ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ: ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ
ಪಾರ್ವತಮ್ಮ ರಾಜ್ ಕುಮಾರ್ ರವರು ಡಾ.ರಾಜ್ ರಾಜ್ ಕುಮಾರ್ ರವರ ಪತ್ನಿ ಎಂಬ ಕಾರಣದಿಂದ ಮಾತ್ರವಲ್ಲದೇ ಅವರು ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಮತ್ತು ಚಿತ್ರ ವಿತರಕರಾಗಿ ನೀಡಿದ ಕೊಡುಗೆಯಿಂದಲೂ ಕನ್ನಡ ನಾಡಿನ ಚಿರಸ್ಮರಣೀಯ. ಅಲ್ಲದೇ ಹಲವು ರೀತಿಯ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿದ್ದ ದೀಮಂತ ಮಹಿಳೆ ಪಾರ್ವತಮ್ಮ ರಾಜ್ ಕುಮಾರ್.
ಇಂದು(ಮೇ 31) ಅವರ ಅಗಲಿಕೆಯಿಂದ ಕನ್ನಡನಾಡಿನ ಜನರು ದುಃಖದ ಮಡಿವಿನಲ್ಲಿ ಸಿಲುಕಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರದ ಗಣ್ಯರು ಪಾರ್ವತಮ್ಮ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ನುಡಿನಮನ ಸಲ್ಲಿಸಿದ್ದಾರೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಬೆಳಿಗ್ಗೆ 9.45 ಗಂಟೆ ವೇಳೆಗೆ ಸದಾಶಿವ ನಗರದ ರಾಘವೇಂದ್ರ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಪಾರ್ವತಮ್ಮ ರಾಜ್ ಕುಮಾರ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಮಾತನಾಡಿದ ಸಿದ್ದರಾಮಯ್ಯ ನವರು, "ಪಾರ್ವತಮ್ಮ ರಾಜ್ ಕುಮಾರ್ ರವರು ನಮ್ಮನ್ನೆಲ್ಲಾ ಅಗಲಿರುವುದು ನೋವುಂಟು ಮಾಡಿದೆ. ಅವರ ಅಗಲಿಕೆಯಿಂದ ಕನ್ನಡ ಚಲನಚಿತ್ರ ರಂಗಕ್ಕೆ ಅಪರವಾದ ನಷ್ಟ ಆಗಿದೆ' ಎಂದರು.
ಕನ್ನಡ ಚಲನಚಿತ್ರ ರಂಗ ಇಷ್ಟೊಂದು ಬೆಳೆಯಬೇಕಾದರೆ ಅವರ ಪಾತ್ರವು ಬಹಳ ದೊಡ್ಡದು. ಅವರು ಚಲನಚಿತ್ರ ನಿರ್ಮಾಪಕರಾಗಿ ಅನೇಕ ಕಲಾವಿದರನ್ನ ಪರಿಚಯಿಸಿದರು. ಅನೇಕ ಪೋಷಕ ನಟರನ್ನ ಪರಿಚಿಯಿಸಿದರು. ಡಾ.ರಾಜ್ ಯಶಸ್ಸಿನ ಮೂಲ ಆಧಾರವಾಗಿದ್ದರು. ಹಂಚಿಕೆದಾರರಾಗಿ ಕೆಲಸ ಮಾಡಿದ್ದರು. ರಾಜ್ ಏಳು ಬೀಳುಗಳಿಗೆ ಇವರು ಪಾಲುದಾರರಾಗಿದ್ದರು. ಅವರ ನಿಧನ ಬಹಳ ದೊಡ್ಡ ನೋವನ್ನು ಉಂಟು ಮಾಡಿದೆ" ಎಂದು ದುಃಖದಿಂದ ಸಿದ್ದರಾಮಯ್ಯ ನುಡಿದರು.

" ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರ ಡಾ.ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ಆಗಲಿದೆ. ರಾಜ್ಯ ಸರ್ಕಾರ ಅವರ ಅಂತಿಮ ಸಂಸ್ಕಾರಕ್ಕೆ ಸಕಲಗೌರವ ನೀಡಲಿದೆ" ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.


Click it and Unblock the Notifications











