Shiva Rajkumar: ಶಕ್ತಿಧಾಮದ ಮಕ್ಕಳಲ್ಲಿ ಅಪ್ಪುವನ್ನು ಕಾಣುತ್ತಿದ್ದೇನೆ: ಶಿವರಾಜ್ ಕುಮಾರ್
ಸಿಎಂ ಬಸವರಾಜ ಬೊಮ್ಮಾಯಿ ಇಂದು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿ, ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು ಹಾಗೂ ಶಕ್ತಿಧಾಮ ವಿದ್ಯಾಶಾಲಾ ಶಂಕುಸ್ಥಾಪನೆ ಸಹ ಮಾಡಿದರು.
ಈ ಸಮಯದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ''ಸಿಎಂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ರೀತಿ ಎಂದು ವರ್ತಿಸಲಿಲ್ಲ. ಅವರೊಬ್ಬ ಕಾಮನ್ ಮ್ಯಾನ್'' ಎಂದು ಶ್ಲಾಘಿಸಿದರು.
''ಶಕ್ತಿಧಾಮದಲ್ಲಿ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ಕಟ್ಟಡ ಲೋಕಾರ್ಪಣೆ ಹಾಗೂ
ನನಗೆ ಇಂದು ಬಹಳ ಖುಷಿಯಾಗುತ್ತಿದೆ. ಇನ್ ಫೋಸಿಸ್ ನಿಂದ ಇಂತಹ ಕಟ್ಟಡ ನೀಡಿದ್ದು, ಸುಧಾಮೂರ್ತಿಯವರಿಗೆ ಸದಾ ಚಿರ ಋಣಿ ಆಗಿರುತ್ತೇನೆ'' ಎಂದರು ಶಿವರಾಜ್ ಕುಮಾರ್.
''ಸಿಎಂ ಅವರು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಭಾವನೆಯನ್ನು ನಟಿಸಲು ಆಗಲ್ಲ. ಹೀಗಾಗಿ ಅವರ ಭಾವನಾತ್ಮಕತೆ ನಮಗೆ ಸ್ಪೂರ್ತಿಯಾಗಿದ್ದು, ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ'' ಎಂದರು.

ಉಸಿರಿರುವ ವರೆಗೆ ಮಕ್ಕಳಿಗೆ ಜೊತೆಯಾಗಿರುತ್ತೇನೆ: ಶಿವಣ್ಣ
''ಜೆಎಸ್ ಎಸ್ ವಿದ್ಯಾಪೀಠದೊಂದಿಗೆ ನಮ್ಮ ಕುಟುಂಬದ ನಂಟಿದೆ. ಅಮ್ಮ ಶಕ್ತಿಧಾಮ ಪ್ರಾರಂಭಿಸಿದಾಗ, ಅಪ್ಪ ಅಮ್ಮ ಶಕ್ತಿಧಾಮ ಮುನ್ನಡೆಸಿಕೊಂಡು ಬಂದರು. ಬಳಿಕ ಗೀತಾನಿಗೆ ಆ ಭಾಗ್ಯ ಸಿಕ್ಕಿತು. ಅದಾದ ಮೇಲೆ ಅಪ್ಪು ನಮ್ಮಿಂದ ದೂರ ಆದ ಮೇಲೆ ಕಳೆದ ಏಳೆಂಟು ತಿಂಗಳಿಂದ ಇಲ್ಲಿಗೆ ಹೆಚ್ಚಾಗಿ ಬರಲು ಆರಂಭಿಸಿದೆ. ಡಿಸೆಂಬರ್ ನಿಂದಲೇ ಅಪ್ಪು ವನ್ನು ಈ ಮಕ್ಕಳಲ್ಲಿ ನೋಡಿ ಸಮಾಧಾನ ಪಡೆಯುತ್ತಿದ್ದೇನೆ. ಈ ಮಕ್ಕಳು ನನ್ನನ್ನು ಅಣ್ಣ, ತಂದೆಯಾಗಿ ನೋಡುತ್ತಾರೆ. ನನ್ನ ಉಸಿರು ಇರುವವರೆಗೂ ನಾನು ನಿಮ್ಮ ಜತೆಗಿರುತ್ತೇನೆ. ಶಕ್ತಿಧಾಮಕ್ಕೆ ಗೀತಾ ಏನೇ ಮಾಡಿದರೂ ಅವಳ ಶಕ್ತಿಗೆ ನಾನು ಯುಕ್ತಿಯಾಗಿ ಇರುತ್ತೇನೆ'' ಎಂದು ಹೇಳಿದರು.

15 ಕೋಟಿ ವೆಚ್ಚದಲ್ಲಿ ಶಾಲೆ ನಿರ್ಮಾಣ
ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣ ಮಾಡಬೇಕು ಎಂಬುದು ದೊಡ್ಮನೆ ಕುಟುಂಬದ ಬಹು ವರ್ಷಗಳ ಕನಸಾಗಿತ್ತು, ಪುನೀತ್ ರಾಜ್ಕುಮಾರ್ ಸಹ ಇದೇ ಕನಸು ಹೊಂದಿದ್ದರು. ಇತ್ತಿಚೆಗೆ ಬಜೆಟ್ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ ಶಾಲೆ ನಿರ್ಮಾಣಕ್ಕೆ ಅನುದಾನ ಘೋಷಿಸಿದ್ದರು. ಶಕ್ತಿಧಾಮ ಆವರಣದಲ್ಲೇ ಶಾಲೆ ನಿರ್ಮಾಣ ಮಾಡಲು 4 ಎಕರೆ ಜಾಗ ಗುರುತು ಮಾಡಲಾಗಿದ್ದು. 15 ಕೋಟಿ ವೆಚ್ಚದ ಅಂದಾಜು ಯೋಜನಾ ವೆಚ್ಚದ ಪಟ್ಟಿ ತಯಾರಿಸಲಾಗಿದೆ. 1ರಿಂದ 8ನೇ ತರಗತಿವರೆಗೆ ಶಾಲೆ ನಡೆಸಲು ಅನುಮತಿ ಸಿಕ್ಕಿದೆ. ಶಾಲೆ ನಿರ್ಮಾಣದ ಶಂಕುಸ್ಥಾಪನೆ ಇಂದು ನೆರವೇರಿದೆ.
Recommended Video


ಸಿಎಂ ಅನ್ನು ಭೇಟಿಯಾಗಿದ್ದ ಶಿವರಾಜ್ ಕುಮಾರ್ ಹಾಗೂ ಇತರರು
ಪುನೀತ್ ರಾಜ್ ಕುಮಾರ್ ಕನಸನ್ನು ನನಸು ಮಾಡುವ ಉದ್ದೇಶದಿಂದ ಶಕ್ತಿಧಾಮದ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಮ್ಯಾನೇಜಿಂಗ್ ಟ್ರಸ್ಟಿ ಜಯದೇವ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು ಕೆಲವು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಶಕ್ತಿಧಾಮದಲ್ಲಿ ಶಾಲೆ ಸ್ಥಾಪನೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದರು. ಅಲ್ಲದೆ, ಏನಿದು ಯೋಜನೆ? ಎಷ್ಟು ಖರ್ಚಾಗುತ್ತದೆ ಎಂಬ ಡಿಪಿಆರ್ ಅನ್ನು ಸಿಎಂ ಗಮನಕ್ಕೆ ತಂದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಿಎಂ, ಇದೊಂದು ಉತ್ತಮ ಕಾರ್ಯ. ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈ ಬಜೆಟ್ನಲ್ಲಿ ಶಕ್ತಿಧಾಮಕ್ಕೆ ವಿಶೇಷ ನೆರವು ಘೋಷಣೆ ಮಾಡಿದ್ದಾರೆ.

1998 ರಲ್ಲಿ ಪಾರ್ವತಮ್ಮ ರಾಜ್ಕುಮಾರ್ ಪ್ರಾರಂಭಿಸಿದ್ದ ಶಕ್ತಿಧಾಮ
ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಡಾ.ರಾಜ್ಕುಮಾರ್ ಪ್ರಯತ್ನದ ಲವಾಗಿ ಅವಕಾಶ ವಂಚಿತ ಹೆಣ್ಣುಮಕ್ಕಳಿಗೆ ಶಕ್ತಿಧಾಮವನ್ನು 1998ರಲ್ಲಿ ಶುರು ಮಾಡಿದ್ದರು. ಇದಕ್ಕಾಗಿ ಡಾ.ರಾಜ್ಕುಮಾರ್ ಮೈಸೂರಿನ ಕಲಾಮಂದಿರದಲ್ಲಿ ಮ್ಯೂಸಿಕಲ್ ನೈಟ್ ನಡೆಸಿದ್ದರು. ಇದರಿಂದ 67 ಲಕ್ಷ ಸಂಗ್ರಹವಾಗಿತ್ತು. ಸುತ್ತೂರು ಮಠದ ಶ್ರೀ 1.5 ಎಕರೆ ಜಾಗ ನೀಡಿದ್ದರು. ನಂತರ ಶಕ್ತಿಧಾಮ ತಲೆ ಎತ್ತಿತು. ಇದುವರೆಗೆ 4 ಸಾವಿರ ಹೆಣ್ಣು ಮಕ್ಕಳು ಆಶ್ರಮದ ಪ್ರಯೋಜನ ಪಡೆದುಕೊಂಡಿದ್ದಾರೆ. ಶಕ್ತಿಧಾಮವನ್ನು ಶಿವರಾಜ್ ಕುಮಾರ್-ಗೀತಾ ಶಿವರಾಜ್ ಕುಮಾರ್ ನೋಡಿಕೊಳ್ಳುತ್ತಿದ್ದು, ಇತ್ತೀಚೆಗೆ ಶಿವಣ್ಣ ಹಾಗೂ ಗೀತಾ ಅವರು ಹಲವು ಭಾರಿ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ.


Click it and Unblock the Notifications











