'ಪೊಲೀಸ್ ವೈಭವೀಕರಣ': ಕಮೀಷನರ್ ರವಿಕಾಂತೇಗೌಡ ಹೇಳಿದ 'ಸಿಂಗಂ'ಗಳ ಕತೆ
ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಗಳ ವೈಭವೀಕರಣ ದಶಕಗಳಿಂದಲೂ ನಡೆಯುತ್ತಲೇ ಬಂದಿದೆ. ಎಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ಇದು ತೀರಾ ಸಾಮಾನ್ಯ. ಆದರೆ ಇದರಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮ ಅಷ್ಟೇನು ಹಿತಕರವಲ್ಲ.
ಈ ಬಗ್ಗೆ ಮಾತನಾಡಿದರು ಜಂಟಿ ಪೊಲೀಸ್ ಕಮೀಷನರ್ ರವಿಕಾಂತೇಗೌಡ, 'ಸಿಂಗಂ', 'ಸಿಂಹಿಣಿ'ಗಳ ಬಗ್ಗೆ ಎಚ್ಚರಿದಿಂದಿರಿ ಎಂದಿದ್ದಾರೆ. ಜನ ಸೇವಕನಾಗಿರಬೇಕಿದ್ದ ಕೆಲವು ಪೊಲೀಸ್ ಅಧಿಕಾರಿಗಳು ಸಿನಿಮಾಗಳ ಪ್ರಭಾವದಿಂದ 'ನಾಯಕ'ನಾಗಲು ಹೊರಟಿರುವ ಬಗ್ಗೆ ರವಿಕಾಂತೇಗೌಡ ಈ ಎಚ್ಚರಿಕೆ ಮಾತುಗಳನ್ನು ಹೇಳಿದ್ದಾರೆ.
ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮೂಲಕ ಹಂಚಿಕೊಂಡಿರುವ ರವಿಕಾಂತೇಗೌಡ, 'ಅಧಿಕಾರಿಶಾಹಿ ಬ್ರಿಟಿಷಶಾಹಿ ಮನೋಭಾವದಿಂದ ಆಚೆಬಾರದೆ ವಿಜೃಂಭಿಸುತ್ತಿರುವುದು ಢಾಳಾಗಿ ಅದು ಮಜಾಶಾಹಿಯಾಗಿ ಸಾರ್ವಜನಿಕ ಹಣವನ್ನು ದುಂದು ಮಾಡಿದರೂ ಭೇಷ್ ಎನಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಒಬ್ಬ ಅಧಿಕಾರಿಯಾಗಿ ನಿಮ್ಮೊಂದಿಗೆ ಈ ಮಾತು. ಕಳೆದ ದಶಕದಲ್ಲಿ ಆದ ಒಂದು ಬೆಳವಣಿಗೆಯನ್ನು ನಾವೆಲ್ಲ ಗಮನಿಸಬೇಕು .ತಂತ್ರಜ್ಞಾನದ ಅರಿವುಳ್ಳವರು ಅಧಿಕಾರಶಾಹಿಯಲ್ಲಿ ಹೆಚ್ಚಾಗುತ್ತಿದ್ದಂತೆ social media ಮೂಲಕ ತಮ್ಮ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳಲು, ತಾವಷ್ಟೇ ಪ್ರಾಮಾಣಿಕರು ಎಂಬುದಾಗಿಯೂ ತಾವು ಸಿಂಗಂಗಳೆಂದೂ,ಸಿಂಹಿಣಿಯರೆಂದೂ ಬಿಂಬಿಸಿಕೊಳ್ಳಲು ಪ್ರಾರಂಭಿಸಿದರು.ಇನ್ನೂ ಕೆಲವರು ತಮ್ಮದೇ ಅಭಿಮಾನಿಗಳ Face Book page ಗಳನ್ನು ಆರಂಭಿಸಿದರು.ತಾವು ಮಾಡಬೇಕಾದ ಕೆಲಸಗಳನ್ನು ತಮ್ಮ ಹೊಣೆಗಾರಿಕೆಯೆಂದು ಭಾವಿಸದೆ ತಮ್ಮ ವಿಶಿಷ್ಟತೆಯೆಂದು ಪ್ರಚಾರಕ್ಕಿಳಿದರು.ಆಡಳಿತದ ಹೊರವಲಯದಲ್ಲಿರುವ ಮುಗ್ಧ ಜನಸಾಮಾನ್ಯರಲ್ಲಿ ತಾವು ಅವರ ಉದ್ಧಾರಕ್ಕೆ ಬಂದ ಅವತಾರ ಪುರುಷರೆಂದು ನಂಬಿಸತೊಡಗಿದರು.ಇವರಿಂದ ಸ್ಫೂರ್ತಿ ಪಡೆದಂತಹ ಸಿನೆಮಾಗಳು ಬಂದು ಹೀರೋಗಳಾಗಿ ವಿಜೃಂಭಿಸಿದರು' ಎಂದಿದ್ದಾರೆ.

ಪೊಲೀಸ್ ವೈಭವೀಕರಣದ ಜನಪ್ರಿಯ ಸಿನಿಮಾ
ರವಿಕಾಂತೇ ಗೌಡ ಉಲ್ಲೇಖಿಸಿರುವ 'ಸಿಂಗಂ' ಸಿನಿಮಾ ಇತ್ತೀಚಿನ ದಿನಗಳಲ್ಲಿ ಪೊಲೀಸ್ ವೈಭವೀಕರಣ ಮಾಡಿದ ಪ್ರಮುಖ ಹಾಗೂ ಜನಪ್ರಿಯ ಸಿನಿಮಾ. ಮೊದಲು ತಮಿಳಿನಲ್ಲಿ ನಿರ್ಮಾಣವಾದ ಈ ಸಿನಿಮಾವನ್ನು ಕನ್ನಡ ಸೇರಿ ಹಲವು ಭಾಷೆಗಳಿಗೆ ರೀಮೇಕ್ ಮಾಡಲಾಯಿತು.

ಪೊಲೀಸ್ ವೈಭವೀಕರಣ ಮಾಡುವುದಿಲ್ಲ ಎಂದ ನಿರ್ದೇಶಕ
ಆದರೆ ತಮಿಳಿನ ಮೂಲ 'ಸಿಂಗಂ' ಸಿನಿಮಾ ನಿರ್ದೇಶಿಸಿದ್ದ ಹರಿ ಗೋಪಾಲಕೃಷ್ಣನ್ ಸಹ ತಾವು 'ಸಿಂಗಂ' ಸಿನಿಮಾ ಮಾಡಬಾರದಿತ್ತು ಎಂದು ಬೇಸರದಿಂದ ಹೇಳಿದ್ದರು. ಇದಕ್ಕೆ ಕಾರಣ ತಮಿಳುನಾಡಿನಲ್ಲಿ ನಡೆದ 'ಪೊಲೀಸ್ ಬ್ರುಟಾಲಿಟಿ'. ಮೊಬೈಲ್ ಶಾಪ್ ಹೊಂದಿದ್ದ ಅಪ್ಪ-ಮಗನನ್ನು ಕ್ಷುಲ್ಲಕ ಕಾರಣಕ್ಕೆ ಪೊಲೀಸರು ಠಾಣೆಗೆ ಕರೆದೊಯ್ದು ಹೊಡೆದು ಕೊಂದ ಪ್ರಕರಣದ ಬೆಳಕಿಗೆ ಬಂದ ಬಳಿಕ ಹರಿ ಗೋಪಾಲಕೃಷ್ಣನ್ ತಾವಿನ್ನು ಪೊಲೀಸರನ್ನು ವೈಭವೀಕರಿಸುವ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಘೋಷಿಸಿದರು.

ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ಫ್ಯಾನ್ ಪೇಜ್ಗಳು
ಕರ್ನಾಟಕದಲ್ಲಿಯೂ ಸಹ ಪೊಲೀಸ್ ಅಧಿಕಾರಿಗಳನ್ನು ಸಿಂಗಂ ಎಂದು ಕರೆಯುವ ಪರಿಪಾಟ ಆರಂಭವಾಗಿದೆ. ಪೊಲೀಸ್ ಅಧಿಕಾರಿಗಳ ಹೆಸರಿನ ಫ್ಯಾನ್ ಪೇಜ್ಗಳು ಆರಂಭವಾಗಿವೆ. ಪೊಲೀಸ್ ಅಧಿಕಾರಿಗಳ ಹೆಸರಿನ ಅಭಿಮಾನಿ ಬಳಗಗಳು, ಹುಟ್ಟುಹಬ್ಬ ಆಚರಣೆಗಳು ನಡೆಯುತ್ತಿವೆ. ಇವೆಲ್ಲವೂ ಪೊಲೀಸ್ ವೈಭವೀಕರಿಸಿದ ಸಿನಿಮಾಗಳ ಪ್ರಭಾವಗಳೇ ಆಗಿವೆ. ಇದರ ವಿರುದ್ಧವೇ ಈಗ ಜಂಟಿ ಕಮೀಷನರ್ ರವಿಕಾಂತೇಗೌಡ ಮಾತನಾಡಿದ್ದಾರೆ.
Recommended Video

ಆತನ ಅವತಾರಗಳನ್ನು ಕಂಡು ಗಾಬರಿಯಾದೆ: ರವಿಕಾಂತೇಗೌಡ
''ಈಶಾನ್ಯ ರಾಜ್ಯಗಳಿಂದ ಬಂದ ಒಬ್ಬ ಐಪಿಎಸ್ ಅಧಿಕಾರಿಯ ಬಗ್ಗೆ ಹಬ್ಬಿದ್ದ ರೋಚಕ ಕತೆಗಳು, ಸಾಹಸಗಳು ನಿಜವೆಂದು ನಂಬಿದ್ದ ನಾನು ಇಲಾಖೆಗೆ ಬಂದು ಆತನ ಅವತಾರಗಳನ್ನು ಕಂಡು ಗಾಬರಿಯಾದೆ. ಪ್ರಾಮಾಣಿಕರು ದಕ್ಷರು ಸದ್ದಿಲ್ಲದೆ ಕೆಲಸಮಾಡುವುದನ್ನೂ ಕಂಡೆ. ಅಧಿಕಾರಿಗಳಿಗೆ ಪ್ರಾಮಾಣಿಕತೆ ದಕ್ಷತೆಯಷ್ಟೇ ಅನಾಮಿಕತೆಯು ಮುಖ್ಯವಾದದ್ದು.ಕೆಲಸ ಯಶಸ್ವಿಯಾದಾಗ ಆ ಗೆಲುವನ್ನು ಇಡೀ ತಂಡಕ್ಕೆ ನೀಡುವುದು ಮುಖ್ಯ.
ಜನಸಾಮಾನ್ಯರನ್ನು ಕಪ್ಪು ಬಿಳುಪು ಚಿತ್ರಗಳನ್ನು ನೀಡುವ ಮೂಲಕ ಬೆಪ್ಪು ಮಾಡುವ ಅಪಾಯಕಾರಿ ಅಧಿಕಾರಿಗಳಿಗೆ ಲಿಂಗ ಬೇಧವಿಲ್ಲ. ಈ ವಿಷಯದಲ್ಲಿ ನಾವೆಲ್ಲರೂ ಎಚ್ಚರದಿಂದ ಇರುವುದು ಒಳಿತು.
ಬರೀ ರಾಜಕಾರಣಿಗಳನ್ನು ಅಂದು ಪ್ರಯೋಜನವಿಲ್ಲ'' ಎಂದಿದ್ದಾರೆ ಜಂಟಿ ಕಮೀಷನರ್ ರವಿಕಾಂತೇಗೌಡ.


Click it and Unblock the Notifications











