ರಾಜಕೀಯ 'ದೊಂಬರಾಟ' ನೋಡಿ ಸಂತೋಷ್ ಆನಂದ್ ರಾಮ್ ಬೇಸರ
ಕರ್ನಾಟಕ ರಾಜಕಾರಣದ ಪರಿಸ್ಥಿತಿ ನೋಡಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಚಿಂತಿಸುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆದ್ರು ಒಳ್ಳೆಯದಾಯಿತು ಎಂದು ಕೆಲವರು ಖುಷಿ ಪಟ್ಟರೇ, ರಾಜ್ಯಪಾಲರು ಮಾಡಿದ್ದು ತಪ್ಪು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮೊದಲ ಅವಕಾಶ ಕೊಡಬೇಕಿತ್ತು ಎಂದು ಮತ್ತೆ ಕೆಲವರು ಅಂದುಕೊಳ್ಳುತ್ತಿದ್ದಾರೆ.
ಇಂತವರ ಮಧ್ಯೆ ಸ್ನೇಹಿತರ ಬಳಗದಲ್ಲಂತೂ 'ಯಡಿಯೂರಪ್ಪನೇ ಬೆಸ್ಟ್ ಸಿಎಂ', 'ಇಲ್ಲ ನಾನು ಕುಮಾರಸ್ವಾಮಿ ಅಭಿಮಾನಿ', 'ಇಲ್ಲ ಇಲ್ಲ ಮತ್ತೆ ಸಿದ್ದರಾಮಯ್ಯ ಅವರೇ ಸರ್ಕಾರ ನಡೆಸಬೇಕು' ಎಂದು ಚರ್ಚೆ ಮಾಡೋರು ಹೆಚ್ಚು. ಈ ಚರ್ಚೆ ಕೇವಲ ಚರ್ಚೆಗೆ ಸೀಮಿತವಾದ್ರೆ ಪರವಾಗಿಲ್ಲ, ಕೆಲವೊಮ್ಮೆ ಇದು ಗಂಭೀರ ರೂಪ ಪಡೆದುಕೊಂಡು, ಸ್ನೇಹವೇ ಮುರಿದು ಹೋಗುವಂತಾಗಬಹುದು.

ಇಂತಹ ಸಂದರ್ಭಕ್ಕೆ ಅವಕಾಶ ಕೊಡಬೇಡಿ. ಈ ರಾಜಕಾರಣಿಗಳು ಹೀಗೆ ಬರ್ತಾರೆ, ಹಾಗೆ ಹೋಗ್ತಾರೆ, ಅವರಿಗೋಸ್ಕರ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಕನ್ನಡದ ಯಶಸ್ವಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ.
''ರಾಜಕಾರಣಿಗಳು ಇಂದು ಬರುತ್ತಾರೆ ನಾಳೆ ಹೋಗುತ್ತಾರೆ. ರಾಜಕಾರಣದ ವಿಚಾರಕ್ಕೆ ನಿಮ್ಮ ಸ್ನೇಹಿತರು ಹಾಗು ಅವರ ಸಂಬಂಧವನ್ನು ಹಾಳುಮಾಡಿಕೋಳ್ಳಬೇಡಿ..ನಾವು ಕಷ್ಟದಲ್ಲಿ ಇದ್ದಾಗ ಬರುವುದು ಗೆಳೆಯರು ರಾಜಕಾರಣಿಗಳಲ್ಲ ! ಶಾಸಕರು - ಸಂಸದರು ಸಂಪಾದನೆಗೆ ಬೆಲೆ ಕೊಡ್ತಾರೆ...ಸ್ನೇಹಿತರು ಸಂಬಂಧಕ್ಕೆ ಬೆಲೆ ಕೊಡ್ತಾರೆ! ಜೈ ಹಿಂದ್ ಜೈ ಕರ್ನಾಟಕ ಮಾತೆ'' ಎಂದು ರಾಜಕುಮಾರ ಚಿತ್ರದ ನಿರ್ದೇಶಕ ಟ್ವೀಟ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಸಂತೋಷ್ ಆನಂದ್ ರಾಮ್ ಈಗ ಮತ್ತೊಮ್ಮೆ ಪುನೀತ್ ಜೊತೆಯಲ್ಲಿ ತಮ್ಮ ಮೂರನೇ ಸಿನಿಮಾ ಮಾಡ್ತಿದ್ದಾರೆ.


Click it and Unblock the Notifications











