'ಕಾಂತಾರ' ಎಫೆಕ್ಟ್: ಸರ್ಕಾರಕ್ಕೆ ದೈವಾರಾಧಕ ಸಮುದಾಯ ಮನವಿ
'ಕಾಂತಾರ' ಸಿನಿಮಾ ಕರಾವಳಿಯ ದೈವ, ಭೂತಕೋಲ ಸಂಸ್ಕೃತಿಯನ್ನು ದೇಶದಾದ್ಯಂತ ಪರಿಚಯಿಸಿದ್ದು, ಅದರ ಬೆನ್ನಲ್ಲೆ ಕೆಲವು ಚರ್ಚೆಗಳಿಗೂ ಕಾರಣವಾಗಿದೆ. ಚರ್ಚೆಗಳೇನೇ ಇದ್ದರೂ, ನಾಡಿನ ಸಮೃದ್ಧ ಸಂಸ್ಕೃತಿಯನ್ನು ಕರಾವಳಿಯೇತರರಿಗೆ ಪರಿಚಯಿಸುವ ಆ ಮೂಲಕ ದೈವ ಹಾಗೂ ದೈವಾರಾಧಕರ ಸಾಂಸ್ಕೃತಿಕ ಮಹತ್ವವನ್ನು ಸಿನಿಮಾ ಸಾರಿದೆ ಎನ್ನಲಡ್ಡಿಯಿಲ್ಲ.
'ಕಾಂತಾರ' ಸಿನಿಮಾ ಬಿಡುಗಡೆ ಆದ ಬೆನ್ನಲ್ಲೆ ಸರ್ಕಾರವು, ದೈವ ನರ್ತಕರಿಗೆ 2000 ಮಾಸಾಶನ ಘೋಷಿಸಿರುವುದು ಈ ಸಿನಿಮಾ ಬೀರಿರುವ ಪರಿಣಾಮಕ್ಕೆ ಸಾಕ್ಷಿ.
ತುಳುನಾಡಿನ ದೈವಾರಾಧಕರಿಗೆ ಸರ್ಕಾರದ ಮಾಸಾಶಾನ ನೀಡುವ ಆದೇಶವನ್ನು ದೈವರಾಧನೆ ಮಾಡುವ ಸಮುದಾಯ ಸ್ವಾಗತಿಸಿದೆ. 60 ವಯಸ್ಸು ಮೇಲ್ಪಟ್ಟ ದೈವಾರಾಧಕರಿಗೆ ಸರ್ಕಾರ ಮಾಸಿಕ ಎರಡು ಸಾವಿರ ರೂಪಾಯಿ ನೀಡುವ ಚಿಂತನೆಗೆ ಸಮುದಾಯದ ಮುಖಂಡರು ಹರ್ಷ ವ್ಯಕ್ತ ಪಡಿಸಿದ್ದು, ಇದರ ಜೊತೆಗೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ನಲಿಕೆ ಸಮುದಾಯದ ಮುಖಂಡರಾದ ಪಾಂಡುರಂಗ ನಲಿಕೆ,ಪರವ ಸಮುದಾಯದ ಡಾ.ರವೀಶ್ ಪರವ ಮತ್ತು ಪಂಬದ ಸಮುದಾಯದ ಮುಖಂಡರಾದ ದಯಾನಂದ ಜಿ ಕತ್ತಲೆಸಾರ್ ಜಂಟಿ ಸುದ್ದಿಗೋಷ್ಢಿ ನಡೆಸಿ ಸರ್ಕಾರಕ್ಕೆ ಕೆಲ ಬೇಡಿಕೆಗಳನ್ನು ಇಟ್ಟಿದ್ದಾರೆ.

ಮಾಸಾಶನದ ವಯಸ್ಸಿನ ಅಂತರ ಕಡಿತಗೊಳಿಸಿ
ತುಳು ನಾಡಿನ ದೈವಾರಾಧನೆಗೆ ಸಹಸ್ರ ಸಹಸ್ರ ವರ್ಷಗಳ ಇತಿಹಾಸವಿದೆ. ದೈವ ನರ್ತಕರ ಪಟ್ಟಿಯನ್ನು ಮಾಡಿದಾಗ 60 ವಯಸ್ಸು ಮೇಲ್ಪಟ್ಟ ದೈವ ನರ್ತಕರ ಸಂಖ್ಯೆ ಬಹಳ ಕಡಿಮೆವಿದೆ. ಸರ್ಕಾರದ ಮಾಸಾಶಾನ ಅನುಭವಿಸೋಕೆ 60 ವಯಸ್ಸು ಮೇಲ್ಪಟ್ಟ ಕಲಾವಿದರೆ ಕಡಿಮೆ ಇದ್ದಾರೆ. ಸರ್ಕಾರ 60ರ ವಯಸ್ಸಿನ ಗಡುವನ್ನು 55 ಅಥವಾ 50 ವಯಸ್ಸಿಗೆ ಇಳಿಸಬೇಕೆಂದು ದಯಾನಂದ ಜಿ ಕತ್ತಲೆಸಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೇರೆಯವರಿಗೂ ಮಾಸಾಶನ ವಿಸ್ತರಿಸಿ
ಕೇವಲ ದೈವನರ್ತಕರಿಗೆ ಮಾತ್ರವಲ್ಲದೇ ದೈವದ ಬೇರೆ ಚಾಕರಿಗಳನ್ನು ಮಾಡುವವರು, ಗಡಿ ಹಿಡಿದವರು, ದರ್ಶನ ಪಾತ್ರಿ, ದೀವಿಟಿಗೆ ಹಿಡಿದವರಿಗೂ ಮಾಸಾಶಾನ ವಿಸ್ತರಣೆ ಮಾಡಬೇಕು. ಸರ್ಕಾರ ದೈವ ನರ್ತಕ ಸೇರಿದಂತೆ ಬೇರೆ ವಿಭಾಗಗಳನ್ನು ಪರಿಗಣಿಸಬೇಕು, 58 ವಯಸ್ಸು ದಾಟಿದವರಿಗೆ ಈಗಾಗಲೇ ಸರ್ಕಾರದ ಒಂದು ಸಾವಿರ ರೂಪಾಯಿ ವೃದ್ಯಾಪವೇತನ ಸಿಗುತ್ತಿದೆ. ಮಾಸಾಶಾನಕ್ಕೆ ಅರ್ಜಿ ಹಾಕುವಾಗ ವೃದ್ಯಾಪವೇತನ ಇದ್ದವರನ್ನು ಕೈ ಬಿಟ್ಟರೆ ಹಲವು ಮಂದಿ ಸಂತ್ರಸ್ತರಾಗುತ್ತಾರೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಅಂತಾ ಕತ್ತಲೆಸಾರ್ ವಿನಂತಿ ಮಾಡಿದ್ದಾರೆ.

ಚೇತನ್ ಹೇಳಿಕೆಗೆ ವಿರೋಧ
ಇನ್ನು ನಟ ಚೇತನ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ದಯಾನಂದ ಜಿ ಕತ್ತಲೆಸಾರ್, ನಾವು ದೈವಾರಾಧಕರು. ನಾವು ಹಿಂದೂ ಧರ್ಮದವರು. ಸಂವಿಧಾನದಲ್ಲೇ ನಮ್ಮದು ಹಿಂದೂ ಧರ್ಮ ಅಂತಾ ಉಲ್ಲೇಖ ಇದೆ. ನಾವು ಮಾತ್ರವಲ್ಲದೇ ದೈವಾರಾಧನೆ ಯ ಹದಿನಾರು ವರ್ಗದವರೂ ಹಿಂದೂಗಳೇ. ಹಿಂದೂ ಸಾಗರದ ಮೀನುಗಳು, ಈ ಸಾಗರದಿಂದ ಹೊರತೆಗೆದು ನಮ್ಮನ್ನು ಸಾಯಿಸುವ ಷಡ್ಯಂತ್ರ ಬೇಡ'' ಎಂದು ಕತ್ತಲೆಸಾರ್ ಹೇಳಿದ್ದಾರೆ.

ದೈವಾರಾಧನೆಯ ವರ್ಗದವರು ಆರ್ಥಿಕ ಸಬಲರಲ್ಲ
ಇನ್ನು ಪರವ ಸಮುದಾಯ ಮುಖಂಡ ಡಾ.ರವೀಶ್ ಪರವ ಮಾತನಾಡಿ, ದೈವಾರಾಧನೆಯ ಹದಿನಾರು ವರ್ಗದವರು ಆರ್ಥಿಕವಾದ ಸಧೃಡರಲ್ಲ. ಕೊಲಿ ಕೆಲಸ ಮಾಡುವವರು ಅನೇಕರಿದ್ದಾರೆ. ದೈವ ನರ್ತಕರು ಹಿಂದೂಗಳಲ್ಲ ಎಂಬ ಷಡ್ಯಂತ್ರ ವನ್ನು ಪರವ ಸಮುದಾಯ ಖಂಡಿಸುತ್ತದೆ. ಈ ಹೇಳಿಕೆ ನೀಡಿದವರಿಗೆ
ದೈವಾರಾಧನೆಯ ಬಗ್ಗೆ ಮಾಹಿತಿ ಇಲ್ಲ. ಹದಿನಾರು ವರ್ಗ ಸೇರಿದರೆ ಮಾತ್ರ ದೈವಾರಾಧನೆಯಾಗುತ್ತದೆ. ಪ್ರತಿಯೊಬ್ಬ ತುಳುವರು ಆಗ್ರಹಿಸುತ್ತೇವೆ, ನಟ ಚೇತನ್ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು. ಕ್ಷಮೆಯಾಚನೆ ಮಾಡಬೇಕು. ಮಾಡದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಹಲವು ಸಮಯದಾಯದವರು ದೈವಾರಾಧನೆ ಮಾಡುತ್ತಾರೆ
ನಲಿಕೆ ಸಮಾಜದ ಉಡುಪಿ ಜಿಲ್ಲಾಧ್ಯಕ್ಷ ಪಾಂಡುರಂಗ ನಲಿಕೆ ಮಾತನಾಡಿ ಮಾಸಾಶಾನ ಎಲ್ಲರಿಗೂ ನೀಡಬೇಕು. ಕೆಲವರಿಗೆ ಊಟಕ್ಕೆ ಗತಿಯಿಲ್ಲ. ಅಂತಹವರಿಗೆ ಮಾಸಾಶಾನ ಸಿಕ್ಕಿದರೆ ಉಪಕಾರವಾಗುತ್ತದೆ. 50 ವರ್ಷದ ಮೇಲೆ ಚಾಕರಿ ಮಾಡುವವರು ಕಡಿಮೆ ಇದ್ದಾರೆ ಅಸ್ರಣ್ಣ, ಕೊರಗ, ಮಡಿವಾಖ, ಗಾಣಿಗ, ಬಿಲ್ಲವ, ಬಂಟ, ಗೌಡ್ರು, ಮೊಗವೀರ, ಮುಂಡಾಲ, ಬ್ಯಾರಿ ಸಮುದಾಯ ಸೇರಿದಂತೆ ಹದಿನಾರು ವರ್ಗ ದೈವಾರಾಧನೆಯ ಕ್ಷೇತ್ರದಲ್ಲಿ ದುಡಿಯುತ್ತಿದೆ. ಅವರಿಗೂ ಸರ್ಕಾರ ಮಾಸಾಶಾನ ನೀಡಬೇಕು ಅಂತಾ ಪಾಂಡುರಂಗ ನಲಿಕೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.


Click it and Unblock the Notifications











