ನೀರಿಗಾಗಿ ಬೀದಿಗಿಳಿದು ಪ್ರತಿಭಟನೆ ಮಾಡಿದ 'ಮಠ' ಗುರುಪ್ರಸಾದ್
'ಎದ್ದೇಳು ಮಂಜುನಾಥ', 'ಮಠ', 'ಡೈರೆಕ್ಟರ್ ಸ್ಪೆಷಲ್' ನಂತಹ ಸಿನಿಮಾ ಮಾಡಿ ಖ್ಯಾತಿ ಪಡೆದು ಕೊಂಡಿರುವ ನಿರ್ದೇಶಕ ಗುರುಪ್ರಸಾದ್ ಇಂದು ರಸ್ತೆಗಿಳಿದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಸರ್ಕಾರದ ಮಲತಾಯಿ ಧೋರಣೆಯನ್ನ ಪ್ರಶ್ನಿಸಿ ಇಂದು ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡುವ ಮೂಲಕ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ.
ಅರೇ... ಗುರುಪ್ರಸಾದ್ ರವರಿಗೆ ಏನಾಯ್ತು ಅಂತ ಆಶ್ಚರ್ಯ ಪಡಬೇಡಿ. ಗುರುಪ್ರಸಾದ್ ಪ್ರತಿಭಟನೆ ಮಾಡುತ್ತಿರುವುದು ನೀರಿಗಾಗಿ.!

ಅಯ್ಯೋ... ಅವರೇನು... ಆರಾಮಾಗಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದಾರೆ. ನೀರಿಗೇನು ಕಡಿಮೆ.? ಅಂತ ಈ ವಿಷ್ಯವನ್ನ ತಳ್ಳಿ ಹಾಕ್ಬೇಡಿ. ಯಾಕಂದ್ರೆ, ಗುರುಪ್ರಸಾದ್ ತಾವು ಹುಟ್ಟಿದ ಊರಿನ ಜನರಿಗೆ ಕುಡಿಯಲು ಹಾಗೂ ವ್ಯವಸಾಯ ಮಾಡಲು ನೀರಿಲ್ಲ ಅನ್ನೋ ಕಾರಣಕ್ಕೆ ರೈತರ ಪರವಾಗಿ ಹೋರಾಟಕ್ಕೆ ನಿಂತಿದ್ದಾರೆ.

ಚಿತ್ರದುರ್ಗ ಹಾಗೂ ಹಿರಿಯೂರಿನಿಂದ ಬೆಂಗಳೂರಿಗೆ ಬಂದು ವಾಸವಿರುವ ಎಲ್ಲರನ್ನೂ ಒಟ್ಟು ಸೇರಿಸಿ ಸರ್ಕಾರಕ್ಕೆ ಎಚ್ಚರ ನೀಡಲು ಮುಂದಾಗಿದ್ದಾರೆ. ಧರ್ಮಪುರ ಕೆರೆಗೆ ನಾಲೆಯ ಮೂಲಕ ನೀರನ್ನ ಹರಿಸುವ ಭರವಸೆ ನೀಡಿ ಈಗ ಸುಮ್ಮನಾಗಿರುವ ಬಗ್ಗೆ ಕೋಪಗೊಂಡಿರುವ ಗುರುಪ್ರಸಾದ್ ಇನ್ನಾದರೂ ಸರ್ಕಾರ ಕಣ್ತೆರೆದು ಧರ್ಮಪುರ ಕೆರೆ ಕಡೆಗೆ ಗಮನ ಹರಿಸಲಿ ಎಂದಿದ್ದಾರೆ.

ಟೌನ್ ಹಾಲ್ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ನಂತರ ಸರ್ಕಾರಕ್ಕೆ ಈ ಬಗ್ಗೆ ಮನವಿಯನ್ನ ಸಲ್ಲಿಸುವ ಉದ್ದೇಶ ಗುರುಪ್ರಸಾರ್ ಮತ್ತು ರೈತ ಮಕ್ಕಳ ಹೋರಾಟ ಸಮಿತಿಯವರದ್ದು. ಸಿನಿಮಾ ಮಾಡಿ ರಂಜಿಸೋದು ಮಾತ್ರವಲ್ಲದೆ ಹುಟ್ಟಿದ ಊರು ಹಾಗೂ ಅಲ್ಲಿಯ ಜನರ ಒಳಿತಿಗಾಗಿ ಹೋರಾಟಕ್ಕೆ ನಿಂತ ನಿರ್ದೇಶಕ ಗುರುಪ್ರಸಾದ್ ಅವರ ಮನವಿ ಆದಷ್ಟು ಬೇಗ ಸರ್ಕಾರಕ್ಕೆ ತಲುಪಲಿ..


Click it and Unblock the Notifications











