ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯತ್ವ ಪಡೆದ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಚಿತ್ರರಂಗಕ್ಕೂ ಇರುವ ನಂಟು ಹಳೆಯದ್ದು. ಡಿ.ಕೆ.ಶಿವಕುಮಾರ್ ಅವರು ಸಿನಿಮಾ ವಿತರಕರಾಗಿಯೂ ಕೆಲಸ ಮಾಡಿದ್ದಾರೆ. ಚಿತ್ರ ಪ್ರದರ್ಶಕರೂ ಹೌದು. ಬೆಂಗಳೂರಿನಲ್ಲಿ ಅವರದ್ದೇ ಆದ ಮಲ್ಪಿಫ್ಲೆಕ್ಸ್ ಇದೆ.
ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಾಗಿದ್ದರು. ಆದರೆ ರಾಜಕಾರಣದಲ್ಲಿ ಸಕ್ರಿಯರಾಗಿ, ಸಿನಿಮಾ ವಿತರಣೆಯಿಂದ ದೂರ ಉಳಿದ ಬಳಿಕ ಸದಸ್ಯತ್ವವನ್ನು ನವೀಕರಣ ಗೊಳಿಸಿರಲಿಲ್ಲವಾದ್ದರಿಂದ ಸದಸ್ಯತ್ವ ರದ್ದಾಗಿತ್ತು.
ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಅಲ್ಲಿ ಸದಸ್ಯತ್ವ ಅರ್ಜಿಯನ್ನು ಭರ್ತಿ ಮಾಡಿ, ಸದಸ್ಯರಾಗಲು ಮನವಿ ಸಲ್ಲಿಸಿದ್ದಾರೆ. ಅವರಿಗೆ ಸದಸ್ಯತ್ವವೂ ದೊರಕಲಿದೆ.

''ಚಿತ್ರೋದ್ಯಮಕ್ಕೆ ವಾಣಿಜ್ಯ ಮಂಡಳಿ ಬೇರು ಇದ್ದಂತೆ. ಕಲಾವಿದರು, ನಿರ್ಮಾಪಕರು, ಪ್ರದರ್ಶಕರು ಎಲ್ಲರೂ ಇಲ್ಲಿಯೇ ಬಂದು ನ್ಯಾಯ ಕೇಳಬೇಕು. ಸುದೀಪ್, ಶಿವರಾಜ್ಕುಮಾರ್, ಯಶ್, ದರ್ಶನ್ ಸೇರಿದಂತೆ ಎಲ್ಲ ನಟರಿಗೂ ವಾಣಿಜ್ಯ ಮಂಡಳಿ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಆದರೆ ಯಾರಿಗೂ ಬಲವಂತ ಮಾಡುವುದಿಲ್ಲ'' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
'ನಮ್ಮ ನೀರು ನಮ್ಮ ಹಕ್ಕು' ಎಂದು ನಾವು ಪಾದಯಾತ್ರೆ ಮಾಡುತ್ತಿದ್ದು ಅದರಲ್ಲಿ ಪ್ರತಿದಿನವೂ ಭಾಗವಹಿಸಿ ಎಂದು ನಾವು ಕೇಳುತ್ತಿಲ್ಲ. ಒಂದು ದಿನ ಅಥವಾ ಅರ್ಧ ದಿನ ಬೇಕಿದ್ದರೂ ನಡೆಯಬಹುದು. ಬಂದು ಈ ಹೋರಾಟಕ್ಕೆ ಬೆಂಬಲ ನೀಡಬೇಕಾದುದು ಅವರ ಧರ್ಮ. ಅವರೆಲ್ಲರ ಮೇಲೆ ನನಗೆ ವಿಶ್ವಾಸ ಇದೆ. ಯಾವಾಗಲೂ ಈ ನಾಡಿನ ಹಿತಕ್ಕಾಗಿ ಅವರು ಸಹಾಯ ಮಾಡಿಕೊಂಡು ಬಂದಿದ್ದಾರೆ. ಇದು ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲ ವರ್ಗಕ್ಕೂ ಸೇರಿದ ವಿಚಾರ. ವಾಣಿಜ್ಯ ಮಂಡಳಿ ಮೂಲಕ ಎಲ್ಲ ಕಲಾವಿದರಿಗೂ ಮನವಿ ಮಾಡುತ್ತಿದ್ದೇನೆ. ಖುದ್ದಾಗಿ ದೂರವಾಣಿ ಕರೆ ಮಾಡಿ ಕರೆಯುತ್ತೇನೆ. ಎಲ್ಲರಿಗೂ ಫೋನ್ ಕರೆ ಮಾಡಲು ಸಾಧ್ಯವಾಗದೇ ಇರಬಹುದು'' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕರ್ನಾಟಕ ಕಾಂಗ್ರೆಸ್ ಸಾರಥ್ಯದ ವಹಿಸಿರುವ ಡಿ.ಕೆ.ಶಿವಕುಮಾರ್ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಲವು ಯತ್ನಗಳನ್ನು ಮಾಡುತ್ತಿದ್ದಾರೆ. ಸಿನಿಮಾ ರಂಗದವರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಮೇಕೆದಾಟು ಮೂಲಕ ಚಳವಳಿ ಕಟ್ಟುವ ಯತ್ನವನ್ನೂ ಮಾಡುತ್ತಿದ್ದಾರೆ. ಈ ಹಿಂದೆ ಅವರೇ ಹೇಳಿಕೊಂಡಿದ್ದಂತೆ ಪುನೀತ್ ರಾಜ್ಕುಮಾರ್ ಅವರನ್ನು ಕಾಂಗ್ರೆಸ್ಗೆ ಸೆಳೆಯಲು ಯತ್ನಿಸಿದ್ದರಂತೆ ಆದರೆ ಪುನೀತ್ ರಾಜಕೀಯದಿಂದ ದೂರವೇ ಉಳಿದಿದ್ದರು.
ಡಿಕೆಶಿ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ನಾಗಣ್ಣ, ಮಾಜಿ ಅಧ್ಯಕ್ಷ ಚಿನ್ನೇಗೌಡ, ಸಾ.ರಾ. ಗೋವಿಂದು ಇನ್ನು ಹಲವರು ಉಪಸ್ಥಿತರಿದ್ದರು. ವಾಣಿಜ್ಯ ಮಂಡಳಿ ವತಿಯಿಂದ ಡಿ.ಕೆ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.


Click it and Unblock the Notifications











