹೋರಾಟ
ಇನ್ನು ಕರ್ನಾಟಕದ ರಾಜ್ಯದಲ್ಲಿನ ದೇವದಾಸಿಯರ ಬದುಕು ಹಸನಾಗಿಸಲು ಹಾಗೂ ಅವರಿಗೊಂದು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದೇನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿನ
ದೇವದಾಸಿಯರನ್ನು ಭೇಟಿ ಮಾಡಿ ಸಂಕಷ್ಟ ಆಲಿಸಿದ್ದೇನೆ. ಅವರಿಗಾಗಿರುವ ಸಮಸ್ಯೆಗಳು, ಎದುರಿಸುತ್ತಿರುವ ಸವಾಲುಗಳು, ಸರಿಯಾಗಿ ಸಿಗದ ಮಾಸಾಶನ, ಕಷ್ಟ ಹೀಗೆ ಎಲ್ಲಾ ರೀತಿಯಲ್ಲಿ ಸಮಾಲೋಚನೆ ಮಾಡಿದ್ದೇನೆ. ದೇವದಾಸಿ ತಾಯಂದಿರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ದೇವದಾಸಿಯರಿಗೆ ಶಾಶ್ವತ ಪರಿಹಾರ ಸಿಗಬೇಕು. ಅವರ ಮಕ್ಕಳಿಗೆ ಈಗಲೂ ಸಮಾಜದಲ್ಲಿ ಸೂಕ್ತಸ್ಥಾನ, ಘನತೆ ಇಲ್ಲದಂತಾಗಿದೆ. ನಿಕೃಷ್ಟವಾಗಿ ಅವರನ್ನು ಕಾಣಲಾಗುತ್ತಿದೆ. ಅವರಿಗೆ ಇರಲು ಒಂದು ಮನೆಯೂ ಇಲ್ಲ, ಇನ್ನು ತಿಂಗಳಿಗೆ ನೀಡುವ ಒಂದೂವರೆ ಸಾವಿರ ರೂಪಾಯಿ ಮಾಸಾಶನವೂ ಸರಿಯಾಗಿ ಬರುತ್ತಿಲ್ಲ. ಈ ಹಣವನ್ನು ಐದು ಸಾವಿರ ರೂಪಾಯಿಗೆ ಹೆಚ್ಚಿಸಬೇಕು. ದೇವದಾಸಿಯರಿಗೆ ಸೂರು ಕಲ್ಪಿಸಿಕೊಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಸಮಾಜದಲ್ಲಿ ಉತ್ತಮ ಸ್ಥಾನಮಾನಗಳು ಸಿಗುವಂತಾಗಬೇಕು ಎಂಬುದೂ ಸೇರಿದಂತೆ ಇವರ ಬದುಕು ಬೆಳಗುವಂತೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ. ಇನ್ನು ಎಲ್ಲೆಡೆ ಓಡಾಡಿ ಸಂಕಷ್ಟ ಆಲಿಸಿ ಬಳಿಕ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಭೇಟಿ ಮಾಡಿ ದೇವದಾಸಿಯರ ಶ್ರೇಯೋಭಿವೃದ್ಧಿಗೆ ಇರುವ 2018 ರ ಕಾಯ್ದೆ ಜಾರಿಗೊಳಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.


Click it and Unblock the Notifications











