ದೊಡ್ಡಣ್ಣನ ಅಳಿಯನ ಮೇಲೆ ಪ್ರಕರಣ: ತಲೆಮರೆಸಿಕೊಂಡ ಆಸಾಮಿ
ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕ್ಯಾಸಿನೋ ದಂಧೆ ಆರೋಪದ ಮೇಲೆ ಉದ್ಯಮಿ ಹಾಗೂ ನಟ ದೊಡ್ಡಣ್ಣ ಅವರ ಅಳಿಯ ಕೆ.ಸಿ.ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ 420 ಪ್ರಕರಣ ದಾಖಲಾಗಿದೆ. ಕೇಸ್ ದಾಖಲು ಆಗುತ್ತಿದ್ದಂತೆ ಪಪ್ಪಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಪಕ್ಷದಲ್ಲಿ ಗುರಿಸಿತಿಸಿಕೊಂಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ಪಪ್ಪಿ, ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಸಲುವಾಗಿ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗಷ್ಟೆ ಸಂಸದ ಡಿಕೆ ಸುರೇಶ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆಯಾಗುವ ಸುಳಿವು ನೀಡಿದ್ದರು. ಆದರೆ ಈಗ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವು ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎನ್ನಲಾಗುತ್ತಿದೆ.
ಜಾತ್ಯತೀತ ಜನತಾದಳ ಪಕ್ಷದಿಂದ ಹಿರಿಯೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಪಪ್ಪಿಗೆ ಟಿಕೆಟ್ ಖಚಿತವಾಗಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರಿ ಅರ್ಜಿ ಸಲ್ಲಿಸಿದ್ದರು.

ಗೋವಾ ಕ್ಯಾಸಿನೋದಲ್ಲಿ ದಂಧೆ, ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡಿರುವ ಆರೋಪವನ್ನು ವೀರೇಂದ್ರ ಮೇಲೆ ಹೊರಿಸಲಾಗಿದೆ. ದಾವಣಗೆರೆಯ ಕಿರಣ್, ಚೇತನ್, ಸೂರಜ್ ಕುಟ್ಟಿ, ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ದೂರು ದಾಖಲಾಗಿದೆ. ವೆಂಕಟೇಶ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಇವರು ಬೆಟ್ಟಿಂಗ್ ಮಾಡಿದ್ದರು. ಪಂದ್ಯ ಅಕ್ಟೋಬರ್ 20ರಂದು ರಂದು ನಡೆದಿತ್ತು. ಕ್ರಿಕೆಟ್ ಬೆಟ್ಟಿಂಗ್ ಆಸೆ ಹುಟ್ಟಿಸಿ ಮೊಬೈಲ್ ಆಪ್ ಮೂಲಕ ಹಣ ಸಂಗ್ರಹವಾಗಿದೆ ಎಂಬುದು ದೂರಿನ ಸಾರಾಂಶ.
ಪೊಲೀಸರು ಕಿರಣ್, ಚೇತನ್ ಅವರುಗಳನ್ನು ಬಂಧಿಸಿ 7 ಲಕ್ಷ ವಶಕ್ಕೆ ಪಡೆದಿದ್ದರು. ಪೊಲೀಸರು ಸೂರಜ್ ಕುಟ್ಟಿ, ವೀರೇಂದ್ರ ಅಲಿಯಾಸ್ ಪಪ್ಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ವೀರೇಂದ್ರ ಪಪ್ಪಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಕೆ.ಸಿ.ವೀರೇಂದ್ರಗೆ ಸೇರಿದ ಬ್ಯಾಂಕ್ ಅಕೌಂಟ್ ಸೀಜ್ ಆಗಿದ್ದು, ಚಳ್ಳಕೆರೆ ಕೆನರಾ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್ಗಳ ಅಕೌಂಟ್ ಸೀಜ್ ಮಾಡಲಾಗಿದೆ. ಇನ್ನು ಬಗ್ಗೆ ಪೋಲಿಸ್ ತನಿಖೆಯಿಂದ ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ.


Click it and Unblock the Notifications











