ನಮ್ಮ ಬಾಳಿನ ಜೊತೆ ಚೆಲ್ಲಾಟವಾಡಬೇಡಿ, ದುನಿಯಾ ವಿಜಯ್

ಚಿತ್ರಕ್ಕೆ ಹಾಕಿದ ದುಡ್ಡನ್ನು ಒಂದೇ ವಾರದಲ್ಲಿ ಬಾಚಿಕೊಳ್ಳಬೇಕೆಂದು ಕೆಲವೊಂದು ವಿತರಕರು ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡುತ್ತಾರೆ. ಎರಡನೇ ವಾರಕ್ಕೆ ಅರ್ಧಕ್ಕರ್ಧ ಚಿತ್ರಮಂದಿರದಲ್ಲಿ ತೆಗೆದು ಬಿಡುತ್ತಾರೆ.
ಒಂದೇ ಚಿತ್ರವನ್ನು ಅಕ್ಕಪಕ್ಕದ ಚಿತ್ರಮಂದಿರದಲ್ಲಿ ಪ್ರದರ್ಶಿಸಿದರೆ ಚಿತ್ರ ಎಲ್ಲಿಂದ ಓಡುತ್ತೆ? ನಿಮ್ಮ ವ್ಯವಹಾರದಲ್ಲಿ ನಮ್ಮ ಬಾಳು ಅಡಗಿದೆ ಸ್ವಾಮಿ, ಒಮ್ಮೆಲೇ ದುಡ್ಡು ಬಾಚಿಕೊಳ್ಳಲು ಹೋಗಿ ನಮ್ಮನ್ನು ಮಲಗಿಸಬೇಡಿ ಎಂದು ದುನಿಯಾ ವಿಜಯ್ ಖಾರವಾಗಿ ನುಡಿದಿದ್ದಾರೆ.
ಬಿಡುಗಡೆಗೆ ಸನ್ನದ್ದವಾಗಿರುವ ದುನಿಯಾ ವಿಜಯ್, ಐಂದ್ರಿತಾ ಪ್ರಮುಖ ಭೂಮಿಕೆಯ 'ರಜನಿ ಕಾಂತ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವಿಜಯ್, ದಯವಿಟ್ಟು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಡಿ. ಕಮ್ಮಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ. ಚಿತ್ರಕ್ಕೆ ಒಳ್ಳೆಯ ಪ್ರಮೋಷನ್ ಕೊಡಿ ಎಂದು ವಿಜಯ್ ನಿರ್ಮಾಪಕ ಕೆ ಮಂಜು ಮತ್ತು ವಿತರಕ ಪ್ರಸಾದ್ ಬಳಿ ಮನವಿ ಮಾಡಿದ್ದಾರೆ.
ಕನ್ನಡ ಚಿತ್ರರಂಗ ನಾನು ಬಿಡುತ್ತೇನೆ, ನನಗೆ ಇಲ್ಲಿ ಸಾಕಾಗಿ ಹೋಗಿದೆ ಎಂದು ಕೆಲವೇ ತಿಂಗಳಿನ ಹಿಂದೆ ವಿತರಕ ಪ್ರಸಾದ್ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು. ಈಗ ಸ್ನೇಹಿತ ಕೆ ಮಂಜು ಕರೆಗೆ ಓಗೊಟ್ಟು ಮತ್ತೆ ವಿತರಕರಾಗಿ ವಾಪಾಸ್ಸಾಗಿದ್ದಾರೆ.


Click it and Unblock the Notifications











