ನೆನಪಿರಲಿ ಪ್ರೇಮ್ ಮನೆಗೆ ಡಿ.ಕೆ.ಶಿವಕುಮಾರ್ ಭೇಟಿ: ಕಾರಣವೇನು?
ರಾಜಕಾರಣಕ್ಕೂ ಸಿನಿಮಾಕ್ಕೂ ಅವಿನಾಭಾವ ಸಂಬಂಧ. ಕ್ಷೇತ್ರಗಳು ಭಿನ್ನವಾದರೂ ಎರಡೂ ಕ್ಷೇತ್ರದವರು ಪರಸ್ಪರ ಆತ್ಮೀಯರಾಗಿದ್ದಾರೆ. ಹಿಂದಿನಿಂದಲೂ ಇದು ನಡೆದುಕೊಂಡೇ ಬಂದಿದೆ.
ಅದರಲ್ಲಿಯೂ ಚುನಾವಣೆ ಸಮಯದಲ್ಲಂತೂ ರಾಜಕಾರಣಿಗಳಿಗೆ ಸಿನಿಮಾ ನಟರು ಹೆಚ್ಚಾಗಿ ನೆನಪಾಗುತ್ತಾರೆ. ಪ್ರಸ್ತುತ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೆನಪಿರಲಿ ಪ್ರೇಮ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಹೌದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ನೆನಪಿರಲಿ ಪ್ರೇಮ್ ಅವರ ನಾಗರಬಾವಿಯ ನಿವಾಸಕ್ಕೆ ಹಠಾತ್ತನೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.

ರಾಜರಾಜೇಶ್ವರಿ ನಗರ-ಶಿರಾ ಉಪಚುನಾವಣೆ
ರಾಜರಾಜೇಶ್ವರಿ ನಗರ, ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಈಗಾಗಲೇ ಪ್ರಚಾರ ಕಣ ರಂಗೇರಿದೆ. ಈ ನಡುವೆ ಡಿಕೆಶಿ, ನಟ ಪ್ರೇಮ್ ಮನೆಗೆ ಭೇಟಿ ನೀಡಿರುವುದು ಭಾರಿ ಕುತೂಹಲ ಕೆರಳಿಸಿದೆ.

ಕುಸುಮಾ ಪರ ಚುನಾವಣೆ ಪ್ರಚಾರ
ಆರ್ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಚುನಾವಣೆ ಪ್ರಚಾರಕ್ಕೆ ಪ್ರೇಮ್ ಹಾಗೂ ಅವರ ಪತ್ನಿಯನ್ನು ಆಹ್ವಾನಿಸಲು ಡಿಕೆಶಿ ಪ್ರೇಮ್ ಮನೆಗೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.

ಮುನಿರತ್ನ ಪರವಾಗಿ ದರ್ಶನ್, ಯಶ್
ಎದುರಾಳಿ ಅಭ್ಯರ್ಥಿ, ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಮುನಿರತ್ನ ಪರವಾಗಿ ನಟ ದರ್ಶನ್ ಹಾಗೂ ನಟ ಯಶ್ ಪ್ರಚಾರಕ್ಕೆ ಬರಲಿದ್ದಾರೆ ಎಂಬ ಸುದ್ದಿಯಿದೆ, ಹಾಗಾಗಿ ಕಾಂಗ್ರೆಸ್ ಸಹ ತಾರಾ ಪ್ರಚಾರಕರನ್ನು ಕರೆತರುವ ಯತ್ನ ಮಾಡುತ್ತಿದೆ.
Recommended Video

ಮಾಲಾಶ್ರೀ, ಉಮಾಶ್ರಿ, ಜಯಮಾಲಾ ಇದ್ದಾರೆ
ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಮಾಲಾಶ್ರಿ, ಸಾಧುಕೋಕಿಲ, ಉಮಾಶ್ರಿ, ಜಯಮಾಲಾ ಮತ್ತು ಇನ್ನೂ ಕೆಲವು ಸಿನಿಮಾ ನಟರು ಇದ್ದಾರೆ. ಇವರೂ ಸಹ ಉಪಚುನಾವಣೆ ಪ್ರಚಾರ ಕಣಕ್ಕೆ ಬರುವ ಸಾಧ್ಯತೆ ಇದೆ. ಆರ್ಆರ್ ನಗರ ಉಪಚುನಾವಣೆ ಕಣ ಭಾರಿ ಕುತೂಹಲ ಕೆರಳಿಸಿದೆ.


Click it and Unblock the Notifications











