ಸಿಎಂ ಅಕೌಂಟ್ ಗೆ ಬಿತ್ತು 4ನೇ ಸಿನಿಮಾ: ಯಾವಾಗ ನೋಡ್ತೀರಾ ಸಿದ್ದು ಸರ್?
ಮುಖ್ಯಮಂತ್ರಿ ಸಿದ್ದರಾಮಯ್ಯ 'ರಾಜಕುಮಾರ', 'ಬಾಹುಬಲಿ', 'ನಿರುತ್ತರ' ಅಂತಹ ಚಿತ್ರಗಳನ್ನು ನೋಡಿದ ನಂತರ ಮತ್ತಷ್ಟು ಕನ್ನಡ ಚಿತ್ರಗಳು ಸಿಎಂ ಮನೆ ಬಾಗಿಲಿಗೆ ಹೋಗಿದೆ.
ನಮ್ಮ ಚಿತ್ರವನ್ನ ನೋಡಿ, ನಮ್ಮ ಚಿತ್ರವನ್ನ ನೋಡಿ ಎಂದು ನಿರ್ದೇಶಕರು, ನಿರ್ಮಾಕರು ಮುಖ್ಯಮಂತ್ರಿ ಅವರ ಕಾಲ್ ಶೀಟ್ ಪಡೆಯುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ 'ರಾಗ' ಮತ್ತು 'ಹ್ಯಾಪಿ ನ್ಯೂ ಇಯರ್' ಚಿತ್ರಗಳು ಮುಖ್ಯಮಂತ್ರಿಯನ್ನ ಆಹ್ವಾನಿಸಿದ್ದವು. ಈಗ ಮತ್ತೆ ಎರಡು ಹೊಸ ಚಿತ್ರಗಳು ಸಿಎಂಗೆ ಸಿನಿಮಾ ನೋಡುವಂತೆ ಮನವಿ ಮಾಡಿದೆ.
ವಿಶೇಷ ಏನಪ್ಪಾ ಅಂದ್ರೆ, ಇವೆರೆಡು ಚಿತ್ರಗಳು ಸರ್ಕಾರ ನೋಡಲೇಬೇಕಾದ ಸಿನಿಮಾಗಳಂತೆ. ಯಾವುದು? ಮುಂದೆ ಓದಿ.....

ಶಿವಣ್ಣನ 'ಬಂಗಾರ S/O ಬಂಗಾರದ ಮನುಷ್ಯ'
ಶಿರಾಜ್ ಕುಮಾರ್ ಅಭಿನಯದ 'ಬಂಗಾರ S/O ಬಂಗಾರದ ಮನುಷ್ಯ' ಚಿತ್ರವನ್ನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನೋಡಬೇಕು ಎಂದು ಚಿತ್ರತಂಡ ಆಹ್ವಾನಿಸಿದೆ. ಯಾಕಂದ್ರೆ, ರೈತರ ಹೋರಾಟ, ರೈತರ ಹಿತಾಸಕ್ತಿ ಕುರಿತಾದ ಚಿತ್ರವಾಗಿದ್ದರಿಂದ ಸಿಎಂ ನೋಡಬೇಕು ಎಂಬುದು 'ಬಂಗಾರ S/O ಬಂಗಾರದ ಮನುಷ್ಯ'ನ ಆಶಯ.

'ಸರ್ಕಾರಿ ಕೆಲಸ ದೇವರ ಕೆಲಸ'ದಿಂದ ಆಹ್ವಾನ
ಇದರ ಬೆನ್ನಲ್ಲೆ 'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರತಂಡವು ಮುಖ್ಯಮಂತ್ರಿ ಅವರನ್ನ ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿದೆ. ಇತ್ತೀಚೆಗಷ್ಟೇ ಚಿತ್ರದ ನಿರ್ದೇಶಕ ರವೀಂದ್ರ ಹಾಗೂ ನಿರ್ಮಾಪಕ ಆಶ್ವನಿ ರಾಮ್ ಪ್ರಸಾದ್ ಸಿಎಂ ಅವರನ್ನ ಭೇಟಿ ಮಾಡಿದ್ದರು. ನಟಿ ಸಂಯುಕ್ತ ಹೊರನಾಡು, ರವಿಶಂಕರ್ ಗೌಡ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

'ರಾಗ' ಯಾವಾಗ ನೋಡ್ತಿರ ಸಿದ್ದು ಸರ್?
ಕಳೆದ ಕೆಲ ದಿನಗಳ ಹಿಂದೆಯಷ್ಟೇ 'ರಾಗ' ಚಿತ್ರವನ್ನ ನೋಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಟ ಮಿತ್ರ ಹಾಗೂ ನಿರ್ದೇಶಕ ಪಿ.ಸಿ ಶೇಖರ್ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿಗಳು ಕೂಡ ನೋಡುವುದಾಗಿ ಭರವಸೆ ನೀಡಿದ್ದರಂತೆ.

'ಹ್ಯಾಪಿ ನ್ಯೂ ಇಯರ್'ಗೂ ಭರವಸೆ
ಇನ್ನು ಬಿಸಿ ಪಾಟೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಹ್ಯಾಪಿ ನ್ಯೂ ಇಯರ್' ಚಿತ್ರವನ್ನ ನೋಡುವಂತೆ ಸ್ವತಃ ಬಿಸಿ ಪಾಟೀಲ್ ಅವರೇ ಮುಖ್ಯಮಂತ್ರಿಗಳಿಗೆ ಕೇಳಿದ್ದರು. ಅದಕ್ಕೆ ಸಿಎಂ ಕೂಡ ನೋಡ್ತಿನಿ ಅಂತನೂ ಹೇಳಿದ್ದಾರಂತೆ.

ಮುಖ್ಯಮಂತ್ರಿಗಳು ನೋಡಿರುವ ಚಿತ್ರಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ತಿಥಿ', 'ರಾಜಕುಮಾರ', 'ಬಾಹುಬಲಿ-2', 'ನಿರುತ್ತರ' ಚಿತ್ರಗಳನ್ನ ನೋಡಿದ್ದಾರೆ. ಈಗ 'ಬಂಗಾರ S/O ಬಂಗಾರದ ಮನುಷ್ಯ', 'ಸರ್ಕಾರಿ ಕೆಲಸ ದೇವರ ಕೆಲಸ', 'ರಾಗ', 'ಹ್ಯಾಪಿ ನ್ಯೂ ಇಯರ್' ಚಿತ್ರಗಳನ್ನ ನೋಡಲು ಆಹ್ವಾನ ಬಂದಿದೆ. ಇನ್ನು ಮತ್ತೆಷ್ಟು ಚಿತ್ರಗಳನ್ನ ನೋಡಲಿದ್ದಾರೋ ಕಾದುನೋಡಬೇಕಿದೆ.


Click it and Unblock the Notifications











