ಕಾವೇರಿ ಪ್ರತಿಭಟನೆ, ತಮಿಳು ಚಿತ್ರಗಳು ಎತ್ತಂಗಡಿ
ಅಕ್ಟೋಬರ್ 6ರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಚಿತ್ರೋದ್ಯಮ ಸಂಪೂರ್ಣ ಬಂದ್ ಆಗಿದೆ. ಕಾವೇರಿ ಹೋರಾಟ ತಣ್ಣಗಾಗುವವರೆಗೂ ಬೆಂಗಳೂರು ಮತ್ತು ಮೈಸೂರಿನ ಚಿತ್ರಮಂದಿರಗಳು ಸೇರಿದಂತೆ ರಾಜ್ಯದ ಬಹುತೇಕ ಕಡೆ ತಮಿಳು ಚಿತ್ರಗಳು ಇರುವುದಿಲ್ಲ.
ತಮಿಳು ಚಿತ್ರಗಳಿಲ್ಲದೆ ಖಾಲಿಯಾಗಿರುವ ಚಿತ್ರಮಂದಿರಗಳಲ್ಲಿ ಹಳೆಯ ಕನ್ನಡ ಚಿತ್ರಗಳು ತೆರೆಕಂಡಿವೆ. ಬೆಂಗಳೂರಿನಲ್ಲಿ ತಮಿಳರ ಪ್ರಾಬಲ್ಯವಿರುವ ವಿವೇಕನಗರ ಹಾಗೂ ಹಲಸೂರಿನ ಚಿತ್ರಮಂದಿರಗಳಲ್ಲೂ ತಮಿಳು ಚಿತ್ರಗಳು ಎತ್ತಂಗಡಿಯಾಗಿವೆ.
ತಮಿಳು ಚಿತ್ರಗಳು ಎತ್ತಂಗಡಿಯಾಗಿರುವ ಚಿತ್ರಮಂದಿರಗಳಲ್ಲಿ ಕನ್ನಡದ ಅದ್ದೂರಿ, ದಂಡುಪಾಳ್ಯ (ಚಿತ್ರ ವಿಮರ್ಶೆ), ಗೋವಿಂದಾಯ ನಮಃ (ಚಿತ್ರ ವಿಮರ್ಶೆ), ಭದ್ರ, ಜರಾಸಂಧ (ಚಿತ್ರ ವಿಮರ್ಶೆ) ಹಾಗೂ ಪರಮಾತ್ಮ ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಇದೇ ಸಂದರ್ಭದಲ್ಲಿ ಹಳೆಯ ಕನ್ನಡ ಚಿತ್ರಗಳಿಗೂ ಬೇಡಿಕೆ ಬಂದಿದೆ.
ಆದರೆ ತೆಲುಗು, ಹಿಂದಿ ಹಾಗೂ ಮಲಯಾಳಂ ಚಿತ್ರಗಳಿಗೆ ಯಾವುದೇ ನಿಷೇಧವಿಲ್ಲದ ಕಾರಣ ನಿರಾತಂಕವಾಗಿ ಪ್ರದರ್ಶನ ಕಾಣುತ್ತಿವೆ. ಅದರಲ್ಲೂ ತೆಲುಗಿಗೆ ಡಬ್ ಆಗಿರುವ ತಮಿಳು ಚಿತ್ರಗಳಿಗೆ ಸಖತ್ ಡಿಮ್ಯಾಂಡ್ ಏರ್ಪಟ್ಟಿದೆ.
ತಾಂಡವಂ, ಮಾತ್ರಾನ್ ಚಿತ್ರಗಳು ತೆಲುಗಿಗೆ ಡಬ್ ಆಗಿದ್ದು ಅದರ ವಿತರಕರಿಗೆ ಸಂಕ್ರಾಂತಿಗೂ ಮೊದಲೇ ಸುಗ್ಗಿ ಬಂದಂತಾಗಿದೆ. ಈ ಚಿತ್ರಗಳನ್ನೂ ನಿಷೇಧಿಸಿದರೆ ಕನ್ನಡ ಚಿತ್ರಗಳಿಗೆ ಮತ್ತಷ್ಟು ಬೇಡಿಕೆ ಬರುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಕನ್ನಡ ವಿತರಕರೊಬ್ಬರು ತಿಳಿಸಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications












