ದೇವಿಶ್ರೀ ಗುರೂಜಿ ಚೊಚ್ಚಲ 'ಕೈತುತ್ತು' ವಿಶೇಷಗಳು
ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಉದ್ಯಮಿಗಳು, ಬಿಲ್ಡರ್ಸ್, ರಾಜ ಕಾರಣಿಗಳು ಮೊದಲಾದವರು ಬಂದು ನಿರ್ಮಾಪಕರಾಗಿದ್ದಾರೆ. ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ದೇವಿಶ್ರೀ ಗುರೂಜಿ. ಜ್ಯೋತಿಷಿಗಳಾದ ಇವರು ಇತ್ತೀಚೆಗೆ ವಿವಾದವೊಂದಕ್ಕೆ ಸಿಲುಕಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು.
ಬಾಲಕಾರ್ಮಿಕರ ಸಮಸ್ಯೆ ಹಾಗೂ ತಾಯಿ ಮಗನ ಸೆಂಟಿಮೆಂಟ್ ಕಥಾ ವಸ್ತುವುಳ್ಳ 'ಕೈತುತ್ತು' ಎಂಬ ಚಿತ್ರವನ್ನು ರಾಜೀವ್ ಕೃಷ್ಣ ನಿರ್ದೇಶಿಸುತ್ತಿದ್ದು ಈ ಚಿತ್ರಕ್ಕೆ ದೇವಿಶ್ರೀ ಗುರೂಜಿ ಬಂಡವಾಳ ಹೂಡುತ್ತಿದ್ದಾರೆ. ಹಿರಿಯ ನಟಿ ತಾರಾ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ಕೆ.ಕಲ್ಯಾಣ್ ಅವರ ಸಾಹಿತ್ಯ ಹಾಗೂ ಸಂಗೀತವಿದೆ. [ಸ್ಯಾಂಡಲ್ ವುಡ್ ಗೆ ದೇವಿಶ್ರೀ ಗುರೂಜಿ ಎಂಟ್ರಿ]
ಶಿವಗಂಗಾ, ಲವ್ವೆಲ್ಲಾ ಸುಳ್ಳಲ್ಲ ಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕೃಷ್ಣ ಈ ಕಥೆಯನ್ನು 2009 ರಲ್ಲೇ ರೆಡಿ ಮಾಡಿಕೊಂಡಿದ್ದರು. ದೇವಿಶ್ರೀ ಗುರೂಜಿ 'ಗಾಯತ್ರಿ ಮಹಿಮೆ' ಎಂಬ ಪೌರಾಣಿಕ ಚಿತ್ರವನ್ನು ನಿರ್ಮಿಸಲೆಂದು ಚರ್ಚೆಗೆ ಈ ನಿರ್ದೇಶಕರನ್ನು ಕರೆಸಿದಾಗ ರಾಜೀವ ಕೃಷ್ಣ 'ಕೈತುತ್ತು' ಕಥೆ ಬಗ್ಗೆ ಪ್ರಸ್ತಾಪಿಸಿದ್ದಾರೆ. [ಚಾಲೆಂಜ್, ಈ ವಯ್ಯಾ ಯಾರೇಳಿ ನೊಡೋಣ?]

ನೂರಾರು ಜನರ ಸಮಸ್ಯೆಯ ಕಥೆ ಇದು
ಪ್ರತಿನಿತ್ಯ ತನ್ನಲ್ಲಿ ಕಷ್ಟ ಸುಖ ಹೇಳಿಕೊಂಡು ಬರುವ ನೂರಾರು ಜನರ ಸಮಸ್ಯೆಯ ಕಥೆಯನ್ನೇ ಹೊಂದಿರುವ ಈ ಸ್ಕ್ರಿಪ್ಟ್ ಗುರುಗಳಿಗೆ ತಕ್ಷಣ ಹಿಡಿಸಿದೆ. ಪೌರಾಣಿಕ ಚಿತ್ರವನ್ನು ಯಾವಾಗಲಾದರೂ ಮಾಡಬಹುದು. ಇಂಥಾ ಚಿತ್ರವನ್ನು ಮಾಡಿದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದಂತಾಗುತ್ತದೆ ಎಂದುಕೊಂಡು ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. "ಬ್ರಹ್ಮ ಬರೆಯೋ ಹಣೆ ಬರೆಹಾನ ಅಮ್ಮ ಬರೆದಿದ್ರೆ" ಎಂಬುದು ಈ ಚಿತ್ರದ ಅಡಿಬರಹ.

ತಾಯಿ-ಮಗನ ಹೃದಯ ಸ್ಪರ್ಶಿ ಚಿತ್ರ
ಬಾಲಕಾರ್ಮಿಕ ಪದ್ಧತಿ ಹಿಂದಿನಿಂದಲೂ ಬೆಳೆದುಕೊಂಡು ಬಂದಿದ್ದು ಅದನ್ನು ತೊಡೆದು ಹಾಕಲು ಸಾಕಷ್ಟು ಹೋರಾಟಗಳು ನಡೆಯುತ್ತಿದ್ದರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಇಂಥ ಸಾಮಾಜಿಕ ಸಮಸ್ಯೆ ಜೊತೆಗೆ ತಾಯಿ-ಮಗನ ಹೃದಯ ಸ್ಪರ್ಶಿ, ಸೆಂಟಿಮೆಂಟ್, ಕಥಾವಸ್ತುವುಳ್ಳ ಈ ಚಿತ್ರದ ಚಿತ್ರೀಕರಣ ಜುಲೈ 2 ರಿಂದ ಪ್ರಾರಂಭವಾಗಲಿದ್ದು ಮೊದಲ ಹಂತದ ಶೂಟಿಂಗ್ ಚಿಂತಾಮಣಿ, ಚಿಕ್ಕಬಳ್ಳಾಪುರ ಸುತ್ತಮುತ್ತ ಹಾಗೂ 2ನೇ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆ ಎಂದು ನಿರ್ದೇಶಕರು ಹೇಳಿದರು.

ದೇವಿಶ್ರೀ ಗುರೂಜಿಗಳಿಗೆ ತುಂಬ ಹಿಡಿಸಿದ ಕಥೆ
ದೇವಿಶ್ರೀ ಗುರೂಜಿ ತಮ್ಮ ನಿರ್ಮಾಣದ ಮೊದಲ ಚಿತ್ರದ ಬಗ್ಗೆ ಮಾತನಾಡುತ್ತ, "ತಾಯಿ ಮಗನ ಪ್ರೀತಿ, ವಾತ್ಸಲ್ಯ ತಾನು ಹೆತ್ತ ಮಗುವನ್ನು ಸಾಕಿ ಸಲಹಲು ತಾಯಿ ಪಡುವಂಥ ಕಷ್ಟ ಕಾರ್ಪಣ್ಯ ಇರುವಂಥ ಈ ಕಥೆ ನನಗೆ ತುಂಬಾ ಇಷ್ಟವಾಯ್ತು" ಎಂದು ಹೇಳಿದರು.

ನೈಜ ವಾದ್ಯಗಳನ್ನು ಬಳಸಿ ಕೆ.ಕಲ್ಯಾಣ್ ಸಂಗೀತ
ನೈಜತೆಗೆ ಹತ್ತಿರವಾದ ಕಥೆಯುಳ್ಳ ಈ ಚಿತ್ರಕ್ಕೆ ನೈಜ ವಾದ್ಯ ಪರಿಕರಗಳನ್ನೇ ಬಳಸಿ ಸಂಗೀತ ಮಾಡುವುದಾಗಿ ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಹೇಳಿದರು. ಅರ್ಥಗರ್ಭಿತವಾದ ಸಾಹಿತ್ಯ ಹೊಂದಿರುವ 5 ಹಾಡುಗಳನ್ನು ಕಲ್ಯಾಣ್ ಅವರೇ ರಚಿಸಿರುವುದು. ಈ ಚಿತ್ರದ ಮತ್ತೊಂದು ವಿಶೇಷ.

ಸುಮಾರು ರು. 50 ಲಕ್ಷ ಬಜೆಟ್ ಚಿತ್ರ
ತಾಯಿ ಪಾತ್ರದಲ್ಲಿ ತಾರಾ ಹಾಗೂ ಮಾ.ಯಶವಂತ್ ಮಗನಾಗಿ ಹಾಗೂ ಮಾ.ಉದಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಲವ್ವೆಲ್ಲಾ ಸುಳ್ಳಲ್ಲ ಚಿತ್ರಕ್ಕೆ ಕ್ಯಾಮರಾ ಹಿಡಿದಿದದ ಪ್ರಮೋದ್ ಈ ಚಿತ್ರದ ಛಾಯಾಗ್ರಹಕರಾಗಿದ್ದು ಸುಮಾರು ರು.45 ರಿಂದ ರು.50 ಲಕ್ಷದ ಬಜೆಟ್ ಹಾಕಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.


Click it and Unblock the Notifications











