ಅಂಬರೀಶ್ ನಾಲ್ಕನೇ ವರ್ಷದ ಪುಣ್ಯತಿಥಿಯಂದು 'ಕಲಿಯುಗದ ಕರ್ಣ'ನನ್ನು ಚಿತ್ರರಂಗ ನೆನೆದದ್ದು ಹೀಗೆ
ಕಲಿಯುಗದ ಕರ್ಣ ಎಂದೇ ಖ್ಯಾತಿ ಗಳಿಸಿದ್ದ ನಟ ರೆಬೆಲ್ ಸ್ಟಾರ್ ಅಂಬರೀಶ್ ತಮ್ಮ ಕುಟುಂಬಸ್ಥರು ಹಾಗೂ ಅಪಾರವಾದ ಅಭಿಮಾನಿಗಳನ್ನು ಅಗಲಿ ಇಂದಿಗೆ ( ನವೆಂಬರ್ 24 ) ನಾಲ್ಕು ವರ್ಷಗಳು ಕಳೆದಿವೆ.
1952ರ ಮೇ 29ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ ಜನಿಸಿದ್ದ ಅಂಬರೀಶ್ 1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ಚಿತ್ರರಂಗದ ಹಲವಾರು ದಿಗ್ಗಜ ನಟರು ಹಾಗೂ ಯುವ ನಟರ ಜೊತೆಯೂ ತೆರೆ ಹಂಚಿಕೊಂಡ ಅಂಬರೀಶ್ ಸ್ಟಾರ್ ನಟನಾಗಿಯೂ, ಪೋಷಕ ನಟನಾಗಿಯೂ ಸೇವೆ ಸಲ್ಲಿಸಿದರು.
2018ರ ನವೆಂಬರ್ 24ರ ಸಂಜೆ ವೇಳೆ ಹೃದಯಸ್ಥಂಬನಕ್ಕೆ ಒಳಗಾಗಿದ್ದ ಅಂಬರೀಶ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಅಂಬರೀಶ್ ಅದೇ ದಿನ ರಾತ್ರಿ 10.15ಕ್ಕೆ ಕೊನೆಯುಸಿರೆಳೆದರು. ಆಪ್ತತೆ ಹೊಂದಿದ್ದ ಅಂಬರೀಶ್ ಅವರನ್ನು ಕಳೆದುಕೊಂಡಿದ್ದ ಚಿತ್ರರಂಗ ನಟನ ಕುರಿತು ಮಾತನಾಡಿ, ಟ್ವೀಟ್ ಮಾಡಿ ವಿದಾಯ ಹೇಳಿದ್ದರು. ಸದ್ಯ ನಾಲ್ಕನೇ ವರ್ಷದ ಪುಣ್ಯತಿಥಿಯ ದಿನದಂದೂ ಸಹ ಅಂಬಿ ಅವರನ್ನು ಚಿತ್ರರಂಗ ಈ ಕೆಳಕಂಡಂತೆ ನೆನಪಿಸಿಕೊಂಡಿದೆ..

ಜೊತೆಗಿರದ ಜೀವ ಎಂದಿಗೂ ಜೀವಂತ
ನಟಿ ಹಾಗೂ ರಾಜಕಾರಣಿ ಸುಮಲತಾ ಅಂಬರೀಶ್ ಪತಿ ಅಂಬರೀಶ್ ಅವರನ್ನು ನಾಲ್ಕನೇ ವರ್ಷದ ಪುಣ್ಯತಿಥಿಯಂದು ನೆನಪಿಸಿಕೊಂಡಿದ್ದು, ಅಂಬರೀಶ್ ಕುರಿತು ಹಲವು ಸಾಲುಗಳನ್ನು ಬರೆದಿದ್ದು, "ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ. 'ಅಂಬಿ ಅಮರ' " ಎಂದು ಟ್ವೀಟ್ ಮಾಡಿದ್ದಾರೆ.

ತನ್ನ ಅಪ್ಪಾಜಿ ಬಗ್ಗೆ ದರ್ಶನ್ ಟ್ವೀಟ್
ಪ್ರೀತಿಯ ರೆಬಲ್ ಸ್ಟಾರ್ ಅಂಬರೀಷ್ ಅಪ್ಪಾಜಿ ಅವರು ನಮ್ಮನ್ನು ದೈಹಿಕವಾಗಿ ಅಗಲಿ 4 ವರ್ಷಗಳು ಕಳೆದರೂ ಅವರ ಪ್ರೀತಿ ಮಾರ್ಗದರ್ಶನ ಸದಾ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿರುತ್ತದೆ ಎಂದು ನಟ ದರ್ಶನ್ ಅಂಬರೀಶ್ ಜತೆಗಿನ ತಮ್ಮ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ.

ಚಿತ್ರರಂಗದ ಕಲಾವಿದರ ಜತೆ ಅಂಬಿ ನೆನೆದ ರಾಜಕಾರಣಿಗಳು
ಇನ್ನು ಅಂಬರೀಶ್ ಕೇವಲ ಸಿನಿಮಾರಂಗಕ್ಕೆ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹೀಗಾಗಿ ರಾಜಕೀಯ ಕ್ಷೇತ್ರದಲ್ಲೂ ಅಪಾರ ಆಪ್ತರನ್ನು ಹೊಂದಿದ್ದ ಅಂಬರೀಶ್ ಅವರನ್ನು ಹಲವು ರಾಜಕಾರಣಿಗಳು ಇಂದು ನೆನೆದಿದ್ದಾರೆ. ಕರ್ನಾಟಕ ರಾಜಕೀಯದ ವಿವಿಧ ಪಕ್ಷಗಳ ಹಲವಾರು ರಾಜಕಾರಣಿಗಳು ಅಂಬರೀಶ್ ನಾಲ್ಕನೇ ವರ್ಷದ ಪುಣ್ಯತಿಥಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











