ನಟ ದರ್ಶನ್ಗೆ ವಿಶೇಷ ಉಡುಗೊರೆ ನೀಡಿದ ನಿರ್ದೇಶಕ ದಯಾಳ್
ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 24 ವರ್ಷ ಪೂರೈಸಿದ ಹಿನ್ನೆಲೆ ನಿರ್ದೇಶಕ ದಯಾಳ್ ಪದ್ಮನಾಭನ್ ಶುಭಹಾರೈಸಿದ್ದಾರೆ. ದರ್ಶನ್ ಅವರ ರಾಜರಾಜೇಶ್ವರಿ ನಗರದ ನಿವಾಸಕ್ಕೆ ಭೇಟಿ ನೀಡಿದ ದಯಾಳ್ ಪದ್ಮನಾಭನ್, ಡಿ ಬಾಸ್ಗೆ ವಿಶೇಷವಾದ ಉಡುಗೊರೆ ನೀಡಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ನಟ ದರ್ಶನ್ ಅವರಿಗಾಗಿ ತಮ್ಮ ಕುಟುಂಬದ ಸಹಾಯದಿಂದ ಕೈಯಾರೆ ಸಿದ್ಧಪಡಿಸಿದ ಉಡುಗೊರೆಯೊಂದನ್ನು (ದರ್ಶನ್ 24-ನಾಮ ಫಲಕ) ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ದರ್ಶನ್ 24 ಹೆಸರಿನಲ್ಲಿ ಬಹಳ ವಿಶೇಷವಾದ ಕೇಕ್ ಸಹ ತೆಗೆದುಕೊಂಡು ಹೋಗಿದ್ದರು. ಆ ಕೇಕ್ ಮೇಲೆ #Dbossim ಎಂದು ಬರೆಯಲಾಗಿತ್ತು.
ದರ್ಶನ್ ಭೇಟಿ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದಯಾಳ್, ''ದರ್ಶನ್ ಅವರು 24 ವರ್ಷ ಪೂರೈಸಿದ್ದಕ್ಕಾಗಿ ಅವರನ್ನು ಭೇಟಿ ಮಾಡಿ ಶುಭಹಾರೈಸಿದೆ. ನನ್ನ ಕುಟುಂಬದ ಸಹಾಯದಿಂದ, ನಾನು ಪ್ರೀತಿಯಿಂದ ಸಿದ್ಧಪಡಿಸಿದ ಉಡುಗೊರೆ ಸ್ವೀಕರಿಸಿದರು. ಸೂಪರ್ ಸ್ಟಾರ್ ಆಗಿ ಬೆಳೆದ ಅವರ ಶ್ರಮ ಮತ್ತು ಸಾಧನೆಯನ್ನು ನಾನು ಸದಾ ಅಭಿನಂದಿಸುತ್ತೇನೆ, ಶ್ಲಾಘಿಸುತ್ತೇನೆ'' ಎಂದು ಪೋಸ್ಟ್ ಹಾಕಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿ 24 ವರ್ಷ ಪೂರೈಸಿದ ಹಿನ್ನೆಲೆ ದರ್ಶನ್ ಆಪ್ತ ಸ್ನೇಹಿತರು ವಿಶೇಷ ಪಾರ್ಟಿ ಆಯೋಜಿಸಿದರು. D24 ಎಂಬ ಹೆಸರಿನಲ್ಲಿ ದೊಡ್ಡ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ವೇಳೆ ದರ್ಶನ್ ಅವರ ಆಪ್ತ ಸ್ನೇಹಿತರು, ಚಿತ್ರರಂಗದ ಹಿತೈಷಿಗಳು ಭಾಗಿಯಾಗಿದ್ದರು. ಆ ಫೋಟೋಗಳ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದವು. ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವು ಪಾಲ್ಗೊಂಡಿದ್ದರು. ಅದಕ್ಕೂ ಮುಂಚೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ಅವರ ನಿವಾಸಕ್ಕೆ ಭೇಟಿ ನೀಡಿದ ಕೇಕ್ ಕತ್ತರಿಸಿದ ಖುಷಿ ಪಟ್ಟಿದ್ದರು.
ನಟ ವಿನೋದ್ ರಾಜ್ ಮತ್ತು ನಿರ್ದೇಶಕ ಎಸ್ ನಾರಾಯಣ್ ಕಾಂಬಿನೇಷನ್ನಲ್ಲಿ ಬಂದ ಸಿನಿಮಾ ಮಹಾಭಾರತ. 1997ರ ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು. ಈ ಚಿತ್ರದ ಖಳನಾಯಕ ಅಥವಾ ನೆಗೆಟಿವ್ ಪಾತ್ರದಲ್ಲಿ ದರ್ಶನ್ ನಟಿಸಿದ್ದರು. ಇದು ದರ್ಶನ್ ಅವರಿಗೆ ಮೊದಲ ಸಿನಿಮಾ. ಕಾಲೇಜ್ ಹುಡುಗನಾಗಿ ಅಭಿನಯಿಸಿದ್ದ ದರ್ಶನ್, ವಿನೋದ್ ರಾಜ್ ಎದುರು ವಿಲನ್ ಆಗಿ ಮಿಂಚಿದ್ದರು. ಇಲ್ಲಿಂದ ದಾಸನ ಜರ್ನಿ ಆರಂಭವಾಯಿತು.
'ಮಹಾಭಾರತ' ಸಿನಿಮಾ ಬಳಿಕವೂ ಹಲವು ಚಿತ್ರಗಳಲ್ಲಿ ಪೋಷಕ ನಟನೆ ಮಾಡಿದರು. ಸ್ಟಾರ್ ನಟರ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರ ನಿಭಾಯಿಸಿದರು. ಶಿವರಾಜ್ ಕುಮಾರ್-ಅಂಬರೀಶ್ ನಟಿಸಿದ್ದ 'ದೇವರಮಗ', ತಮಿಳಿನಲ್ಲಿ ವಿಜಯಕಾಂತ್ ನಟಿಸಿದ್ದ 'ವಲ್ಲರಸು', ರಾಮ್ ಕುಮಾರ್, ಮೋಹನ್ ನಟಿಸಿದ್ದ 'ಎಲ್ಲರ ಮನೆ ದೋಸೆನೂ', 'ಮಿಸ್ಟರ್ ಹರಿಶ್ಚಂದ್ರ', 'ಭೂತಯ್ಯನ ಮಕ್ಕಳು' ಚಿತ್ರಗಳಲ್ಲಿಯೂ ದರ್ಶನ್ ಕಾಣಿಸಿಕೊಂಡಿದ್ದರು.

2002ರಲ್ಲಿ ತೆರೆಕಂಡ 'ಮೆಜೆಸ್ಟಿಕ್' ಚಿತ್ರದಲ್ಲಿ ದರ್ಶನ್ ಮೊದಲ ಸಲ ನಾಯಕನಟರಾದರು. ಪಿಎನ್ ಸತ್ಯ ನಿರ್ದೇಶನ ಹಾಗೂ ಎಂಜೆ ರಾಮಮೂರ್ತಿ ಈ ಚಿತ್ರ ನಿರ್ಮಿಸಿದ್ದರು. ಮೊದಲ ಚಿತ್ರದಲ್ಲೇ ಲಾಂಗ್ ಹಿಡಿದು ಎಂಟ್ರಿ ದರ್ಶನ್ಗೆ ಕನ್ನಡ ಪ್ರೇಕ್ಷಕರು ಫಿದಾ ಆದರು. ದಾಸನಾಗಿ ಬರಮಾಡಿಕೊಂಡರು. ಅಭಿಮಾನಿಗಳ ಪ್ರೀತಿ ಕಂಡ ದರ್ಶನ್ ಸಹ 'ನಾನು ನಿಮ್ಮ ಪ್ರೀತಿಯ ದಾಸ' ಎಂದು ಕೈಎತ್ತಿ ನಮಸ್ಕರಿಸಿದರು. ಮೆಜೆಸ್ಟಿಕ್ ಸಿನಿಮಾ ದೊಡ್ಡ ಹಿಟ್ ಆಯಿತು. ದರ್ಶನ್ ಹೀರೋ ಆಗಿ ನಿಂತರು. ಅಲ್ಲಿಂದ ರಾಬರ್ಟ್ ಚಿತ್ರದವರೆಗೂ ದರ್ಶನ್ ಪಯಣಕ್ಕೆ 24 ವರ್ಷ ಆಗಿದೆ.
ದೇವಸ್ಥಾನಗಳಿಗೆ ಭೇಟಿ ನೀಡಿದ್ದ ದರ್ಶನ್
ಚಾಲೆಂಜಿಗ್ ಸ್ಟಾರ್ ದರ್ಶನ್, ಸುಮಲತಾ, ಅಭಿಷೇಕ್ ಅಂಬರೀಶ್, ರಾಕ್ಲೈನ್ ವೆಂಕಟೇಶ್ ಅವರು ಇತ್ತೀಚಿಗಷ್ಟೆ ತಿರುಮಲಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಅಲ್ಲಿಂ ಕಾಣಿಪಾಕಂ ದೇವಸ್ಥಾನಕ್ಕೆ ಭೇಟಿ ದೇವರ ಆಶೀರ್ವಾದಕ್ಕೆ ಪಾತ್ರರಾಗಿದ್ದರು.


Click it and Unblock the Notifications











