ನನ್ನ ತಂಟೆಗೆ ನಾನೇ ಹೋಗಲ್ಲ, ಚಿರಂಜೀವಿ ಸರ್ಜಾ!
ನಟ ಚಿರಂಜೀವಿ ಸರ್ಜಾ ಈಗ ಬದಲಾಗಿದ್ದಾರೆ. ಅವರ ಬದಲಾವಣೆಗೆ ಕಾರಣವಾಗಿರುವುದು ಖಾಕಿ ಖದರ್. ಈ ಹಿಂದೆ ಅವರು 'ದಂಡಂ ದಶಗುಣಂ' ಚಿತ್ರದಲ್ಲಿ ಖಾಕಿ ಖದರ್ ತೋರಿದ್ದರು. ಈ ಬಾರಿ ಮತ್ತೊಮ್ಮೆ 'ಅಯ್ಯ'ನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಮಾಸ್ ನಿರ್ದೇಶಕ ಎನ್ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿರುವ 'ಅಯ್ಯ 2' ಚಿತ್ರದ ಕಥೆ ಇಡೀ ದೇಶಕ್ಕೆ ಅನುಗುಣವಾಗುವಂತಹ ವಿಷಯ ಎನ್ನುತ್ತಾರೆ ಓಂ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ರಾಕ್ ಲೈನ್ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ.
ಚಿರಂಜೀವಿ ಸರ್ಜಾ ಹಾಗೂ ವೈಶಾಲಿ ದೀಪಕ್ ಮುಖ್ಯತಾರಾಗಣದಲ್ಲಿದ್ದಾರೆ. ಉಮೇಶ್ ರೆಡ್ಡಿ ಅವರ ಮೊದಲ ನಿರ್ಮಾಣದ ಚಿತ್ರವಿದು. ಹಿಂದಿ ಚಿತ್ರರಂಗದ ಹೆಸರಾಂತ ನಟ ಅನುಪಮ್ ಖೇರ್ ಅವರು ಈ ಚಿತ್ರದಲ್ಲಿ ಕೇಂದ್ರ ಸಚಿವರ ಪಾತ್ರವನ್ನು ಪೋಷಿಸಲಿದ್ದಾರೆ.ಈ ಚಿತ್ರದಲ್ಲಿ ದೇಶ ಕಾಯುವ ನಾಯಕನಾಗಿ ಚಿರಂಜೀವಿ ಸರ್ಜಾ ಇದ್ದಾರೆ. ಅವರ ಪಾತ್ರದ ಮುಖೇನ ಯುವ ಜನತೆ ದೇಶವನ್ನು ಕಾಪಾಡಿಕೊಳ್ಳಬೇಕೆಂದು ಗಹನವಾದ ವಿಚಾರವನ್ನು ಹೇಳಲಾಗಿದೆ. 'ನನ್ನ ತಂಟೆಗೆ ನಾನೇ ಹೋಗೊಲ್ಲ' ಎಂಬುದು ಚಿತ್ರದ ಅಡಿಬರಹ.
ಚಿಕ್ಕಮಗಳೂರಿನ ವೈಶಾಲಿ ದೀಪಕ್ ರಂಗಭೂಮಿಯಲ್ಲಿ ಸಾಕಷ್ಟು ಪಳಗಿರುವ ಕಲಾವಿದ. ಅವರು ಇದೇ ಮೊದಲ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಓಂ ಪ್ರೊಡಕ್ಷನ್ ಅಡಿಯಲ್ಲಿ ಎ ಎಂ ಉಮೇಶ್ ರೆಡ್ಡಿ ಅವರ ನಿರ್ಮಾಣದ ಚಿತ್ರಕ್ಕೆ ಎಂ ಎಸ್ ರಮೇಶ್ ಅವರ ಸಂಭಾಷಣೆ, ಅರ್ಜುನ್ ಜನ್ಯ ಅವರ ಸಂಗೀತ, ರಾಜೇಶ್ ಕಟ್ಟ ಅವರ ಛಾಯಾಗ್ರಹಣ, ರವಿ ವರ್ಮ ಅವರ ಸಾಹಸ, ಸರಿಗಮ ವಿಜಿ ಅವರ ಸಹಾಯಕ ನಿರ್ದೇಶನ, ಗೋವರ್ಧನ್ ರೆಡ್ಡಿ ಅವರ ಸಂಕಲನ ಇದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












