ದಾವಣಗೆರೆಯಲ್ಲಿ ಡಿ ಬಾಸ್ ಹವಾ: ಗೆಳೆಯನಿಗಾಗಿ ಮನವಿ ಮಾಡಿದ ದರ್ಶನ್
'ಡಿ. ಬಾಸ್... ಡಿ. ಬಾಸ್... ಡಿ ಬಾಸ್... ಹರ್ಷೋದ್ಘಾರ. ಮೂಲೆ ಮೂಲೆಗಳಿಂದ ಹರಿದು ಬಂದ ಜನಸಾಗರ. ನೆಚ್ಚಿನ ನಟನನ್ನು ನೋಡಲು ಬಂದ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು, ಕಾರ್ಯಕ್ರಮದ ಸಂಘಟಕರು. ವೇದಿಕೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಬರುತ್ತಿದ್ದಂತೆ ಮುಗಿಲು ಮುಟ್ಟಿತು ಜೈಕಾರ' ಇದು ದಾವಣಗೆರೆಯ ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಎಸ್. ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗ ಆಯೋಜಿಸಿದ್ದ ಮ್ಯೂಸಿಕಲ್ ನೈಟ್ ಕಾರ್ಯಕ್ರಮದ ವೇಳೆ ಕಂಡು ಬಂದ ದೃಶ್ಯಗಳು.
ನಟ ದರ್ಶನ್ ತೂಗುದೀಪ ಅವರನ್ನು ಕಣ್ತುಂಬಿಕೊಳ್ಳಲು ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದಾವಣಗೆರೆಗೆ ಆಗಮಿಸಿದ್ದರು. ಕೆಲ ಅಭಿಮಾನಿಗಳನಂತೂ ಬೆಳಿಗ್ಗೆ 11ಗಂಟೆಗೆ ವೇದಿಕೆ ಮುಂದೆ ನೆರೆದಿದ್ದರು. ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಬಂದಿದ್ದ ಅಭಿಮಾನಿಗಳು ಡಿ ಬಾಸ್ ಜಪ ಆರಂಭಿಸಿಬಿಟ್ಟಿದ್ದರು.
ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ವೇದಿಕೆ ಮೇಲೆ ಭಾಷಣ ಮಾಡುವಾಗ ಡಿ ಬಾಸ್ ಜೈಕಾರ ಮೊಳಗಿತ್ತು. ಇದರಿಂದ ಕೆಲ ರಾಜಕೀಯ ನಾಯಕರು ಸಿಡಿಮಿಡಿಗೊಂಡರೂ ಅಭಿಮಾನಿಗಳು ತಲೆಕೆಡಿಸಿಕೊಳ್ಳಲಿಲ್ಲ. ಘೋಷಣೆ ಹಾಕುತ್ತಲೇ ಇದ್ದರು. ಸಂಜೆ ಆರು ಗಂಟೆಗೆ ದರ್ಶನ್ ಬರುತ್ತಾರೆ ಸಾವಧಾನದಿಂದಿರಿ ಎಂದರೂ ಅಭಿಮಾನಿಗಳು ಕೇಳಿಸಿಕೊಳ್ಳದೆ ಕೂಗಾಟ ಮುಂದುವರೆಸಿದರು.

ಒಂಬತ್ತು ಗಂಟೆಗೆ ಬಂದ ದರ್ಶನ್
ರಾತ್ರಿಯಾಗುವ ವೇಳೆಗೆ ದರ್ಶನ್ ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ಸುಮಾರು 40 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಪೊಲೀಸರಂತೂ ಅಭಿಮಾನಿಗಳನ್ನು ನಿಯಂತ್ರಿಸಲು ಸುಸ್ತು ಹೊಡೆದರು. ಸಂಜೆ ಆರು ಗಂಟೆಗೆ ಬರುತ್ತಾರೆ ದರ್ಶನ್ ಎಂಬ ಮಾಹಿತಿ ನೀಡಲಾಗಿತ್ತು. ಜನರು ಹೆಚ್ಚಾಗಿ ಆಗಮಿಸಿದ ಕಾರಣ ದರ್ಶನ್ ತೂಗುದೀಪ ಅವರು ವೇದಿಕೆಗೆ ಬಂದಿದ್ದು ರಾತ್ರಿ 9 ಗಂಟೆಗೆ. ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ದರ್ಶನ್ ವೇದಿಕೆಗೆ ಬರುತ್ತಿದ್ದಂತೆ ಫ್ಯಾನ್ಸ್ ಅಭಿಮಾನದ ಮೇರೆ ಮೀರಿತು.

ಶಾಮನೂರು ಶಿವಶಂಕರಪ್ಪ ಆಶೀರ್ವಾದ ಪಡೆದ ದರ್ಶನ್
ವೇದಿಕೆ ಮೇಲೆ ಕುಳಿತಿದ್ದ ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಭಾಷಣ ಶುರು ಮಾಡಿದ ದರ್ಶನ್, ''ಮಲ್ಲಿಕಾರ್ಜುನ್ ಹಾಗೂ ನನ್ನ ನಡುವೆ ಅತ್ಯುತ್ತಮ ಸ್ನೇಹವಿದೆ. ಅವರು ನನ್ನ ಸಹೋದರರು. ನಾನು ಯಾವಾಗಲೂ ದಾವಣಗೆರೆಗೆ ಬಂದರೆ ತುಂಬಾನೇ ಪ್ರೀತಿ, ಕಾಳಜಿ, ಅಭಿಮಾನ ತೋರಿಸುತ್ತೀರಾ. ಇದಕ್ಕೆ ನನ್ನ ನಮಸ್ಕಾರ. 'ಕ್ರಾಂತಿ' ಸಿನಿಮಾ ನನ್ನದಲ್ಲ. ನಿಮ್ಮ ಸಿನಿಮಾ. ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಕನ್ನಡ ಚಿತ್ರೋದ್ಯಮ ಬೆಳೆಸಿ'' ಎಂದು ಮನವಿ ಮಾಡಿದರು.

''ಜನರ ಸೇವೆ ಮಾಡಲು ಮಲ್ಲಿಕಾರ್ಜುನ್ಗೆ ಅವಕಾಶ ಮಾಡಿಕೊಡಿ''
ಮಲ್ಲಿಕಾರ್ಜುನ್ ಅವರೆಂದರೆ ತುಂಬಾ ಇಷ್ಟ. ಅವರಲ್ಲಿ ಕುದುರೆಗಳಿವೆ. ಅವುಗಳನ್ನು ನೋಡಲು ನಾನು ಇಲ್ಲಿಗೆ ಬರುತ್ತೇನೆ. ಇದು ಖುಷಿಯ ವಿಚಾರ. ಮಲ್ಲಿಕಾರ್ಜುನ್ ಅವರಿಗೆ ಕೇವಲ 55 ವರ್ಷ. ಅವರನ್ನು ನೋಡಿದರೆ ಚಿರಯುವಕರಂತೆ ಕಾಣುತ್ತಾರೆ ಎಂದರು. ಮುಂದುವರೆದು, ''ಜನರಿಗೆ ಸೇವೆ ಮಾಡಲು ಮಲ್ಲಿಕಾರ್ಜುನ್ ಅವರಿಗೆ ಅವಕಾಶ ನೀಡಿ. ನನ್ನ ಮೇಲೆ ಅಭಿಮಾನಿಗಳು ತೋರಿಸುವ ಪ್ರೀತಿ ಅಪಾರ. ಮಲ್ಲಿಕಾರ್ಜುನ್ ಅವರು ನನಗೆ ತೋರಿಸುವ ಪ್ರೀತಿ ಮರೆಯಲಾಗದು'' ಎಂದು ಅಭಿಮಾನಿಗಳಿಗೆ ಹೇಳಿದರು.

ಮಲ್ಲಿಕಾರ್ಜುನ್ ಹಾಗೂ ದರ್ಶನ್ ಸ್ನೇಹ
ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಹಾಗೂ ದರ್ಶನ್ ನಡುವೆ ಆತ್ಮೀಯ ಸ್ನೇಹವಿದೆ. ಈ ಹಿಂದೆ ದರ್ಶನ್ ದಾವಣಗೆರೆಗೆ ಬಂದಾಗ ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿದ್ದರು. ದರ್ಶನ್ ಅವರಿಗಾಗಿ ಕುದುರೆಯೊಂದನ್ನು ದರ್ಶನ್ ಉಡುಗೊರೆ ನೀಡಿದ್ದಾರೆ. ದರ್ಶನ್ ಅವರಂತೆ ಮಲ್ಲಿಕಾರ್ಜುನ್ ಸಹ ಪ್ರಾಣಿ ಪ್ರೇಮ ಉಳ್ಳವರು. ಅವರ ಬಳಿ ಹಲವು ಕುದುರೆಗಳು, ಎತ್ತುಗಳು ಹಾಗೂ ಇತರ ಪ್ರಾಣಿ ಪಕ್ಷಿಗಳಿವೆ.


Click it and Unblock the Notifications











