ನಿರ್ದೇಶಕ ಪಿ ಶೇಷಾದ್ರಿ ವಿರುದ್ದ ಹರಿಹಾಯ್ದ ಕುಮಾರಸ್ವಾಮಿ
ಡಿಸೆಂಬರ್ 1 ಚಿತ್ರದ ಮೇಲೆ ಮತ್ತೊಂದು ವಿವಾದ ಸುತ್ತುಕೊಂಡಿದೆ. ಈ ಬಾರಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಚಿತ್ರದ ವಿರುದ್ದ ಹರಿಹಾಯ್ದಿದ್ದು ಈ ಚಿತ್ರ ಪ್ರಶಸ್ತಿಗಳಿಸುವ ಉದ್ದೇಶದಿಂದ ಮಾಡಿರುವ ಸಿನಿಮಾ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ (ಏ 27) ಒಕ್ಕಲಿಗರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಚಿತ್ರದಲ್ಲಿನ ಗ್ರಾಮ ವಾಸ್ತವ್ಯ ಸನ್ನಿವೇಶದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿ, ನನ್ನ ಗ್ರಾಮವಾಸ್ತವ್ಯದ ಪರಿಕಲ್ಪನೆಯನ್ನು ಚಿತ್ರದಲ್ಲಿ ತುಚ್ಚವಾಗಿ ತೋರಿಸಲಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಇತ್ತೀಚೆಗೆ ಪ್ರಶಸ್ತಿ ಪಡೆದ ಡಿಸೆಂಬರ್ 1 ಚಿತ್ರದ ಕೃತಿಚೌರ್ಯ ಮತ್ತು ಅದಕ್ಕೆ ನಿರ್ದೇಶಕ ಶೇಷಾದ್ರಿ ನೀಡುತ್ತಿರುವ ಸ್ಪಷ್ಟೀಕರಣವನ್ನು ಗಮನಿಸುತ್ತಿದ್ದೇನೆ. ಕನ್ನಡ ಚಿತ್ರವೊಂದು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದಕ್ಕೆ ನನಗೆ ಹೆಮ್ಮೆಯಿದೆ. (ಒನ್ ಇಂಡಿಯಾ ಜತೆ ಸಂಭ್ರಮ ಹಂಚಿಕೊಂಡ ಶೇಷಾದ್ರಿ)
ಆದರೆ, ವಾಸ್ತವ್ಯತೆಯನ್ನು ದೂರವಿಟ್ಟು ಪ್ರಶಸ್ತಿಗಾಗಿಯೇ ಮಾಡಿರುವ ಸಿನಿಮಾವಿದು. ಚಿತ್ರದ ನಿರ್ದೇಶಕ ಶೇಷಾದ್ರಿ ವಿರುದ್ದ ಕೇಸು ದಾಖಲಿಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ. (ಪಿ ಶೇಷಾದ್ರಿ ಚಿತ್ರದ ವಿರುದ್ಧ ಕಥೆ ಕದ್ದ ಆರೋಪ)
ಕುಮಾರಸ್ವಾಮಿ ಹೇಳಿಕೆ ಮತ್ತು ನಿರ್ದೇಶಕ ಶೇಷಾದ್ರಿ ಸ್ಪಷ್ಟನೆ ಸ್ಲೈಡಿನಲ್ಲಿ..

ಗ್ರಾಮ ವಾಸ್ತವ್ಯದ ಬಗ್ಗೆ ಎಚ್ಡಿಕೆ
ನಾನು ಸಿಎಂ ಆಗಿದ್ದ ಅಧಿಕಾರದ ಅವಧಿಯಲ್ಲಿ ಗ್ರಾಮ ವಾಸ್ತವ್ಯ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದೆ. ದೇಶವ್ಯಾಪಿ ಇದು ಯಾವ ರೀತಿ ಜನಪ್ರಿಯತೆ ಪಡೆದುಕೊಂಡಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜ್ಯದಲ್ಲಿನ ಎಲ್ಲಾ ವರ್ಗದ ಜನರು ಮುಖ್ಯವಾಹಿನಿಗೆ ತರಬೇಕೆನ್ನುವ ಉದ್ದೇಶದಿಂದ ಇದನ್ನು ಆರಂಭಿಸಿದೆ.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಕುಟುಂಬ ಹೊರಕ್ಕೆ
ಚಿತ್ರದಲ್ಲಿ ಗ್ರಾಮವಾಸ್ತವ್ಯದಿಂದ ಒಂದು ಕುಟುಂಬ ಬೀದಿಪಾಲಾಯಿತು. ಅದರಿಂದ ಆ ಕುಟುಂಬ ಊರು ಬಿಟ್ಟು ಹೋಗುಂತಾಯಿತು ಎಂದು ತೋರಿಸಲಾಗಿದೆ. ನನ್ನ ಗ್ರಾಮವಾಸ್ತವ್ಯದಿಂದ ಬೀದಿಪಾಲಾದ ಕುಟುಂಬ ಯಾವುದು ಎಂದು ನಿರ್ದೇಶಕರು ರುಜುವಾತು ಪಡಿಸಿದರೆ ಆ ಕುಟುಂಬಕ್ಕೆ ಪಕ್ಷದಿಂದ ರಕ್ಷಣೆ ನೀಡಲಾಗುತ್ತದೆ - ಕುಮಾರಸ್ವಾಮಿ

ಚಿತ್ರದ ಬಗ್ಗೆ ನನಗೆ ಬೇಸರವಿದೆ
ರಾಜಕಾರಣಕ್ಕೆ ಬರುವ ಮುನ್ನ ನಾನು ವಿತರಕ, ನಿರ್ಮಾಪಕನಾಗಿದ್ದೆ. ನೈಜ ಘಟನೆಯನ್ನು ಆಧರಿಸಿ ಚಿತ್ರ ನಿರ್ಮಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ನೈಜ ಘಟನೆಯನ್ನು ತಮಗೆ ಬೇಕಾದಂತೆ ತಿರುಚಿ ಪ್ರೇಕ್ಷಕರ ಮುಂದಿಡುವುದಕ್ಕೆ ನನ್ನ ವಿರೋಧವಿದೆ - ಎಚ್ಡಿಕೆ

ಕುಮಾರಸ್ವಾಮಿ ಮೊದಲು ಸಿನಿಮಾ ನೋಡಲಿ
ಕುಮಾರಸ್ವಾಮಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡುತ್ತಿದ್ದ ಚಿತ್ರ ನಿರ್ದೇಶಕ ಶೇಷಾದ್ರಿ, ಮೊದಲು ಕುಮಾರಸ್ವಾಮಿಯವರು ಚಿತ್ರವನ್ನು ನೋಡಿ ನಂತರ ಹೇಳಿಕೆ ನೀಡಲಿ. ಸಿನಿಮಾದ ಟೈಟಲ್ ಕಾರ್ಡಿನಲ್ಲೇ ಇದೊಂದು ಕಾಲ್ಪನಿಕ ಕಥೆ ಎಂದು ತೋರಿಸಲಾಗಿದೆ ಎಂದಿದ್ದಾರೆ.

ಚಿತ್ರದಲ್ಲಿ ಯಾವುದನ್ನೂ ವೈಭವಕರಿಸಿಲ್ಲ
ಪ್ರಶಸ್ತಿ ಬರಬೇಕು ಎಂದು ಚಿತ್ರವನ್ನು ನಾನು ನಿರ್ಮಿಸಿಲ್ಲ. ಕುಮಾರಸ್ವಾಮಿಯವರ ಈ ಹೇಳಿಕೆಗೆ ನನ್ನ ಸಹಮತವಿಲ್ಲ. ಚಿತ್ರ ಥಿಯೇಟರ್ ನಲ್ಲಿ ಈಗಾಗಲೇ ಬಿಡುಗಡೆಯಾಗಿದೆ, ಮಾಧ್ಯಮದವರು, ಪತ್ರಕರ್ತರು, ಚಿತ್ರರಂಗದ ಗಣ್ಯರು ಈಗಾಗಲೇ ಚಿತ್ರ ವೀಕ್ಷಿಸಿದ್ದಾರೆ. ಚಿತ್ರದಲ್ಲಿ ಯಾವುದೇ ಪಾತ್ರವನ್ನಾಗಲಿ ಅಥವಾ ದೃಶ್ಯವನ್ನಾಗಲಿ ನಾನು ವೈಭವಕರಿಸಿಲ್ಲ - ಡಿಸೆಂಬರ್ 1 ಚಿತ್ರದ ನಿರ್ದೇಶಕ ಶೇಷಾದ್ರಿ ಸ್ಪಷ್ಟನೆ.


Click it and Unblock the Notifications











