ಚಿರು ಸರ್ಜಾ ಕೊನೆ ಚಿತ್ರ 'ರಾಜಮಾರ್ತಾಂಡ'ಗೆ ಯಾರು ದನಿ ನೀಡ್ತಿದ್ದಾರೆ? ಡಬಿಂಗ್ ಕೆಲಸ ಎಲ್ಲಿಗೆ ಬಂತು?

ಕನ್ನಡದ ಜನಪ್ರಿಯ ನಟರಲ್ಲಿ ಓರ್ವರಾದ ಚಿರಂಜೀವಿ ಸರ್ಜಾ 2020ರ ಜೂನ್ ತಿಂಗಳಿನಲ್ಲಿ ಇಹ ಲೋಕ ತ್ಯಜಿಸಿದ ನಂತರ ಅವರ ಅಭಿನಯದ ಉಳಿದ ಚಿತ್ರದ ಕೆಲಸಗಳನ್ನು ಪೂರೈಸಿ ಬಿಡುಗಡೆ ಮಾಡಲಾಗ್ತಿದೆ. ಚಿರು ನಟಿಸಿದ್ದ ಎರಡು ಚಿತ್ರಗಳಾದ ರಣಂ ಹಾಗೂ ರಾಜಮಾರ್ತಾಂಡ ಮೂಲಕ ಚಿರು ಅವರನ್ನು ಕೊನೆಯ ಬಾರಿಗೆ ಬೆಳ್ಳಿ ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗಿತ್ತು.
ಇನ್ನು ಈ ಪೈಕಿ ರಣಂ ಚಿತ್ರ 2021ರ ಮಾರ್ಚ್ 26ರಂದು ತೆರೆ ಕಂಡಿತ್ತು. ಇದಾದ ಬಳಿಕ ಚಿರಂಜೀವಿ ಸರ್ಜಾ ಅವರ ಅಭಿನಯದ ಕೊನೆಯ ಚಿತ್ರ ರಾಜಮಾರ್ತಾಂಡ ಯಾವಾಗ ಬಿಡುಗಡೆಯಾಗಲಿದೆ ಎಂದು ಚಿರು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಚಿತ್ರದ ಡಬಿಂಗ್ ಕೆಲಸ ಮುಗಿಯುವ ಮುನ್ನವೇ ಚಿರಂಜೀವಿ ಸರ್ಜಾ ನಿಧನರಾದ ಕಾರಣ ಇದೀಗ ಚಿತ್ರಕ್ಕೆ ಚಿರಂಜೀವಿ ಸರ್ಜಾ ಅವರ ಸಹೋದರ ಧೃವ ಸರ್ಜಾ ಅವರೇ ದನಿ ನೀಡಿದ್ದಾರೆ.
ಇನ್ನು ಈ ಡಬಿಂಗ್ ಕೆಲಸ ಎಲ್ಲಿಗೆ ಬಂದಿದೆ ಎಂಬ ಮಾಹಿತಿಯನ್ನು ಚಿತ್ರತಂಡವಾಗಲಿ ಅಥವಾ ಧೃವ ಸರ್ಜಾ ಆಗಲಿ ಹಂಚಿಕೊಂಡಿಲ್ಲ. ಆದರೆ ಒಳ್ಳೆ ಹುಡುಗ ಪ್ರಥಮ್ ಈ ಕುರಿತಾಗಿ ಮಾಹಿತಿಯನ್ನು ನೀಡಿದ್ದಾರೆ. ಧೃವ ಸರ್ಜಾ ಅವರನ್ನು ಡಬಿಂಗ್ ಸಮಯದಲ್ಲಿ ಭೇಟಿ ಮಾಡಿರುವ ಒಳ್ಳೆ ಹುಡುಗ ಪ್ರಥಮ್ ಡಬಿಂಗ್ ಎಲ್ಲಿವರೆಗೆ ಬಂತು, ಮುಗಿತಾ ಎಂಬ ಪ್ರಶ್ನೆಯನ್ನು ಧೃವ ಸರ್ಜಾ ಬಳಿ ಕೇಳಿದ್ದಾರೆ.
ಈ ಕುರಿತಾಗಿ ಉತ್ತರಿಸಿದ ಧೃವ ಸರ್ಜಾ ಇಲ್ಲ, ಇನ್ನೊಂದೆರಡು ದಿನ ಡಬಿಂಗ್ ಮಾಡಬೇಕಿದೆ, ಅಣ್ಣ ಇಲ್ಲ ಎಂದಾಗ ಹೇಗೇಗೋ ಡಬಿಂಗ್ ಮಾಡೋಕಾಗಲ್ಲ, ನಿಧಾನವಾದ್ರೂ ಪರವಾಗಿಲ್ಲ, ಅಚ್ಚುಕಟ್ಟಾಗಿ ಡಬಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಈ ವಿಷಯವನ್ನು ಒಳ್ಳೆ ಹುಡುಗ ಪ್ರಥಮ್ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಜಮಾರ್ತಾಂಡ ಚಿತ್ರಕ್ಕೆ ರಾಮ್ ನಾರಾಯಣ್ ನಿರ್ದೇಶನವಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ಈ ಹಿಂದೆ ನಿಖಿಲ್ ಕುಮಾರಸ್ವಾಮಿ ನಟನೆಯ ಮೊದಲ ಚಿತ್ರ ಜಾಗ್ವಾರ್ನಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ದೀಪ್ತಿ ಸಾತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











