ಶಿವಮೊಗ್ಗಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿಕ್ಕಣ್ಣ ಭೇಟಿ: ಭದ್ರಾ ಅಭಯಾರಣ್ಯದಲ್ಲಿ ಸಂಚಾರ
ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಕಾಲ ಕಳೆದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅನ್ ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಪ್ರಕೃತಿಯ ಜತೆಗಿನ ಒಡನಾಟಕ್ಕೆ ಮರಳಿದ್ದಾರೆ. ಅರಣ್ಯ, ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿಯುಳ್ಳ ದರ್ಶನ್, ನಟ ಚಿಕ್ಕಣ್ಣ ಹಾಗೂ ಇತರೆ ಸ್ನೇಹಿತರ ಜತೆಗೆ ಕಾಡುಮೇಡು ಸುತ್ತಾಡುತ್ತಿದ್ದಾರೆ. ಅರಣ್ಯ ಸುತ್ತಾಡುವುದು, ಕಾಡಿನ ಬಗ್ಗೆ ಮಾಹಿತಿ ಕಲೆಹಾಕುವುದು, ವನ್ಯಜೀವಿಗಳ ಚಿತ್ರ ತೆಗೆಯುವುದು ದರ್ಶನ್ ಅವರ ಆಸಕ್ತಿಗಳಲ್ಲಿ ಒಂದು.
Recommended Video
ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ದರ್ಶನ್, ರಾಜ್ಯದಲ್ಲಿರುವ ಅಪಾರ ವನ್ಯಸಂಪತ್ತಿನ ಕುರಿತು ತಿಳಿದುಕೊಳ್ಳುತ್ತಿದ್ದಾರೆ. ಈ ಮೂಲಕ ಅರಣ್ಯ ಸಂರಕ್ಷಣೆ ಮತ್ತು ಮರಗಳನ್ನು ಬೆಳೆಸುವ ಸದುದ್ದೇಶಕ್ಕೆ ಅವರು ಪ್ರೇರಣೆ ನೀಡುವ ಸಲುವಾಗಿ ಸಾಲು ಸಾಲು ಅರಣ್ಯ ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಅರಣ್ಯ ಪ್ರದೇಶಕ್ಕೆ ಚಿಕ್ಕಣ್ಣ ಅವರೊಂದಿಗೆ ಭೇಟಿ ನೀಡಿದ್ದರು. ಈಗ ಮಲೆನಾಡಿನ ಕಾಡಿಗೆ ತೆರಳಿದ್ದಾರೆ. ಮುಂದೆ ಓದಿ.

ಭದ್ರಾ ಜಲಾಶಯದ ವೀಕ್ಷಣೆ
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯಕ್ಕೆ ದರ್ಶನ್ ಮತ್ತು ಚಿಕ್ಕಣ್ಣ ತಮ್ಮ ಸ್ನೇಹಿತರ ಜತೆಗೆ ಭೇಟಿ ನೀಡಿದ್ದಾರೆ. ಶಿವಮೊಗ್ಗ ಸೇರಿದಂತೆ ವಿವಿಧೆಡೆ ವಿಪರೀತ ಮಳೆ ಸುರಿಯುತ್ತಿದ್ದು, ಭದ್ರಾ ಜಲಾಶಯ ಭರ್ತಿಯಾಗಿದೆ. ಒಳಹರಿವು ಹೆಚ್ಚಾಗಿರುವುದರಿಂದ ನೀರು ಹೊರಗೆ ಬಿಡಲಾಗುತ್ತಿದೆ. ಇದರಿಂದ ಜಲಾಶಯದಿಂದ ನೀರು ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದ್ದು, ಅದರ ರಮಣೀಯ ದೃಶ್ಯವನ್ನು ದರ್ಶನ್ ಮತ್ತವರ ಬಳಗ ಸವಿದಿದೆ.

ಸ್ನೇಹಿತರ ಭೇಟಿ
ಶುಕ್ರವಾರ ಮಧ್ಯಾಹ್ನ ಭದ್ರಾ ಜಲಾಶಯ ವೀಕ್ಷಿಸಿದ ಬಳಿಕ ಬಿಆರ್ ಪ್ರಾಜೆಕ್ಟ್ನಲ್ಲಿರುವ ಅರಣ್ಯ ಇಲಾಖೆ ಜಂಗಲ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಭದ್ರಾವತಿ ಮತ್ತು ಶಿವಮೊಗ್ಗದಲ್ಲಿರುವ ಕೆಲವು ಸ್ನೇಹಿತರನ್ನು ಭೇಟಿಯಾಗಿದ್ದಾರೆ.

ಅಭಯಾರಣ್ಯದಲ್ಲಿ ಸಫಾರಿ
ಶನಿವಾರ ಬೆಳಿಗ್ಗೆ ಭದ್ರಾ ಅಭಯಾರಣ್ಯದಲ್ಲಿ ದರ್ಶನ್ ಮತ್ತು ಸ್ನೇಹಿತರು ಸಫಾರಿ ತೆರಳಲಿದ್ದಾರೆ. ಅಲ್ಲಿ ಕಾಡಿನ ಪರಿಚಯ ಮತ್ತು ಫೋಟೊಗ್ರಫಿ ನಡೆಸಲಿದ್ದಾರೆ. ಅಭಯಾರಣ್ಯದ ನಡುವೆ ಇರುವ ಬ್ರಿಟಿಷರ ಕಾಲದ ಹಳೆಯ ಬಂಗಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅಭಿಮಾನಿಗಳ ದಂಡು
ಇನ್ನೂ ಒಂದೆರಡು ದಿನ ಅವರು ಶಿವಮೊಗ್ಗದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆಯ ರಾಯಭಾರಿಯಾಗಿರುವುದರಿಂದ ದರ್ಶನ್ ಅವರಿಗೆ ಅರಣ್ಯ ಇಲಾಖೆಯ ಐಬಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಡಿ ಬಾಸ್ ಬಂದಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಬಿರು ಮಳೆಯನ್ನೂ ಲೆಕ್ಕಿಸದೆ ಅಭಿಮಾನಿಗಳು ಐಬಿ ಬಳಿ ದೌಡಾಯಿಸಿದ್ದರು.

ಅಭಿಮಾನಿಗಳಿಗೆ ನಿರಾಶೆ
ಆದರೆ ದರ್ಶನ್, ಚಿಕ್ಕಣ್ಣ ಸೇರಿದಂತೆ ಯಾರನ್ನೂ ಭೇಟಿ ಮಾಡಲು ಪೊಲೀಸ್ ಇಲಾಖೆ ಅಭಿಮಾನಿಗಳಿಗೆ ಅವಕಾಶ ನೀಡಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಜತೆಗೆ ದರ್ಶನ್ ತಂಡ ಫೋಟೊ ತೆಗೆಸಿಕೊಂಡಿದೆ. ಆದರೆ ನೆಚ್ಚಿನ ನಟನನ್ನು ನೋಡಿ ಅವರೊಂದಿಗೆ ಫೋಟೊ ತೆಗೆಸಿಕೊಳ್ಳಬೇಕೆಂಬ ಬಯಕೆ ಹೊಂದಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ
ಕಳೆದ ತಿಂಗಳು ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ದರ್ಶನ್ ಮತ್ತು ಚಿಕ್ಕಣ್ಣ ಕಳ್ಳಬೇಟೆ ತಡೆ ಶಿಬಿರಕ್ಕೆ ತೆರಳಿದ್ದರು. ಸಸಿ ನೆಟ್ಟು ಅರಣ್ಯ ಸಪ್ತಾಹ ಯೋಜನೆಗೆ ಚಾಲನೆ ನೀಡಿದ್ದರು. ಅರಣ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ಜತೆ ಮಾತುಕತೆ ನಡೆಸಿದ್ದರು.


Click it and Unblock the Notifications











