ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಕುಟುಂಬ ಬಯಸಿದಂತೆ ನಿರ್ಮಿಸಿದ್ದೇವೆ ಎಂದ ಸಿಎಂ
ಹದಿಮೂರು ವರ್ಷದ ಹೋರಾಟದ ಫಲವಾಗಿ ಹುಟ್ಟೂರು ಮೈಸೂರಿನಲ್ಲೇ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.
ಮೈಸೂರಿನ ಉದ್ದೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕದ ಉದ್ಘಾಟನೆ ಸಮಾರಂಭದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುಧ್, ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಎಲ್.ನಾಗೇಂದ್ರ ಭಾಗವಹಿಸಿದ್ದರು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ನಾನಾ ಭಾಷೆಗಳಲ್ಲಿ ನಟನೆ ಮಾಡಿರುವ ಬಹುಭಾಷಾ ನಟ. ವಿಷ್ಣು ಸ್ಮಾರಕ ಜನಪ್ರಿಯ ಪ್ರವಾಸಿ ತಾಣವಾಗಬೇಕೆಂದು ಆಶಿಸಿದರು.

ಸಿಎಂ ಹೇಳಿದ್ದೇನು?
ವಿಷ್ಣುವರ್ಧನ್ ಅವರನ್ನು ಜನ ಸಾಹಸ ಸಿಂಹ ಎಂದು ಕರೆಯುತ್ತಾರೆ. ಅವರ ಮರಣ ನಂತರ ಸ್ಮಾರಕ ನಿರ್ಮಾಣಕ್ಕೆ ಇಲ್ಲಿ ಜಾಗ ನೀಡಲಾಯಿತು. 11 ಕೋಟಿ ರೂ. ವೆಚ್ಚದಲ್ಲಿ ವಿಷ್ಣು ಅವರ ಸ್ಮಾರಕ ನಿರ್ಮಾಣವಾಗಿದೆ. ವಿಷ್ಣುವರ್ಧನ್ ಅವರ ಕುಟುಂಬ ಬಯಸಿದಂತೆ ಎಲ್ಲವೂ ಆಗಿದೆ
ಎಲ್ಲರೂ ಸೇರಿ ಸಂತೋಷದಿಂದ ಸ್ಮಾರಕ ಲೋಕಾರ್ಪಣೆ ಮಾಡಿದ್ದೇವೆ ಎಂದು ತಿಳಿಸಿದರು. 2020 ಸೆ.15ರಂದು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಇದೀಗ ಕಾಮಗಾರಿ ಮುಗಿದ ವಿಷ್ಣುವರ್ಧನ್ ತುಂಬಾ ಪ್ರೀತಿಸುತ್ತಿದ್ದ ಮೈಸೂರಿನಲ್ಲೇ ಸ್ಮಾರಕ ತಲೆ ಎತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ವಿಷ್ಣು ಹುಟ್ಟೂರಿನಲ್ಲೇ ಸ್ಮಾರಕ
ಸಾಹಸಸಿಂಹ ಡಾ.ವಿಷ್ಣುವರ್ಧನ್ ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣವನ್ನು ಮೈಸೂರಿನಲ್ಲೇ ಮುಗಿಸಿದ್ದರು. ಇಲ್ಲಿನ ಚಾಮುಂಡಿಪುರಂನಲ್ಲೇ ವಾಸವಿದ್ದರು. ತಮ್ಮ ಚಿತ್ರದ ಶೂಟಿಂಗ್ ಅನ್ನು ಮೈಸೂರಿನಲ್ಲಿ ಇಟ್ಟುಕೊಂಡರೆ ಸಂಭ್ರಮಿಸುತ್ತಿದ್ದರು. ಚಾಮುಂಡಿಬೆಟ್ಟ ಅಂದ್ರೆ ವಿಷ್ಣುವರ್ಧನ್ ಅವರ ನೆಚ್ಚಿನ ತಾಣವಾಗಿತ್ತು. ದೈಹಿಕ ಕಸರತ್ತಿಗೆ ವಿಷ್ಣುವರ್ಧನ್ ತಂದೆ ಚಾಮುಂಡಿಬೆಟ್ಟವನ್ನು ಹತ್ತಿ ಇಳಿಯುತ್ತಿದ್ದರು. ಇಂತಹ ವಿಷ್ಣುವರ್ಧನ್ ನೆಚ್ಚಿನ ಊರಿನಲ್ಲೇ ಸ್ಮಾರಕ ನಿರ್ಮಾಣ ಆಗಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಮಾರಕದಲ್ಲಿ ಏನುಂಟು?
ಇದೊಂದು ಸ್ಮಾರಕವಾಗಿ ಉಳಿಯದೆ ಕಲೆ ಹಾಗೂ ಕನ್ನಡಿಗರ ಅಸ್ಮಿತೆಯಾಗಬೇಕೆಂಬ ಉದ್ದೇಶದಿಂದ ವಸ್ತುಸಂಗ್ರಹಾಲಯ, ಅಭಿನಯ ತರಬೇತಿ ಶಾಲೆ, ನಾಟಕೋತ್ಸವ, ಚಿತ್ರೋತ್ಸವಗಳನ್ನು ನಡೆಸುವಂತಹ ವೇದಿಕೆಗಳು ಇರಲಿವೆ. ವಿಷ್ಣುವರ್ಧನ್ ಅವರ 600ಕ್ಕೂ ಹೆಚ್ಚು ಅಪರೂಪ ಫೋಟೋ, ಅವರು ಬಳಸುತ್ತಿದ್ದ ವಸ್ತುಗಳು, ವಿಭೂತಿ, ಬಟ್ಟೆ, ಬಂದ ಪ್ರಶಸ್ತಿ ಎಲ್ಲವನ್ನೂ ಮ್ಯೂಸಿಯಂನಲ್ಲಿ ಕಾಣಬಹುದು. 200 ಮಂದಿ ಕೂರುವ ಸಭಾಂಗಣ ಇದ್ದು, ಚಿತ್ರೋತ್ಸವ ಹಾಗೂ ನಾಟಕೋತ್ಸವ ನಡೆಸಬಹುದು. ಕೊಠಡಿಗಳು ಇದ್ದು, ನಾಟಕ, ಸಿನಿಮಾ ಶಿಬಿರಗಳನ್ನು ನಡೆಸಬಹುದು.

7 ಅಡಿ ಪ್ರತಿಮೆ ನಿರ್ಮಾಣ
ಡಾ.ವಿಷ್ಣುವರ್ಧನ್ ಅವರ ನೆನಪು ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಉದ್ದೇಶದಿಂದ 7 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮೈಸೂರಿನ ಹೆಸರಾಂತ ಶಿಲ್ಪಕಲಾವಿದ ಅರುಣ್ ಯೋಗಿರಾಜ್ ಪ್ರತಿಮೆ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











