ಹಣ ಮಾಡಿದ ಮೇಲೆ ದೈವಾರಾಧನೆ ಮರೆತ 'ಕಾಂತಾರ' ತಂಡ: ದೈವಾರಾಧಕರ ಆಕ್ರೋಶ
ಕರಾವಳಿ ಹೊರಗಿನ ದೈವಾರಾಧನೆ ವಿರುದ್ದ ಮಂಗಳೂರಿನ ಜನ ಸಿಡಿದೆದ್ದಿದ್ದಾರೆ. ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ದ ಭಕ್ತರು ಕೊರಗಜ್ಜನ ಮೊರೆ ಹೋಗಿದ್ದಾರೆ.
ಮಂಗಳೂರಿನ ಕುತ್ತಾರು ಬಳಿಕ ಕೊರಗಜ್ಜನ ಆದಿಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು, ದೈವಾರಾಧನೆಗೆ ಅಪಚಾರ ಮಾಡಿದವರಿಗೆ ಬುದ್ಧಿ ನೀಡು ಅಂತಾ ಹಲವು ಸಂಘಟನೆಗಳ ನೇತೃತ್ವದಲ್ಲಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ.
ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಹಾಗೂ ಸಮಸ್ತ ದೈವಾರಾಧಕರಿಂದ ಪ್ರಾರ್ಥನೆ ಮಾಡಲಾಗಿದೆ. ಮೈಸೂರು, ಬೆಂಗಳೂರಿನಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ ಅರೋಪ ಮಾಡಿದ್ದು, ದೈವದ ಕೋಲ, ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವ ಬಗ್ಗೆ ಆರೋಪಿಸಲಾಗಿದೆ.

ಕಾನೂನು ಹೋರಾಟಕ್ಕೆ ನಿರ್ಧಾರ
ದೈವ ನಿಂದನೆ ಮಾಡಿ ದಂಧೆ ಮಾಡುವವರ ವಿರುದ್ದ ಕಾನೂನು ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ. ಆದಿ ಸ್ಥಳ ಮತ್ತು ತುಳುನಾಡು ಹೊರತು ಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಅವಕಾಶ ಇಲ್ಲ. ಹೀಗಿದ್ದರೂ ರಾಜ್ಯದ ಕೆಲವೆಡೆ ಕೊರಗಜ್ಜನ ಹೆಸರಲ್ಲಿ ದಂಧೆ ಮಾಡಲಾಗುತ್ತಿದೆ ಅಂತಾ ದೈವಾರಾಧಕರು ಆರೋಪಿಸಿದ್ದಾರೆ.

ವ್ಯವಹಾರದ ಉದ್ದೇಶದಿಂದ ದೈವಾರಾಧನೆ: ಆರೋಪ
ಮೈಸೂರು ಮೂಲದ ಕೆಲ ಭಕ್ತರಿಂದಲೂ ಆದಿ ಸ್ಥಳದಲ್ಲಿ ಪ್ರಾರ್ಥನೆ ಮಾಡಲಾಗಿದ್ದು, ಕೊರಗಜ್ಜ ಆದಿಸ್ಥಳ ಬಿಟ್ಟು ಬೇರೆ ಕಡೆ ಆರಾಧನೆ ವ್ಯವಹಾರದ ಉದ್ದೇಶವಾಗಿದೆ. ಇದನ್ನು ತಡೆದ ಮೈಸೂರಿನ ಕೆಲವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಸಿನಿಮಾ ಮತ್ತು ಸಾಮಾಜಿಕ ತಾಣಗಳ ಕಾರಣದಿಂದ ಈ ದಂಧೆ ನಡೀತಾ ಇದೆ. ಇದನ್ನು ನಿಲ್ಲಿಸದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಕರಾವಳಿಯ ದೈವಾರಾಧಕರು ನೀಡಿದ್ದಾರೆ.

'ಕಾಂತಾರ' ಸಿನಿಮಾದಿಂದಲೇ ಈ ಪರಿಪಾಠ ಜಾರಿ
'ಕಾಂತಾರ' ಚಿತ್ರತಂಡದ ವಿರುದ್ಧವೂ ದೈವಾರಾಧಕರ ಆಕ್ರೋಶ ವ್ಯಕ್ತಪಡಿಸಿದ್ದು, ದೈವಾರಾಧನೆಯನ್ನು ಬಳಸಿ ಹಣ ಮಾಡಿದ್ದಾರೆ. ಆದರೆ ದೈವಾರಾಧನೆಗೆ ಅಪಚಾರ ಆದಾಗ ತುಟಿ ಬಿಚ್ಚಿಲ್ಲ. ಮುಂದೆ ದೈವಾರಾಧನೆಗೆ ಸಂಬಂಧಿಸಿದ ಯಾವುದೇ ಚಿತ್ರ ಬಂದರೂ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 'ಕಾಂತಾರ' ಸಿನಿಮಾ ಹಿಟ್ ಆದ ಬಳಿಕ ರಾಜ್ಯ ಹಾಗೂ ಹೊರರಾಜ್ಯದ ಹಲವು ವೇದಿಕೆಗಳಲ್ಲಿ ಹಣಕ್ಕಾಗಿ ದೈವದ ವೇಷ ಧರಿಸಿ ನರ್ತಿಸುವ ಪರಿಪಾಠ ಆರಂಭವಾಗಿದ್ದು, ಇದರ ವಿರುದ್ಧ ದೈವಾರಾಧಕರು ಆಕ್ರೋಶ ಹೊರಹಾಕಿದ್ದು, ದೈವಾರಾಧನೆಯನ್ನು ಹೀಗೆ ಹಣಕ್ಕೆ ಬಳಸಿಕೊಳ್ಳಲು 'ಕಾಂತಾರ' ಸಿನಿಮಾವೇ ಕಾರಣ ಎಂದು ದೂರಿದ್ದಾರೆ.

ದೈವಾರಾಧಕರಿಂದ ಅಸಮಾಧಾನ
ಈ ಸಂಧರ್ಭದಲ್ಲಿ ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ, ಮಂಗಳೂರು ದೈವಾರಾಧನಾ ಸಮಿತಿ, ಬೆಳ್ತಂಗಡಿ ಹಿಂದೂ ಸಂರಕ್ಷಣಾ ಸಮಿತಿ, ಮಂಗಳೂರು ಕಾರ್ಯಕರ್ತರು ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಸೂರಜ್ ಕೆ. ಬಲ್ಳಾಲ್ ಬಾಗ್,ದೈವಾರಾಧನಾ ಸಮಿತಿ ಬೆಳ್ತಂಗಡಿ ಇದರ ಪ್ರಭಾಕರ ಓಡಿಲ್ನಾಳ,ನಿಮಿಷ್ ರಾಜ್ ಮೈಸೂರು,ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ, ಮಂಗಳೂರು ಇದರ ಭರತ್ ಬಳ್ಳಾಲ್ ಬಾಗ್,ಹಿಂದೂ ಸಂರಕ್ಷಣಾ ಸಮಿತಿ, ಮಂಗಳೂರು ಇದರ ಕೆ. ಆರ್. ಶೆಟ್ಟಿ ಅಡ್ಯಾರ್ ಪದವು, ಚರಿತ್ ಪೂಜಾರಿ, ರೋಶನ್ ರೊನಾಲ್ಡ್ ಮತ್ತು ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.


Click it and Unblock the Notifications











