ಧರ್ಮಸ್ಥಳದಲ್ಲಿ ನಟ ದರ್ಶನ್: ಮಂಜುನಾಥ ಸ್ವಾಮಿ ದರ್ಶನ
ನಟ ದರ್ಶನ್ ಪ್ರವಾಸ ಪ್ರಿಯ ಎಂಬುದು ಅಭಿಮಾನಿಗಳಿಗೆ ಹೊಸ ಸುದ್ದಿಯೇನಲ್ಲ. ಬಿಡುವಿನ ಸಮಯದಲ್ಲಿ ಪ್ರವಾಸ ಹೋಗುವುದು ಅವರ ನೆಚ್ಚಿನ ಹವ್ಯಾಸ. ತಮ್ಮ ಪ್ರವಾಸವನ್ನು ಅರಣ್ಯ ಪ್ರದೇಶಗಳಿಗೆ ಮಾತ್ರವೇ ಸೀಮಿತಗೊಳಿಸಿಕೊಳ್ಳದ ದರ್ಶನ್ ದೇವಸ್ಥಾನಗಳಿಗೂ ಆಗ್ಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.
ನಟ ದರ್ಶನ್ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ದರ್ಶನ್ ಆಗಮಿಸಿದ ಸುದ್ದಿ ಕೇಳಿ ದೇವಸ್ಥಾನದ ಆವರಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು ಎನ್ನಲಾಗಿದೆ.
ನಟ ದರ್ಶನ್ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದಿಂದ ದರ್ಶನ್ ಹೊರಗೆ ಬರುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಳೆದ ತಿಂಗಳು ದರ್ಶನ್ ಬೇಲೂರು ಚೆನ್ನಕೇಶವ ದೇವಾಲಯಕ್ಕೆ ತೆರಳಿದ್ದರು. 'ಕ್ರಾಂತಿ' ಸಿನಿಮಾದ ಮುಂಚೆ ದೇವರ ಆಶೀರ್ವಾದ ಪಡೆಯಲು ಬೇಲೂರು ಚೆನ್ನಕೇಶವ ದೇವಾಲಯಕ್ಕೆ ದರ್ಶನ್ ತೆರಳಿದ್ದರು ಎನ್ನಲಾಗಿತ್ತು.
ಅದಕ್ಕೂ ಮುನ್ನ ಪಾಂಡಿಚೆರಿಯ ತಿರುನಲ್ಲಾರ್ನಲ್ಲಿನ ವಿಶೇಷ ಐತಿಹ್ಯದ ಶನಿಮಹಾತ್ಮ ಸ್ವಾಮಿ ದೇವಾಲಯಕ್ಕೆ ದರ್ಶನ್ ಭೇಟಿ ನೀಡಿದ್ದರು. ಅರುಣ ಕುಮಾರಿ, ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ವಿವಾದದ ಘಟನೆ ಆದ ಬಳಿಕ ನಟ ದರ್ಶನ್ ಶನಿಮಹಾತ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ತಿರುನಲ್ಲಾರ್ನ ಶನಿದೇವರ ದೇವಾಲಯದ ದರ್ಶನ ಮಾಡಿದರೆ ಶನಿಭಾದೆ ತೀರುತ್ತದೆ ಎಂಬುದು ನಂಬಿಕೆ. ಇದೇ ಕಾರಣಕ್ಕೆ ದರ್ಶನ್ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಇದೇ ಪ್ರದೇಶದಲ್ಲಿ ರಾಜ ನಳನು ಶನಿಪ್ರಭಾವದಿಂದ ದೂರವಾದ ಎಂಬ ಪ್ರತೀತಿ ಇದೆ.
ನಟ ದರ್ಶನ್ ಪ್ರಸ್ತುತ 'ಕ್ರಾಂತಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದರ್ಶನ್ ನಟನೆಯ 'ಯಜಮಾನ' ಸಿನಿಮಾಕ್ಕಾಗಿ ಕೆಲಸ ಮಾಡಿದ್ದ ತಂಡವೇ 'ಕ್ರಾಂತಿ' ಸಿನಿಮಾಕ್ಕಾಗಿಯೂ ಕೆಲಸ ಮಾಡುತ್ತಿದೆ. ಬಿ ಸುರೇಶ್ ದಂಪತಿ ನಿರ್ಮಾಣ, ವಿ ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.
ದರ್ಶನ್ ನಟಿಸುತ್ತಿದ್ದ 'ಮದಕರಿ ನಾಯಕ' ಸಿನಿಮಾ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಆ ಸಿನಿಮಾಕ್ಕೆ ಇದು ಸೂಕ್ತ ಸಮಯವಲ್ಲವೆಂಬ ಕಾರಣ ನೀಡಿ ಚಿತ್ರೀಕರಣ ನಿಲ್ಲಿಸಲಾಗಿದೆ.


Click it and Unblock the Notifications











