ಗಾನ ಗಾರುಡಿಗ ಸಿ. ಅಶ್ವತ್ಥ್ ಅವರ 8ನೇ ಪುಣ್ಯ ಸ್ಮರಣೆ
ಡಿಸೆಂಬರ್ ಅಂದಾಕ್ಷಣ ಗಾಯಕ ಸಿ. ಅಶ್ವತ್ಥ್ ಅವರ ಅಗಲಿಕೆಯ ನೆನಪು ಕನ್ನಡಿಗರ ಹೃದಯವನ್ನು ಭಾರವಾಗಿಸುತ್ತದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಹಾಡುವ ಮೂಲಕ ಕನ್ನಡಿಗರ ಮನೆಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ದಿವಂಗತ ಸಿ.ಅಶ್ವತ್ಥ್ ನಮ್ಮನ್ನು ಅಗಲಿ ಇಂದಿಗೆ (ಡಿ. 29) ಎಂಟು ವರ್ಷವಾಗುತ್ತದೆ.
ಕಾಕತಾಳೀಯ ಅಂದ್ರೆ, ಸಿ.ಅಶ್ವತ್ಥ್ ಅವರ ಪುಣ್ಯ ಸ್ಮರಣೆಯ ದಿನವೇ ಅವರ ಹುಟ್ಟು ಹಬ್ಬ ಕೂಡ. ಹುಟ್ಟುಹಬ್ಬದಂದೇ ವಿಧಿವಶರಾಗಿ ಅವರ ಅಪಾರ ಅಭಿಮಾನಿಗಳನ್ನು ಶೋಕ ಸಾಗರಕ್ಕೆ ದೂಡಿದ್ದರು ಅಶ್ವತ್ಥ್. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸಿ.ಅಶ್ವತ್ಥ್ ಅವರು ಬೆಂಗಳೂರು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಡಿ.29 ರಂದು (ಡಿಸೆಂಬರ್ 29, 2010) ಬೆಳಗ್ಗೆ 11.30ಕ್ಕೆ ನಿಧನರಾಗಿದ್ದರು.

ಅಶ್ವತ್ಥ್ ಅವರು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ 1939 ಡಿಸೆಂಬರ್ 29ರಂದು ಜನಿಸಿದ್ದರು. ಕಾಕನ ಕೋಟೆ' ಚಿತ್ರದ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಅಡಿಯಿಟ್ಟಿದ್ದ ಅಶ್ವತ್ಥ್, ಮೈಸೂರು ಮಲ್ಲಿಗೆ, ಶ್ರಾವಣ, ದೀಪಿಕಾ, ಶಿಶುನಾಳ ಷರೀಫ್ ಸಾಹೇಬರ ಗೀತೆಗಳಿಗೆ ಜೀವ ತುಂಬಿದ್ದರು. ಕನ್ನಡವೇ ಸತ್ಯ, ಸುಬ್ಬಾಭಟ್ಟರ ಮಗಳೆ, ಕೈಲಾಸಂ ಗೀತೆಗಳು, ನಾಗಮಂಡಲ, ಭಾವ ಬಿಂದು, ಕೂಡಲ ಸಂಗಮ ಮುಂತಾದ ಜನಪ್ರಿಯ ಧ್ವನಿಸುರುಳಿಗಳನ್ನು ಸಿ. ಅಶ್ವತ್ಥ್ ಹೊರತಂದಿದ್ದರು. ಅಲ್ಲದೇ, ಅಮೃತಧಾರೆ, ಹಠವಾದಿ, ಶಿಷ್ಯ, ತಿಮ್ಮ, ವೀರ, ಮಠ ಮುಂತಾದ ಚಲನಚಿತ್ರಗಳಲ್ಲೂ ತಮ್ಮ ಗಾನಸುಧೆ ಹರಿಸಿದ್ದರು.


Click it and Unblock the Notifications











