ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆಗೆ ಭೇಟಿ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮತ್ತು ನವರಸ ನಾಯಕ ಜಗ್ಗೇಶ್ ನಡುವಿನ ವಿವಾದ ಅಂತ್ಯಗೊಂಡಿದೆ. ದರ್ಶನ್, ಜಗ್ಗೇಶ್ ಗೆ ಬಹಿರಂಗವಾಗಿ ಕ್ಷಮೆಯಾಚಿಸಿದ ಬಳಿಕ ವಿವಾದ ತಾರ್ಕಿಕ ಅಂತ್ಯ ಕಂಡಿದೆ.
ಇದಾದ ಬಳಿಕ ದರ್ಶನ್, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆಗೆ ಭೇಟಿ ನೀಡಿದ್ದಾರೆ. ಜಮೀರ್ ಅಹ್ಮದ್ ಅವರನ್ನು ಭೇಟಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲೆಂಜಿಂಗ್ ಮನೆಗೆ ಎಂಟ್ರಿ ಕೊಟ್ಟಿರುವ ಫೋಟೋವನ್ನು ಜಮೀರ್ ಅಹ್ಮದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ದರ್ಶನ್ ತೂಗುದೀಪ್ ಅವರು ಇಂದು ನನ್ನ ನಿವಾಸಕ್ಕೆ ಆಗಮಿಸಿದ ಕ್ಷಣಗಳು' ಎಂದು ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್ ಜೊತೆ ನಿರ್ಮಾಪಕ ಉಮಾಪತಿ ಕೂಡ ಜಮೀರ್ ಮನೆಗೆ ಭೇಟಿ ನೀಡಿದ್ದಾರೆ.

ದರ್ಶನ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡ ಜಮೀರ್ ಅಹ್ಮದ್ ಮತ್ತು ಪುತ್ರ ಹಾಗೂ ನಟ ಜೈದ್ ಖಾನ್ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಜಮೀರ್ ಪುತ್ರ ಜೈದ್ ಖಾನ್ ಸಹ ಮೊದಲ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಜಮೀರ್ ಮತ್ತು ಪುತ್ರ ಜೈದ್ ಖಾನ್, ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ದರ್ಶನ್ ಭೇಟಿ ಜಮೀರ್ ಕುಟುಂಬಕ್ಕೆ ಸಂತಸ ತಂದಿದೆ. ಇತ್ತೀಚಿಗಷ್ಟೆ ಜಮೀರ್ ಅಹ್ಮದ್ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಮಗಳ ಮದುವೆಗೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರಿಗೆ ಆಮಂತ್ರಣ ನೀಡಿದ್ದರು. ಸ್ಯಾಂಡಲ್ ವುಡ್ ನಿಂದ ಕೆಲವರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.
ಇದೀಗ ದರ್ಶನ್ ಮನೆಗೆ ಭೇಟಿ ನೀಡಿ ಜಮೀರ್ ಕುಟುಂಬದ ಜೊತೆ ಕೆಲ ಸಮಯ ಕಾಲಕಳೆದಿದ್ದಾರೆ. ಅಂದಹಾಗೆ ದರ್ಶನ್ ಸದ್ಯ ರಾಬರ್ಟ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಮಾರ್ಚ್ 11ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ.


Click it and Unblock the Notifications











