Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಳೆಯರ ಸಿನಿಮಾಕ್ಕಾಗಿ ಪೆನ್ನು ಕೈಗೆತ್ತಿಕೊಂಡ ಡಾಲಿ, 'ಆರ್ಕೆಸ್ಟ್ರಾ'ಕ್ಕೆ ಎಂಟು ಹಾಡು
ನಟ ಡಾಲಿ ಧನಂಜಯ್ ಬಹುಮುಖ ಪ್ರತಿಭೆ. ನಟನೆ ಮಾತ್ರವಲ್ಲ ಸಾಹಿತ್ಯದ ಬಗ್ಗೆಯೂ ಅವರಿಗೆ ಅಪಾರ ಪ್ರೀತಿ. ಅದರಲ್ಲಿ ಸಿನಿಮಾಕ್ಕೆ ಹಾಡು ಬರೆಯುವುದು ಡಾಲಿಯ ಮೆಚ್ಚಿನ ಆಸಕ್ತಿ. ಈಗಾಗಲೇ ತಮ್ಮದೇ 'ಬಡವ ರಾಸ್ಕಲ್' ಸಿನಿಮಾಕ್ಕೆ ಹಾಡು ಬರೆದಿರುವ ಡಾಲಿ ಇದೀಗ ಗೆಳೆಯರ ಸಿನಿಮಾಕ್ಕೆ ಹಾಡು ಬರೆದುಕೊಟ್ಟಿದ್ದಾರೆ.
ಡಾಲಿ ಧನಂಜಯ್ ಗೆಳೆಯರೇ ಸೇರಿ ನಿರ್ಮಿಸಿರುವ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾದ ಎಂಟು ಹಾಡುಗಳಿಗೆ ಡಾಲಿ ಧನಂಜಯ್ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಈ ಸಿನಿಮಾಕ್ಕೆ ಸಂಗೀತ ನೀಡಿರುವುದು ರಘು ದೀಕ್ಷಿತ್. ಒಂದಕ್ಕಿಂತ ಒಂದು ಭಿನ್ನವಾದ ಹಾಡುಗಳು ಸಿನಮಾದಲ್ಲಿವೆ.
ಕಳೆದ ಕೆಲವು ವರ್ಷಗಳ ಹಿಂದೆ ಮೈಸೂರಿನ ಕೆಲ ಆಸಕ್ತಿ ಹುಡುಗರು ಸೇರಿ ನಿರ್ಮಾಣ ಮಾಡಿದ್ದ "ಬಾರಿಸು ಕನ್ನಡ ಡಿಂಡಿಮವ" ಹಾಡು ತುಂಬಾ ಜನಪ್ರಿಯವಾಯಿತು. ಈಗ ಅದೇ ತಂಡ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ ನಿರ್ಮಾಣ ಮಾಡಿದೆ.
'ಆರ್ಕೆಸ್ಟ್ರಾ ಮೈಸೂರು' ಚಿತ್ರತಂಡದ ಬಹುತೇಕರು ಡಾಲಿ ಗೆಳೆಯರ ಬಳಗದವರೇ ಆಗಿದ್ದು, ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದ್ದು, ನೋಡಿದವರು ಸೂಪರ್ ಎನ್ನುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ನಟನಾಗಿ ಜನರ ಮನಗೆದ್ದಿರುವ ಡಾಲಿ ಧನಂಜಯ, ರಘು ದೀಕ್ಷಿತ್ ಸಂಗೀತ ನೀಡಿರುವ ಈ ಚಿತ್ರದ ಎಂಟು ಹಾಡುಗಳನ್ನು ಬರೆದಿದ್ದಾರೆ. ಮೊದಲ ಬಾರಿಗೆ ಒಂದು ಚಿತ್ರದ ಅಷ್ಟು ಹಾಡುಗಳನ್ನು ಡಾಲಿ ರಚಿಸಿದ್ದಾರೆ.
ಗೆಳೆಯರ ಸಹಾಯದಿಂದ ಆರಂಭವಾದ ಸಿನಿಮಾ
ನಿನ್ನೆ 'ಆರ್ಕೆಸ್ಟ್ರಾ ಮೈಸೂರು' ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದ್ದು, ನಿರ್ದೇಶಕ ಸುನೀಲ್ ಮಾತನಾಡಿ, ''ನಾನು ಮೊದಲು ಮೈಸೂರಿನ ನೇತ್ರಣ್ಣ ಹಾಗೂ ಕೃಪಾಕರ್, ಸೇನಾನಿ ಅವರನ್ನು ನೆನೆಯುತ್ತೇನೆ. ಮೈಸೂರಿನಲ್ಲಿ ನಮ್ಮದೊಂದು ತಂಡ. ಗೆಳೆಯರಿಗೆಲ್ಲಾ ರಂಗಭೂಮಿಯಲ್ಲಿ ಆಸಕ್ತಿ. ಧನಂಜಯ ನನಗೆ ಕಾಲೇಜಿನಲ್ಲಿ ಸೀನಿಯರ್. ಆಗಿನಿಂದಲೂ ಗೆಳೆಯ ಮತ್ತು ಸಹಕಾರ ನೀಡಿದವ. ಮೈಸೂರು ಆರ್ಕೇಸ್ಟ್ರಾ ತುಂಬಾ ಜನಪ್ರಿಯ. ಈ ಕುರಿತು ಕಥೆ ಮಾಡಿ ಸಿನಿಮಾ ಮಾಡಬೇಕೆಂದು ಕನಸು. ಕೆಲವು ಗೆಳೆಯರ ಸಹಾಯದಿಂದ ಚಿತ್ರ ಆರಂಭಿಸಿದ್ದೆವು'' ಎಂದರು.
ನೈಜತೆಗೆ ಹೆಚ್ಚಿನ ಒತ್ತು
''ಬೆಂಗಳೂರಿನ ಗಾಂಧಿನಗರ ಸಿನಿಮಾದವರಿಗೆ ಹೆಸರುವಾಸಿ. ಹಾಗೆಯೇ, ಮೈಸೂರಿನ ಗಾಂಧಿನಗರ "ಆರ್ಕೆಸ್ಟ್ರಾ" ದವರಿಗೆ ಹೆಸರುವಾಸಿ. ಅಲ್ಲಿ ಸಂಪರ್ಕ ಮಾಡಿ ಎಲ್ಲೆಲ್ಲಿ "ಆರ್ಕೇಸ್ಟ್ರಾ" ನಡೆಯುತ್ತದೆ? ಎಂಬ ಮಾಹಿತಿ ಪಡೆದು, ಅಲ್ಲೇ ಹೋಗಿ ನೈಜವಾಗಿ ಚಿತ್ರೀಕರಣ ಮಾಡುತ್ತಿದ್ದೆವು. ಒಂದು ನೈಜತೆಗಾಗಿ, ಮತ್ತೊಂದು ಸೆಟ್ ಹಾಕುವಷ್ಟು ಹಣವಿರಲಿಲ್ಲ. 'ಆರ್ಕೇಸ್ಟ್ರಾ' ಹಾಡುಗಾರನಾಗಬೇಕೆಂಬ ಆಸೆಹೊತ್ತ ಹುಡುಗನೊಬ್ಬನ ಸುತ್ತ ಹೆಣೆದಿರುವ ಕಥೆಯಿದು'' ಎಂದು ಮಾಹಿತಿ ನೀಡಿದರು.
ಕೃಪಾಕರ, ಸೇನಾನಿ ನೆರವು ನೀಡಿದರು: ಸುನಿಲ್
''ಮೈಸೂರಿನ ಕಲಾಮಂದಿರ ಹಾಗೂ ರಂಗಾಯಣದ ಸುತ್ತ ನಾವು ಕಥೆಯ ಬಗ್ಗೆ ಮಾತನಾಡುತ್ತಾ ತಿರುಗುತ್ತಿದಾಗ, ಅದನ್ನು ಗಮನಿಸಿದ ಕೃಪಾಕರ್, ಸೇನಾನಿ ಅವರು ತಮ್ಮದೇ ಕ್ಯಾಮೆರಾ ಹಾಗೂ ಎಡಿಟಿಂಗ್ ಸೆಟಪ್ ಹಾಗೂ ಜೋಸೆಫ್ ಎಂಬ ಛಾಯಾಗ್ರಾಹಕನನ್ನು ನೀಡಿ ನಮಗೆ ಸಹಾಯ ಮಾಡಿದರು. ಚಿತ್ರೀಕರಣ ತಡವಾದರೆ ಧನಂಜಯ ಬೇಗ ಶುರುಮಾಡುವಂತೆ ಹುರಿದುಂಬಿಸುತ್ತಿದ್ದರು. ಸಂಗೀತ ನಿರ್ದೇಶಕ ರಘದೀಕ್ಷಿತ್ ನಮ್ಮ ಸಹಾಯಕ್ಕೆ ನಿಂತರು. ಈಗ ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬಿಡುಗಡೆಗೆ ಬೇಕಾದ ಅನುಕೂಲ ಮಾಡಿಕೊಡುತ್ತಿದ್ದಾರೆ. ಎಲ್ಲರಿಗೂ ಧನ್ಯವಾದ''' ಎಂದರು ಸುನಿಲ್.
ಡಾಲಿ ಧನಂಜಯ್ ಹೇಳಿದ್ದು ಹೀಗೆ
''ನಾವೆಲ್ಲಾ ಮೈಸೂರಿನ ಕಾಲೇಜ್ ನಲ್ಲಿ ನಾಟಕ ಮಾಡಬೇಕಾದರೆ, ಬೀಳುತ್ತಿದ್ದ ವಿಸಿಲ್ ಗೆ ನಮ್ಮ ತಲೆ ತಿರುಗುತ್ತಿತ್ತು. ಆಮೇಲೆ ಸಿನಿಮಾ ನಟನೆಗೆ ಬಂದ ಮೇಲೆ ವಾಸ್ತವ ಅರ್ಥವಾಯಿತು. ಆನಂತರ ಮತ್ತೆ ಜನ ಕೈ ಹಿಡಿದರು. ನನ್ನ ಮೊದಲ ದಿನಗಳಿಂದಲೂ ನನ್ನ ಸ್ನೇಹಿತರು ನನ್ನ ಜೊತೆ ಇದ್ದಾರೆ. ನಾನು ಅವರ ಜೊತೆ ಇರುತ್ತೇನೆ. ನಮ್ಮೊಂದಿಗೆ ಕೆ.ಆರ್.ಜಿ ಸ್ಟುಡಿಯೋಸ್ ಅವರು ಇದ್ದಾರೆ'' ಎಂದರು ಡಾಲಿ ಧನಂಜಯ.
ರಘು ದೀಕ್ಷಿತ್ ಸಹ ನಿರ್ಮಾಪಕ
''ನಾನು ಮೈಸೂರಿನವನು. ನಟ ನಾಗಭೂಷಣ್ ಮೂಲಕ ಈ ತಂಡದ ಪರಿಚಯವಾಯಿತು. ನಿರ್ದೇಶಕ ಸುನೀಲ್ ಪೆನ್ ಡ್ರೈವ್ ಮೂಲಕ ಈ ಚಿತ್ರದ ಕಥೆ ಕಳಿಸಿದ್ದರು. ನೋಡಿ ಕೆಲಸ ಶುರು ಮಾಡಿದೆ. ಮೈಸೂರಿನ ನೇತ್ರಣ್ಣ ಅವರ ಜಾಗವೇ ನಮ್ಮ ಆಫೀಸ್. ಡಾಲಿ ಬರೆದ ಎರಡು ಸಾಲುಗಳು ನನಗೆ ಇಷ್ಟವಾಯಿತು. ವಿಶೇಷವೆಂದರೆ ಈ ಚಿತ್ರದ ಎಂಟು ಹಾಡುಗಳನ್ನು ಡಾಲಿ ಅವರೆ ಬರೆದಿದ್ದಾರೆ. ಹಣ ಪಡೆಯದೆ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತು ಕೊಂಡಿದ್ದೇನೆ. ಹಾಗಾಗಿ ನನ್ನನ್ನು ನಿರ್ಮಾಪಕ ಅಂತ ನಿರ್ಧರಿಸಿದ್ದಾರೆ ಎಂದರು ರಘು ದೀಕ್ಷಿತ್.
ಗಣೇಶ ಹಬ್ಬ, ರಾಜ್ಯೋತ್ಸವ ಸಮಯದಲ್ಲಿ ಬಿಡುಗಡೆ
ನಾನು ಮೂಲತಃ ರಂಗಭೂಮಿಯವನು. "ಆರ್ಕೇಸ್ಟ್ರಾ" ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. ಯುವಕರ ತಂಡದ ಶ್ರಮದಿಂದ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರಕೂಡ ಚೆನ್ನಾಗಿದೆ ಎಂದರು ನಟ ದಿಲೀಪ್ ರಾಜ್. ''ಸಿನಿಮಾ ಚೆನ್ನಾಗಿದೆ. ಆತುರ ಪಟ್ಟು ಬಿಡುಗಡೆ ಮಾಡುವುದಿಲ್ಲ. ಗಣೇಶನ ಹಬ್ಬದಿಂದ ರಾಜ್ಯೋತ್ಸವದ ತನಕ 'ಆರ್ಕೇಸ್ಟ್ರಾ' ಸೀಸನ್ ಆ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ'' ಎಂದರು ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ. ಯೋಗಿ.ಜಿ.ರಾಜ್ ಸಹ ಚಿತ್ರತಂಡಕ್ಕೆ ಶುಭ ಕೋರಿದರು.