ಪುನೀತ್ ರಾಜ್ಕುಮಾರ್ ‘ಶಾಲೆ’ ಕನಸಿಗೆ ಜೀವ
ದಿ.ಪುನೀತ್ ರಾಜ್ಕುಮಾರ್ ಕನಸಿಗೆ ಈ ಬಾರಿಯ ರಾಜ್ಯ ಬಜೆಟ್ ಜೀವ ತುಂಬಿದೆ! ಮೈಸೂರು- ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದ ಅವಕಾಶ ವಂಚಿತ ಹೆಣ್ಣುಮಕ್ಕಳಿಗೆ ಶಾಲೆಯೊಂದು ಕಟ್ಟಬೇಕೆಂಬುದು ಪುನೀತ್ ಕನಸಾಗಿತ್ತು.
ಆಶ್ರಮದಲ್ಲಿ 200 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲರೂ ಮೈಸೂರಿನ ವಿವಿಧ ಶಾಲೆ-ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗಾಗಿ ಈ ಮಕ್ಕಳು ಶಕ್ತಿಧಾಮದಲ್ಲೇ ಕಲಿಯಬೇಕು. ಅದಕ್ಕೊಂದು ಶಾಲೆ ನಿರ್ಮಾಣವಾಗಬೇಕೆಂದು ಪುನೀತ್ ರಾಜ್ ಕುಮಾರ್ ಬಯಸಿದ್ದರು.
'ಕನ್ನಡದ ಕೋಟ್ಯಧಿಪತಿ' ರಿಯಾಲಿಟಿ ಶೋನಿಂದ ಬಂದ ಹಣವನ್ನು ಶಕ್ತಿಧಾಮದ ಅಭಿವೃದ್ಧಿಗೆ ವಿನಿಯೋಗಿಸಿದ್ದರು. ಜೊತೆಗೆ ಶಕ್ತಿಧಾಮ ಆವರಣದಲ್ಲೇ ಶಾಲೆ ನಿರ್ಮಾಣ ಮಾಡಲು 4 ಎಕರೆ ಜಾಗ ಗುರುತು ಮಾಡಲಾಗಿತ್ತು. 15 ಕೋಟಿ ವೆಚ್ಚದ ಅಂದಾಜು ಯೋಜನಾ ವೆಚ್ಚದ ಪಟ್ಟಿ ತಯಾರಿಸಲಾಗಿತ್ತು. 1ರಿಂದ 8ನೇ ತರಗತಿವರೆಗೆ ಶಾಲೆ ನಡೆಸಲು ಅನುಮತಿ ಸಿಕ್ಕಿತ್ತು.

2021ರ ಅ.29ರಂದು ಸಾರ್ವಜನಿಕರ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಕೂಡ ಶಕ್ತಿಧಾಮಕ್ಕೆ ತೆರಳಿ ಸ್ಥಳ ಪರಿಶೀಲಿಸಿ ಹೋಗಿದ್ದರು. ಆದರೆ, ಪುನೀತ್ ರಾಜ್ಕುಮಾರ್ ನಿಧನದಿಂದ ಶಾಲೆ ಪ್ರಾರಂಭಿಸುವ ಪ್ರಕ್ರಿಯೆ ಅರ್ಧಕ್ಕೆ ನಿಂತಿತ್ತು. ಆದರೆ, ಇದೀಗ ರಾಜ್ಯ ಸರಕಾರ ಬಜೆಟ್ನಲ್ಲಿ ಶಕ್ತಿಧಾಮಕ್ಕೆ ವಿಶೇಷ ನೆರವು ಘೋಷಿಸಿರುವುದರಿಂದ ಪುನೀತ್ ಕನಸಿಗೆ ಜೀವ ಬಂದಿದ್ದು, ಶೀಘ್ರದಲ್ಲೇ ಆಶ್ರಮದೊಳಗೆ ಶಾಲೆಯೊಂದು ತಲೆ ಎತ್ತಲಿದೆ.
ಪುನೀತ್ ರಾಜ್ ಕುಮಾರ್ ಕನಸನ್ನು ನನಸು ಮಾಡುವ ಉದ್ದೇಶದಿಂದ ಶಕ್ತಿಧಾಮದ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಮ್ಯಾನೇಜಿಂಗ್ ಟ್ರಸ್ಟಿ ಜಯದೇವ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಶಕ್ತಿಧಾಮದಲ್ಲಿ ಶಾಲೆ ಸ್ಥಾಪನೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದರು. ಅಲ್ಲದೆ, ಏನಿದು ಯೋಜನೆ? ಎಷ್ಟು ಖರ್ಚಾಗುತ್ತದೆ ಎಂಬ ಡಿಪಿಆರ್ ಅನ್ನು ಸಿಎಂ ಗಮನಕ್ಕೆ ತಂದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಿಎಂ, ಇದೊಂದು ಉತ್ತಮ ಕಾರ್ಯ. ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈ ಬಜೆಟ್ನಲ್ಲಿ ಶಕ್ತಿಧಾಮಕ್ಕೆ ವಿಶೇಷ ನೆರವು ಘೋಷಣೆ ಮಾಡಿದ್ದಾರೆ.
ಏನಿದು ಶಕ್ತಿಧಾಮ?
ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಡಾ.ರಾಜ್ಕುಮಾರ್ ಪ್ರಯತ್ನದ ಲವಾಗಿ ಅವಕಾಶ ವಂಚಿತ ಹೆಣ್ಣುಮಕ್ಕಳಿಗೆ ಶಕ್ತಿಧಾಮವನ್ನು 1998ರಲ್ಲಿ ಶುರು ಮಾಡಿದ್ದರು. ಇದಕ್ಕಾಗಿ ಡಾ.ರಾಜ್ಕುಮಾರ್ ಮೈಸೂರಿನ ಕಲಾಮಂದಿರದಲ್ಲಿ ಮ್ಯೂಸಿಕಲ್ ನೈಟ್ ನಡೆಸಿದ್ದರು. ಇದರಿಂದ 67 ಲಕ್ಷ ಸಂಗ್ರಹವಾಗಿತ್ತು. ಸುತ್ತೂರು ಮಠದ ಶ್ರೀ 1.5 ಎಕರೆ ಜಾಗ ನೀಡಿದ್ದರು. ನಂತರ ಶಕ್ತಿಧಾಮ ತಲೆ ಎತ್ತಿತು. ಇದುವರೆಗೆ 4 ಸಾವಿರ ಹೆಣ್ಣು ಮಕ್ಕಳು ಆಶ್ರಮದ ಪ್ರಯೋಜನ ಪಡೆದುಕೊಂಡಿದ್ದಾರೆ.
ಶಕ್ತಿಧಾಮವನ್ನು ಶಿವರಾಜ್ ಕುಮಾರ್-ಗೀತಾ ಶಿವರಾಜ್ ಕುಮಾರ್ ನೋಡಿಕೊಳ್ಳುತ್ತಿದ್ದು, ಇತ್ತೀಚೆಗೆ ಶಿವಣ್ಣ ಹಾಗೂ ಗೀತಾ ಅವರು ಹಲವು ಭಾರಿ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಮಕ್ಕಳೊಡನೆ ಖೋ-ಖೋ ಆಡಿದ ವಿಡಿಯೋ, ಮಕ್ಕಳನ್ನು ಜಾಲಿ ರೈಡ್ಗೆ ಕರೆದೊಯ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು. ಶಕ್ತಿಧಾಮದ ಮಕ್ಕಳನ್ನು ತಮ್ಮ ಬೆಂಗಳೂರಿನ ನಿವಾಸಕ್ಕೆ ಕರೆತಂದಿದ್ದ ಶಿವರಾಜ್ ಕುಮಾರ್ ದಂಪತಿ ಇಲ್ಲಿನ ನಂದಿ ಬೆಟ್ಟ ಸೇರಿದಂತೆ ಹಲವು ಸ್ಥಳಗಳಿಗೆ ಪಿಕ್ನಿಕ್ಗೆ ಸಹ ಕರೆದೊಯ್ದಿದ್ದರು.


Click it and Unblock the Notifications











