ಚಿತ್ರಮಂದಿರಗಳಿಗೆ ಶೀಘ್ರ ಸಿಹಿಸುದ್ದಿ: ಸಿಎಂ ಭರವಸೆ
ಕೊರೊನಾ ಪ್ರಕರಣಗಳ ನಿಯಂತ್ರಣಕ್ಕಾಗಿ ಹೋಟೆಲ್, ಬಾರು, ಪಬ್ಗಳ ಮೇಲೆ ಹೇರಲಾಗಿದ್ದ 50% ಆಕ್ಯುಪೆನ್ಸಿ ನಿಯಮ ತೆಗೆದ ಸರ್ಕಾರ ಚಿತ್ರಮಂದಿರವನ್ನು ಮಾತ್ರ ಪೂರ್ಣ ತೆರೆಯಲು ಅವಕಾಶ ನೀಡಿಲ್ಲ. ಇದರ ಬಗ್ಗೆ ಚಿತ್ರರಂಗದ ಹಲವರು ಅಸಮಾಧಾನ ಹೊರಹಾಕಿದ್ದರು.
ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಮನವಿ ಸಲ್ಲಿಸಿದರು. 50% ಆಕ್ಯುಪೆನ್ಸಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಈ ಸಮಯ ಅವರು ಸಿಎಂ ಅವರ ಗಮನ ಸೆಳೆದರು.
ಸಿಎಂ ಭೇಟಿ ಬಳಿಕ ಮಾತನಾಡಿದ ಜೈರಾಜ್, ''ಚಿತ್ರಮಂದಿರಗಳಲ್ಲಿ ಪೂರ್ಣ ಆಸನ ಭರ್ತಿ ವಿಚಾರಕ್ಕೆ ಸಂಬಂಧಿಸಿ ಮುಂದಿನ 4-5 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ತಜ್ಞರ ಜತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ನಮ್ಮ ಮನವಿಗೆ ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ'' ಎಂದರು.

ಚಿತ್ರಮಂದಿರಗಳ ಮೇಲೆ ಹೇರಲಾಗಿರುವ 50% ಆಕ್ಯುಪೆನ್ಸಿ ನಿಯಮವನ್ನು ಹಿಂಪಡೆಯದೇ ಇರುವುದಕ್ಕೆ ನಟ ಶಿವರಾಜ್ ಕುಮಾರ್, ವಿನೋದ್ ರಾಜ್ಕುಮಾರ್ ಸೇರಿದಂತೆ ಹಲವು ನಿರ್ಮಾಪಕರು, ಚಲನಚಿತ್ರ ವಾಣಿಜ್ಯ ಮಂಡಳಿ ಇನ್ನೂ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿವರಾಜ್ ಕುಮಾರ್ ಈ ಬಗ್ಗೆ ಮಾತನಾಡಿ, ''ನಾವು ಕೊರೊನದ ಜೊತೆ ಜೊತೆಗೆ ಬದುಕಬೇಕಿದ್ದು, ಅದರ ಜೊತೆಗೆ ಬದುಕಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಎಲ್ಲಾ ಕ್ಷೇತ್ರಗಳಿಗೂ 50:50 ರೂಲ್ಸ್ನಿಂದ ರಿಲ್ಯಾಕ್ಸ್ ಕೊಡಲಾಗಿದೆ. ಆದರೆ ಸಿನಿಮಾ ಮಂದಿರಗಳಿಗೆ ಮಾತ್ರ 50:50 ರೂಲ್ಸ್ ಮುಂದುವರಿಸಲಾಗಿದ್ದು, ನಿನ್ನೆಯಷ್ಟೇ ಕೂಡ ನಾನು ಈ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ಆದರೆ ಸಿನಿಮಾ ಮಂದಿರಗಳಿಗೆ ಯಾಕೆ ರಿಲ್ಯಾಕ್ಸ್ ಕೊಟ್ಟಿಲ್ಲ ಎಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ನಮಗೆ ಸಾಕಷ್ಟು ಬಾರಿ ಅನುಕೂಲ ಮಾಡಿಕೊಟ್ಟಿದ್ದು, ಈಗಲೂ ನಮಗೆ ಅನುಕೂಲ ಮಾಡಿಕೊಡುವ ಭರವಸೆ ಇದೆ'' ಎಂದಿದ್ದರು. ಆದರೆ ಶಿವರಾಜ್ ಕುಮಾರ್ ಅವರು ಇಂದು ಸಿಎಂ ಅವರನ್ನು ಭೇಟಿ ಆಗಿಲ್ಲ.
ಜನವರಿ ಮೊದಲ ಹಾಗೂ ಎರಡನೇ ವಾರದಲ್ಲಿ ಏರುಗತಿಯಲ್ಲಿದ್ದ ಕೊರೊನಾ ಪ್ರಕರಣಗಳು ಕೆಲವು ದಿನಗಳಿಂದೀಚಿಗೆ ನಿಧಾನಕ್ಕೆ ಕಡಿಮೆ ಆಗುತ್ತಿವೆ. ಹಾಗಾಗಿ ಸರ್ಕಾರವು ಕೋವಿಡ್ ನಿಯಂತ್ರಣಕ್ಕಾಗಿ ಹೇರಿದ್ದ ನಿಯಮಗಳಿಗೆ ಸಡಿಲಿಕೆ ನೀಡಿದೆ. ಆದರೆ ಚಿತ್ರಮಂದಿರದ ಮೇಲೆ ಹೇರಲಾಗಿದ್ದ ನಿಯಮವನ್ನು ಮಾತ್ರ ಹಿಂಪಡೆದಿಲ್ಲ. ಇದು ಚಿತ್ರರಂಗದವರ ಅಸಮಾಧಾನಕ್ಕೆ ಕಾರಣವಾಗಿದೆ.


Click it and Unblock the Notifications











