ದರ್ಶನ್ ನಟನೆಯ ಹೊಸ ಸಿನಿಮಾ ಶೂಟಿಂಗ್ಗೆ ದಿನಾಂಕ ನಿಗದಿ
ಪ್ಯಾನ್ ಇಂಡಿಯಾ ಸಿನಿಮಾ, ನೂರು ಕೋಟಿ, ಸಾವಿರ ಕೋಟಿ ಕ್ಲಬ್ಗಳ ಮಾತುಗಳೇ ಚಿತ್ರರಂಗದಲ್ಲಿ ಓಡಾಡುತ್ತಿರುವ ಸಮಯದಲ್ಲಿ ಬಾಕ್ಸ್ಆಫೀಸ್ ಸುಲ್ತಾನ್ ಎಂಬ ಬಿರುದು ಪಡೆದಿರುವ ದರ್ಶನ್ ಸಿನಿಮಾ ಸಹ ಇದೇ ರೀತಿಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಅವರ ಅಭಿಮಾನಿಗಳ ಬಯಕೆ.
ದರ್ಶನ್ರ ಕೊನೆಯ ಸಿನಿಮಾ 'ರಾಬರ್ಟ್' ಬಿಡುಗಡೆ ಆದಾಗ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಈಗಿನಷ್ಟಿರಲಿಲ್ಲ. ಅಲ್ಲದೆ ಆಗ ಕೋವಿಡ್ ಹಾಗೂ ಇನ್ನಿತರೆ ಅಡ್ಡಿ ಆತಂಕಗಳು ಸಹ ಇದ್ದವು. ಹಾಗಿದ್ದರೂ ಸಹ 'ರಾಬರ್ಟ್' ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು.
ಇದೀಗ ದರ್ಶನ್ರ 'ಕ್ರಾಂತಿ' ಸಿನಿಮಾ ತೆರೆಗೆ ಬರಲು ರೆಡಿಯಾಗುತ್ತಿದೆ. ಸಿನಿಮಾವನ್ನು ಪ್ಯಾನ್ ಇಂಡಿಯಾ ಸ್ಕೇಲ್ನಲ್ಲಿ ತರುತ್ತಿಲ್ಲ ಎಂಬುದು ಈಗಾಗಲೇ ಜನಜನಿತ. ಈ ನಡುವೆ ದರ್ಶನ್ರ ಮುಂದಿನ ಚಿತ್ರ ಸಹ ಸೆಟ್ಟೇರಲು ದಿನಾಂಕ ನಿಗದಿಯಾಗಿದೆ. ಸಿನಿಮಾದಿಂದ ಸಿನಿಮಾಕ್ಕೆ ತುಸು ಗ್ಯಾಪ್ ತೆಗೆದುಕೊಳ್ಳುತ್ತಿದ್ದ ದರ್ಶನ್ ಈ ಬಾರಿ ಮಾತ್ರ ಯಾವುದೇ ಬ್ರೇಕ್ ಇಲ್ಲದೆ, ಒಮ್ಮೆಲೆ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಧುಮುಕುತ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದಂದು ಮುಹೂರ್ತ
ದರ್ಶನ್ರ ಹೊಸ ಸಿನಿಮಾ 'ಕ್ರಾಂತಿ'ಯ ಡಬ್ಬಿಂಗ್ ಅನ್ನು ಇತ್ತೀಚೆಗಷ್ಟೆ ದರ್ಶನ್ ಮುಗಿಸಿದ್ದು, ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಗೆ ಬಂದಿವೆ. ಈ ನಡುವೆ ದರ್ಶನ್ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದು, ಸಿನಿಮಾದ ಮುಹೂರ್ತ ಮುಂದಿನ ತಿಂಗಳು ನಡೆಯಲಿದೆ. ಅದರಲ್ಲಿಯೂ ವರಮಹಾಲಕ್ಷ್ಮಿ ಹಬ್ಬದಂದು ಅದ್ಧೂರಿಯಾಗಿ ಸಿನಿಮಾದ ಮುಹೂರ್ತ ನಡೆಯಲಿದೆ.

ತರುಣ್ ಸುಧೀರ್ ನಿರ್ದೇಶನದ ಸಿನಿಮಾ
ದರ್ಶನ್ರ 56ನೇ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡುವವರಿದ್ದಾರೆ. ಈ ಹಿಂದೆ ಇವರೇ ದರ್ಶನ್ಗಾಗಿ 'ರಾಬರ್ಟ್' ಸಿನಿಮಾ ನಿರ್ದೇಶಿಸಿದ್ದರು. ಡಿ56 ಸಿನಿಮಾವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದು, ಸಿನಿಮಾದ ಚಿತ್ರೀಕರಣ ಮುಹೂರ್ತದ ದಿನದಂದೇ ಅಂದರೆ ಆಗಸ್ಟ್ 5ರಿಂದಲೇ ಪ್ರಾರಂಭವಾಗಲಿದೆ. ಸಿನಿಮಾದ ಹೆಸರು 'ಕಾಟೇರ' ಎನ್ನಲಾಗುತ್ತಿದೆ ಆದರೆ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ನಾಯಿ ಕುರಿಮಂದೆಯನ್ನು ಕಾಯುತ್ತಿರುವ ಪೋಸ್ಟರ್
ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ನಾಯಿಯೊಂದು ಕುರಿಮಂದೆಯನ್ನು ಕಾಯುತ್ತಿರುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ''ನಾಯಿ, ಕುರಿಗಳನ್ನು ಕಾಯುವುದು ಅದರ ಜೀವನದ ಧ್ಯೇಯ ಎಂದುಕೊಂಡಿರುತ್ತದೆ. ತನ್ನ ಜೀವನವನ್ನು ಅದು ತ್ಯಾಗ ಮಾಡಿ ಆ ಕುರಿ ಮಂದೆಯನ್ನು ಕಾಯುತ್ತದೆ'' ಅದೇ ಅಂಶವನ್ನಿಟ್ಟುಕೊಂಡು ನಾವು ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಸುಧೀರ್. ಅಂದಹಾಗೆ ಇದು ನಿಜ ಜೀವನದಲ್ಲಿ ನಡೆದಿರುವ ಕತೆಯಂತೆ.

ಸೂರಿ ಜೊತೆಗೆ ದರ್ಶನ್ ಸಿನಿಮಾ
ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಶಿಕ್ಷಣದ ಬಗ್ಗೆ ಇರುವ ಈ ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ ಮಾಡಿದ್ದು ಶೈಲಜಾ ನಾಗ್ ನಿರ್ಮಾಣ ಮಾಡಿದ್ದಾರೆ. ಇನ್ನು ಡಿ56 ಅನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಸೂರಿ ದರ್ಶನ್ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ರಾಕ್ಲೈನ್ ನಿರ್ಮಾಣದಲ್ಲಿ ದರ್ಶನ್ ನಟನೆಯ 'ರಾಜ ವೀರ ಮದಕರಿ' ಸಿನಿಮಾ ಸೆಟ್ಟೇರಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಆ ಸಿನಿಮಾದ ಚಿತ್ರೀಕರಣ ನಿಂತು ಹೋಯಿತು.


Click it and Unblock the Notifications











