ಬೆದರಿಕೆ ಮತ್ತು ನಿಂದನೆ ಆರೋಪ: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ ದೂರು ದಾಖಲು
ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟಿ ನಯನಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಿರುತೆರೆಯ ಹಾಸ್ಯ ಕಲಾವಿದ ಸೋಮಶೇಖರ್ ದೂರಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ 'ಕಾಮಿಡಿ ಗ್ಯಾಂಗ್ಸ್' ಶೋನಲ್ಲಿ ಬಹುಮಾನವಾಗಿ ಬಂದ ಹಣದ ಹಂಚಿಕೆ ವಿಚಾರದಲ್ಲಿ ಮತ್ತೊಬ್ಬ ಸ್ಪರ್ಧಿ ಸೋಮಶೇಖರ್ ಎಂಬುವವರಿಗೆ ನಟಿ ನಯನಾ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
'ಕಾಮಿಡಿ ಗ್ಯಾಂಗ್ಸ್' ಕಾರ್ಯಕ್ರಮದಲ್ಲಿ ಬಹುಮಾನವಾಗಿ ನನಗೆ ಹಣ ಬಂದಿದೆ. ಆ ಹಣದಲ್ಲಿ ಸೀನಿಯರ್ಗಳಾದ ಪಿಯುಸಿ ಟೀಂನ ಅನಿಲ್ ಹಾಗೂ ಚಿದಾನಂದ್ ಅವರಿಗೆ ಪಾಲು ಕೊಡುವಂತೆ ನಯನಾ ಕೇಳುತ್ತಿದ್ದಾರೆ. ನಾನು ಒಪ್ಪದೇ ಇದ್ದಾಗ ಆಡಿಯೋ ಮತ್ತು ಮೆಸೇಜ್ ಮೂಲಕ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ಸೋಮಶೇಖರ್ ಆರೋಪಿಸಿದ್ದಾರೆ.
ಶೋನಲ್ಲಿ ದ್ವಿತೀಯ ಬಹುಮಾನವಾಗಿ ಪಿಯುಸಿ ತಂಡಕ್ಕೆ 3 ಲಕ್ಷ ಹಣ ಬಂದಿತ್ತು. ಅದರಲ್ಲಿ ಶೇ. 30ರಷ್ಟು ಕಟ್ ಆಗಿ ಪ್ರತಿಯೊಬ್ಬರಿಗೆ 70 ಸಾವಿರ ಸಿಕ್ಕಿತ್ತು. ಪಿಯುಸಿ ತಂಡದಲ್ಲಿ ಸೋಮಶೇಖರ್ ಸೇರಿ ಇನ್ನೂ ಮೂವರು ನಟಿಸಿದ್ದರು. ಜ್ಯೂನಿಯರ್ ಆರ್ಟಿಸ್ಟ್ಗಳು ಎಂದು ಮೂವರಿಗೆ ಹಣ ಹಾಗೂ ತಂಡ ಮತ್ತಿಬ್ಬರು ಸೀನಿಯರ್ಸ್ ಅನೀಶ್, ಚಿದಾನಂದ್ ಅವರಿಗೆ ತಿಂಗಳ ಸಂಭಾವನೆ ನೀಡಲಾಗಿದೆ. ಆದರೂ ಕೂಡ ಇವರಿಬ್ಬರಿಗೂ ಹಣ ನೀಡುವಂತೆ ನಯನಾ ಧಮ್ಕಿ ಹಾಕಿದ್ದಾರೆ ಎಂದು ಸೋಮಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

ಸೀನಿಯರ್ಸ್ಗೆ ಪ್ರತಿ ತಿಂಗಳು ಸಂಭಾವನೆ ಬರುತ್ತದೆ. ಹಾಗಾಗಿ ಅವರಿಗೆ ಬಹುಮಾನದ ಹಣದಲ್ಲಿ ಯಾಕೆ ಪಾಲು ಕೊಡಬೇಕು ಎನ್ನುವುದು ಸೋಮಶೇಖರ್ ವಾದ. ಆದರೆ ಅನೀಶ್ ಹಾಗೂ ಚಿದಾನಂದ ಪರವಾಗಿ ನಟಿ ನಯನಾ ಹಣ ಕೇಳುತ್ತಿದ್ದಾರೆ. "ಅವರಿಬ್ಬರಿಗೂ ಹಣದ ಅವಶ್ಯಕತೆ ಇದೆ. ಆದರೆ ಅವರ ಹಣ ಇಟ್ಟುಕೊಂಡು ನೀನು ಕೊಡದೇ ಇದ್ದರೆ ಹೇಗೆ? "ಮಗನೇ, ನಿನಗೆ ಇದು ಕೊನೆ ಕಾಲ್, ಅದು ಹೇಗೆ ಬೆಂಗಳೂರಿನಲ್ಲಿ ಓಡಾಡುತ್ತೀಯ ನೋಡ್ತೀನಿ" ಎಂದು ನಟಿ ನಯನಾ ಬೆದಿರಿಕೆ ಹಾಕಿರುವ ಆಡಿಯೋ ಮೆಸೇಜ್ ವೈರಲ್ ಆಗಿದೆ.

"ನೀನು ಹಣ ಕೊಟ್ಟರೆ ಸರಿ, ಇಲ್ಲ ಅಂದರೆ ಪರಿಣಾಮ ನೆಟ್ಟಗಿರಲ್ಲ. ನಾವು ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಇದ್ದೀವಿ. ಅನೀಶ್, ಚಿದಾನಂದ್ ಕಂಪ್ಲೇಟ್ ಕೊಡುತ್ತಾರೆ. ಆಮೇಲೆ ಪೊಲೀಸರು ನಿನ್ನನ್ನು ಹುಡುಕಿಕೊಂಡು ಬರುತ್ತಾರೆ. ನಿನ್ನ ಹತ್ರ ಹಣ ಇದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಅದು ಎಲ್ಲರ ಹಣ. ಎಲ್ಲರಿಗೂ ಕೊಡಬೇಕು ಎಂದು ನಿನ್ನ ಅಕೌಂಟ್ಗೆ ಹಾಕಿಸಿದ್ದು, ನೀನು ಕೊಡಬೇಕು, ಇಲ್ಲ ಅಂದರೆ ನಾವು ಏನು ಮಾಡಲು ಹೇಸುವುದಿಲ್ಲ" ಎಂದು ನಯನಾ ಕಳುಹಿಸಿರುವ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ.


Click it and Unblock the Notifications











