'ಗಂಧದಗುಡಿ' ವೀಕ್ಷಿಸಿದ ಚೇತನ್ ಅದರಲ್ಲಿ ಆದಿವಾಸಿ, ಅಲೆಮಾರಿಗಳನ್ನು ತೋರಿಸಿರುವುದರ ಬಗ್ಗೆ ಏನಂದ್ರು?

ನಟ ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರವಾದ ಗಂಧದ ಗುಡಿ ಸದ್ಯ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಪುನೀತ್ ರಾಜ್ ಕುಮಾರ್ ಹಲವು ದಿನಗಳಿಂದ ಕಾಣುತ್ತಿದ್ದ ಕನಸು ಈ ಗಂಧದ ಗುಡಿ ಚಿತ್ರ. ನಮ್ಮ ನಾಡಿನ ವನ್ಯಸಂಪತ್ತನ್ನು ಇಡೀ ಜಗತ್ತಿಗೆ ಸಾರಿ ಹೇಳಬೇಕು ಎಂಬ ಉದ್ದೇಶದಿಂದ ನಿರ್ದೇಶಕ ಅಮೋಘವರ್ಷ ಜತೆ ತಾವೇ ಕಾಡುಮೇಡು ಅಲೆದು ಗಂಧದಗುಡಿ ಚಿತ್ರವನ್ನು ತಯಾರಿಸಿದ್ದರು ಅಪ್ಪು.
ಆದರೆ ತಮ್ಮ ಕನಸಿನ ಕೂಸು ಗಂಧದಗುಡಿ ಚಿತ್ರ ಬಿಡುಗಡೆ ಆಗುವ ಮುನ್ನವೇ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿದರು. ಪುನೀತ್ ನಿಧನರಾಗಿ ವರ್ಷ ಕಳೆದ ಬಳಿಕ ಗಂಧದಗುಡಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಅಪ್ಪು ಅವರ ಬಹುದಿನಗಳ ಕನಸು ಈ ಮೂಲಕ ನನಸಾಯಿತು. ಗಂಧದಗುಡಿ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿತು, ರಾಜ್ಯದ ಅರಣ್ಯ ಸಂಪತ್ತು ಇಷ್ಟೆಲ್ಲ ಇದೆಯಾ ಎಂದು ಪ್ರೇಕ್ಷಕರು ಪುನೀತ್ ಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಅಪ್ಪು ಅಭಿನಯದ ಕೊನೆಯ ಚಿತ್ರ ಎಂಬ ಕಾರಣದಿಂದ ಅಲ್ಲದೆ ಚಿತ್ರದಲ್ಲಿರುವ ಕಂಟೆಂಟ್ ವೀಕ್ಷಿಸಲು ಚಿತ್ರಮಂದಿರದತ್ತ ಪ್ರೇಕ್ಷಕರು ಮುಗಿಬೀಳುತ್ತಿದ್ದಾರೆ.
ಗಂಧದಗುಡಿ ಚಿತ್ರವನ್ನು ಕೇವಲ ಸಿನಿಪ್ರಿಯರು ಮಾತ್ರವಲ್ಲದೆ ಈಗಾಗಲೇ ಹಲವಾರು ಸೆಲೆಬ್ರಿಟಿಗಳು ವೀಕ್ಷಿಸಿದ್ದಾರೆ ಹಾಗೂ ಚಿತ್ರವನ್ನು ನೋಡಿ ಓರ್ವ ದೊಡ್ಡ ನಟನಾಗಿದ್ದುಕೊಂಡು ಇಂತಹ ಚಿತ್ರಗಳನ್ನು ಮಾಡುವುದು ಸಾಮಾನ್ಯ ವಿಷಯವಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಇತ್ತೀಚಿಗಷ್ಟೇ ಕಾಂತಾರ ಚಿತ್ರವನ್ನು ನೋಡಿ ಚಿತ್ರದ ಕಂಟೆಂಟ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಚೇತನ್ ಅಹಿಂಸಾ ಕೂಡ ಗಂಧದಗುಡಿ ಚಿತ್ರವನ್ನು ವೀಕ್ಷಿಸಿದ್ದು, ತಮ್ಮ ಪಾಲಿನ ವಿಮರ್ಶೆಯನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ..

ಗಂಧದ ಗುಡಿಯಲ್ಲಿನ ಆದಿವಾಸಗಳ ಕುರಿತು ಚೇತನ್ ಪ್ರತಿಕ್ರಿಯೆ
ಗಂಧದ ಗುಡಿ ಚಿತ್ರ ವೀಕ್ಷಿಸಿದ ನಂತರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ನಟ ಚೇತನ್ ಕುಮಾರ್ ನನ್ನ ಒಳ್ಳೆಯ ಸ್ನೇಹಿತ ಮತ್ತು ದೊಡ್ಡ ಅಣ್ಣ ಅಪ್ಪು ಸರ್ ಅವರಿಗೆ ಗಂಧದ ಗುಡಿ ಅಂತಿಮ ಅತ್ಯದ್ಭುತ ವಿದಾಯ ಎಂದು ಬರೆದುಕೊಂಡು ಚಿತ್ರದಲ್ಲಿ ಅಪ್ಪು ಅವರು ಕಾಣಿಸಿಕೊಂಡಿರುವ ರೀತಿ ಹಾಗೂ ಅಮೋಘವರ್ಷ ಅವರ ನಿರ್ದೇಶನವನ್ನು ಕೊಂಡಾಡಿದ್ದಾರೆ. ಪ್ರಕೃತಿಯನ್ನು ತೋರಿಸುವುದರ ಜತೆಗೆ ಆದಿವಾಸಿಗಳು ಹಾಗೂ ಅಲೆಮಾರಿಗಳ ಚಿತ್ರಣವನ್ನು ಉತ್ತಮವಾಗಿ ಸೆರೆ ಹಿಡಿಯಲಾಗಿದೆ ಎಂದಿರುವ ನಟ ಚೇತನ್ ಭಕ್ತ ಪ್ರಹ್ಲಾದ ಹಾಗೂ ಗಂಧದ ಗುಡಿ ಪುನೀತ್ ರಾಜ್ ಕುಮಾರ್ ಅಭಿನಯದ ನನ್ನ ಆಲ್ ಟೈಮ್ ಫೇವರಿಟ್ ಚಿತ್ರಗಳು ಎಂದು ಬರೆದುಕೊಂಡಿದ್ದಾರೆ.

ಈ ವಿಷಯದ ಕುರಿತಾಗಿಯೇ ಕಾಂತಾರ ವಿವಾದ
ಇನ್ನು ಗಂಧದಗುಡಿ ಚಿತ್ರದಲ್ಲಿ ಆದಿವಾಸಿಗಳನ್ನು ತೋರಿಸಿರುವ ರೀತಿಯನ್ನು ಮೆಚ್ಚಿಕೊಂಡ ನಟ ಚೇತನ್ ಅಹಿಂಸಾ ಹಿಂದೆ ಇದೇ ವಿಷಯಕ್ಕಾಗಿ ಕಾಂತಾರ ಚಿತ್ರದ ವಿರುದ್ಧ ಮಾತನಾಡಿ ವಿವಾದ ಎಬ್ಬಿಸಿದ್ದರು. ಚಿತ್ರದಲ್ಲಿ ಬರುವ ಭೂತಕೋಲ ಆಚರಣೆ ಆದಿವಾಸಿಗಳ ಸಂಸ್ಕೃತಿ ಆದರೆ ಅದನ್ನು ಹಿಂದೂ ಸಂಸ್ಕೃತಿ ಎಂದು ತಪ್ಪಾಗಿ ತೋರಿಸಲಾಗಿದೆ ಎಂದಿದ್ದರು. ಏಕೆಂದರೆ ಹಿಂದೂ ಧರ್ಮ ಹುಟ್ಟುವುದಕ್ಕೂ ಮುನ್ನ ಆದಿವಾಸಿಗಳಿದ್ದರು, ಹೀಗಾಗಿ ಭೂತಕೋಲ ಹಿಂದೂ ಧರ್ಮದ ಆಚರಣೆ ಅಲ್ಲವೇ ಅಲ್ಲ ಎಂದು ಚೇತನ್ ರಿಷಬ್ ಶೆಟ್ಟಿ ಅವರ ನಿರ್ದೇಶನ ತಪ್ಪು ಎಂದಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಟಿಕೆಟ್ ದರ ಇಳಿಸಿದ ಗಂಧದ ಗುಡಿ
ಇನ್ನು ಗಂಧದಗುಡಿ ಚಿತ್ರ ಇಡೀ ರಾಜ್ಯದ ಜನರು ಹಾಗೂ ವಿಶೇಷವಾಗಿ ಮಕ್ಕಳು ವೀಕ್ಷಿಸಲೇಬೇಕಾದ ಚಿತ್ರ ಎಂಬ ಉದ್ದೇಶದಿಂದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಚಿತ್ರದ ಟಿಕೆಟ್ ದರವನ್ನು ತಗ್ಗಿಸಿದ್ದಾರೆ. ಗಂಧದ ಗುಡಿ ಚಿತ್ರದ ಟಿಕೆಟ್ ದರ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 56 ರೂಪಾಯಿಗಳು ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 112 ರೂಪಾಯಿಗಳಿರಲಿವೆ. ಈ ಮೂಲಕ ಗಂಧದಗುಡಿ ಚಿತ್ರವನ್ನು ಪ್ರೇಕ್ಷಕರು ಕಡಿಮೆ ದರದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.


Click it and Unblock the Notifications











