'ವಿಜಯ್ ಸಂಕೇಶ್ವರ್ ಯಾವುದು ಮಾಡಬೇಡ ಅನ್ನುತ್ತಾರೋ ಅದನ್ನೇ ಮಾಡ್ತಾರೆ"- ಸಿ ಎಂ ಬಸವರಾಜ್ ಬೊಮ್ಮಾಯಿ!
ಕರ್ನಾಟಕ ಕಂಡ ಯಶಸ್ವಿ ಉದ್ಯಮಿಯರಲ್ಲಿ ಒಬ್ಬರು ವಿಜಯ್ ಸಂಕೇಶ್ವರ್. ಟ್ರಾನ್ಸ್ಪೋರ್ಟ್, ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೈ ಹಾಕಿ ಗೆದ್ದಿರೋ ಉದ್ಯಮಿ. ಇವರ ಸಾಧನೆಯೇ ಈಗ ಸಿನಿಮಾ ಆಗುತ್ತಿದೆ.
ವಿಜಯ್ ಸಂಕೇಶ್ವರ್ ಅವರ ಜೀವನ ಚರಿತ್ರೆಯನ್ನು ಅವರ ಪುತ್ರ ಆನಂದ್ ಸಂಕೇಶ್ವರ್ ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ. ಅದುವೇ ವಿಜಯಾನಂದ. ಶನಿವಾರ (ನವೆಂಬರ್ 19) ಈ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಬಯೋಪಿಕ್ ಬಗ್ಗೆ ಹಾಗೂ ವಿಜಯ ಸಂಕೇಶ್ವರ್ ಅವರ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ.

'ವಿಜಯ್ ಸಂಕೇಶ್ವರ್ಗೆ ವಯಸ್ಸಿನ ಹಂಗಿಲ್ಲ'
ವಿಜಯ್ ಸಂಕೇಶ್ವರ್ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ 'ವಿಜಯಾನಂದ'. ಈ ಸಿನಿಮಾ ಡಿಸೆಂಬರ್ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ವೇಳೆ ಟ್ರೈಲರ್ ಬಿಡುಗಡೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸಿ ಎಂ ಬಸವರಾಜ ಬೊಮ್ಮಾಯಿ ವಿಜಯ್ ಸಂಕೇಶ್ವರ್ ಅವರ ಗುಣವನ್ನು ತೆರೆದಿಟ್ಟಿದ್ದಾರೆ. ವಿಜಯ್ ಸಂಕೇಶ್ವರ್ ಅವರಿಗೆ ಯಶಸ್ಸಿನ ಹಸಿವಿದೆ. ಹೊಸತು ಏನನ್ನಾದರೂ ಮಾಡುತ್ತಲೇ ಇರುತ್ತಾರೆ. ಇಡೀ ಜಗತ್ತು ಎಲ್ಲಿ ಹೋಗಬೇಡ ಅನ್ನುತ್ತೋ.. ಯಾವುದು ಮಾಡಬೇಡ ಅನ್ನುತ್ತೋ.. ಅದನ್ನೇ ಮಾಡುತ್ತಾರೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಗುಣಗಾನ ಮಾಡಿದ್ದಾರೆ.

'ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು'
ವಿಜಯ್ ಸಂಕೇಶ್ವರ್ ಕರ್ನಾಟಕ ಕಂಡ ಯಶಸ್ವಿ ಉದ್ಯಮಿ. ಅವರ ಬದುಕು ಐಐಎಂ ವಿದ್ಯಾರ್ಥಿಗಳಿಗೆ ಪಠ್ಯ ಆಗಬೇಕು ಅಂತ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಆಸೆಯನ್ನು ಹೊರ ಹಾಕಿದ್ದಾರೆ. ಎಂಎಲ್ಸಿ ಆಗಿದ್ದಾಗ, ಅವರು ಇಲ್ಲಿ ಕೂತು ಸಮಯ ವ್ಯರ್ಥ ಮಾಡುವುದಿಲ್ಲ ಎಂದು ರಾಜೀನಾಮೆ ನೀಡಿದ್ದರು. ಅವರ ಕಾಯಕವನ್ನೇ ನಂಬಿದವರು. ಹೀಗಾಗಿ ವಿಜಯಾನಂದ ಸಿನಿಮಾ ಯಶಸ್ವಿಯಾಗಿ ಎಂದು ಸಿ ಎಂ ಹರಸಿದರು.

1400 ಸ್ಕ್ರೀನ್ಗಳಲ್ಲಿ 'ವಿಜಯಾನಂದ' ರಿಲೀಸ್
'ವಿಜಯಾನಂದ' ಈಗ ಬಿಡುಗಡೆ ಸಜ್ಜಾಗಿ ನಿಂತಿದೆ. ಡಿಸೆಂಬರ್ 9ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಆನಂದ್ ಸಂಕೇಶ್ವರ್ ಈಗ ಸಿನಿಮಾ ನಿರ್ಮಾಣಕ್ಕೂ ಕಾಲಿಟ್ಟಿದ್ದು, ಇಲ್ಲೂ ಯಶಸ್ವಿ ಕಾಣುತ್ತಾರಾ ಅನ್ನೋ ಕುತೂಹಲವಿದೆ. ಮೂಲಗಳ ಪ್ರಕಾರ, ಈ ಸಿನಿಮಾ 1400 ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಅಲ್ಲದೆ ವಿದೇಶದ ಸುಮಾರು 200 ಸ್ಕ್ರೀನ್ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ಕನ್ನಡದಲ್ಲಿ ಬಯೋಪಿಕ್ ನಿರ್ದೇಶಿಸಿದ ಮೊದಲ ನಿರ್ದೇಶಕಿ
'ವಿಜಯಾನಂದ' ಬಯೋಪಿಕ್ ಅನ್ನು ರಿಷಿಕಾ ಶರ್ಮಾ ನಿರ್ದೇಶನ ಮಾಡಿದ್ದಾರೆ. ಇದು ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಅಂತ ಚಿತ್ರತಂಡ ಹೇಳಿಕೊಂಡಿದೆ. ಈ ಬಯೋಪಿಕ್ ಅನ್ನು ಮಹಿಳಾ ನಿರ್ದೇಶಕಿಯೊಬ್ಬರು ನಿರ್ದೇಶಿಸಿದ್ದು ವಿಶೇಷ. ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ನಟಿಸಿದ್ದಾರೆ. ಇವರೊಂದಿಗೆ ಅನಂತ್ನಾಗ್,ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಗಣ್ಯರು ನಟಿಸಿದ್ದಾರೆ.


Click it and Unblock the Notifications











