'ವೀರ ಕಂಬಳ' ಚಿತ್ರಕ್ಕೆ ಬಣ್ಣ ಹಚ್ಚಿದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ
ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ವೀರ ಕಂಬಳ' ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ತುಳುನಾಡಿನ ಹೆಮ್ಮೆಯ ಕಂಬಳ ಸ್ಪರ್ಧೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಹಾಗೂ ತುಳು ಭಾಷೆಗಳಲ್ಲಿ 'ವೀರ ಕಂಬಳ' ಸಿನಿಮಾ ತೆರೆಗೆ ಬರಲಿದೆ. ತುಳು ಭಾಷೆಯಲ್ಲಿ 'ಬಿರ್ದ್ದ ಕಂಬಳ' ಹೆಸರಿನಲ್ಲಿ ಸಿನಿಮಾ ಮೂಡಿ ಬರ್ತಿದೆ. 7 ವರ್ಷಗಳ ಕಾಲ ಸಂಶೋಧನೆ ನಡೆಸಿ ಚಿತ್ರದ ಕಥೆ, ಚಿತ್ರಕಥೆ ಹೆಣೆಯಲಾಗಿದೆ. ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ಸಣ್ಣದಾಗಿ ಕಂಬಳ ಕ್ರೀಡೆಯನ್ನು ತೋರಿಸಲಾಗುತ್ತಿತ್ತು. ಇತ್ತೀಚೆಗೆ 'ಕಾಂತಾರ' ಚಿತ್ರದಲ್ಲೂ ಕಂಬಳ ಕ್ರೀಡೆಯ ಝಲಕ್ ಇತ್ತು.

ಅರುಣ್ ರೈ ತೋಡಾರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅವರು ಮೇಕಪ್ ಹಾಕಿಕೊಳ್ಳುತ್ತಿರುವ ಫೋಟೊ ವೈರಲ್ ಆಗುತ್ತಿದೆ. ತುಳುನಾಡಿನ ಪ್ರಸಿದ್ಧ ರಂಗಭೂಮಿ ಕಲಾವಿದರ ಜೊತೆಗೆ ಪ್ರಕಾಶ್ ರಾಜ್, ಆರ್ಮುಗ ರವಿಶಂಕರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕಂಬಳದ ಕೋಣ ಓಡಿಸುವುದರಲ್ಲಿ ಪರಿಣಿತರಾಗಿರುವ ಶ್ರೀನಿವಾಸ್ ಗೌಡ ಹಾಗೂ ರಂಗಭೂಮಿ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳದ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದಿತ್ಯಾ, ರಾಧಿಕಾ ಚೇತನ್, ಭೋಜರಾಜ್, ನವೀನ್ ಪಡೀಲ್ ಕೂಡ ಚಿತ್ರದಲ್ಲಿದ್ದಾರೆ.

'ವೀರ ಕಂಬಳ' ಚಿತ್ರದ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ. ಮಣಿಕಾಂತ್ ಕದ್ರಿ ಸಂಗೀತ, ಗಿರಿ ಛಾಯಾಗ್ರಹಣ ಚಿತ್ರಕ್ಕಿದೆ. ತುಳುನಾಡಿನ ಭಾಷೆ, ಸಂಸ್ಕೃತಿ ಸೊಗಡನ್ನು ಈ ಸಿನಿಮಾ ಮೂಲಕ ಜಗತ್ತಿಗೆ ಪಸರಿಸುವಂತೆ ಮಾಡಲಾಗುತ್ತಿದೆ. ವಿಜಯ್ ಕುಮಾರ್ ಕಿಡಿಯಾಲ್ ಬೈಲ್ ಸಂಭಾಷಣೆ ಬರೆದಿದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











