"ಆ ದೇವತಾ ಮನುಷ್ಯನ ಬಗ್ಗೆ ಮಾತಾಡೋ ಯೋಗ್ಯತೆನೂ ಇಲ್ಲ" - ದುನಿಯಾ ವಿಜಯ್!
ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳತ್ತಲೇ ಇದೆ. ಈ ಘಟನೆ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ.
ಚಪ್ಪಲಿ ಎಸೆದಿದ್ದು ಅಪ್ಪು ಅಭಿಮಾನಿಗಳೇ ಎಂದು ಕೆಲ ದರ್ಶನ್ ಅಭಿಮಾನಿಗಳು ದೂರುತ್ತಿದ್ದಾರೆ. ಇತ್ತ ಪುನೀತ್ ಹಾಗೂ ಅಣ್ಣಾವ್ರ ಕುಟುಂಬದ ಅಭಿಮಾನಿಗಳು ಈ ಆರೋಪಕ್ಕೆ ತಿರುಗೇಟು ನೀಡುತ್ತಿದ್ದಾರೆ. ಈ ಬೆನ್ನಲ್ಲೇ ದುನಿಯಾ ವಿಜಯ್ ಅಣ್ಣಾವ್ರ ಕುಟುಂಬವನ್ನು ಬೆಂಬಲಿಸಿ ಸುದೀರ್ಘ ಪತ್ರವನ್ನು ಬರೆದಿದ್ದಾರೆ.
ಚಪ್ಪಲಿ ಎಸೆದ ಘಟನೆ ನಡೆದ ಬೆನ್ನಲ್ಲೇ ದುನಿಯಾ ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದರು. ಚಪ್ಪಲಿ ಎಸೆದ ಘಟನೆಯನ್ನು ವಿರೋಧಿಸಿದ್ದರು. ಇಂದು (ಡಿಸೆಂಬರ್ 22) ಮತ್ತೊಂದು ಪತ್ರ ಬರೆದಿದ್ದು, ಅಣ್ಣಾವ್ರ ಕುಟುಂಬ ಗುರಿಯಾಗಿಸುತ್ತಿರುವುದನ್ನು, ಕೆಟ್ಟ ಭಾಷೆಯ ಪದಪ್ರಯೋಗಿಸುವುದನ್ನು ವಿರೋಧಿಸಿದ್ದಾರೆ. ಅಷ್ಟಕ್ಕೂ ದುನಿಯಾ ವಿಜಯ್ ಬರೆದ ಪತ್ರದಲ್ಲಿ ಏನಿದೆ? ಅನ್ನೋದನ್ನು ನೋಡಲು ಮುಂದೆ ಓದಿ.

'ದಿವಂಗತ ಅಪ್ಪು ಅವರನ್ನು ಗುರಿಯಾಗಿಸುತ್ತಿದ್ದಾರೆ'
"ಇವತ್ತು ಕನ್ನಡವಾಗಲಿ ಕನ್ನಡ ಚಿತ್ರರಂಗವಾಗಲಿ ಉತ್ತುಂಗ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಹಲವಾರು ಮಹಾನುಭಾವರು . ಅಂತಹವರ ಸಾಲಿನಲ್ಲಿ ಮಂಚೂಣಿಯಲ್ಲಿ ನಿಲ್ಲುವವರು ಅಂದ್ರೆ ನಮ್ಮ ಅಣ್ಣಾವ್ರು ಮತ್ತೆ ಅಣ್ಣಾವ್ರ ಕುಟುಂಬದವರು. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ವಿಧ್ಯಮಾನಗಳನ್ನು ಗಮನಿಸಿದರೆ ಒಬ್ಬನ ಅಚಾತುರ್ಯವನ್ನು ನೇರವಾಗಿ ಅಣ್ಣಾವ್ರ ಪುತ್ರ ಮತ್ತು ನಮ್ಮ ಕರುನಾಡಿನ ಹೆಮ್ಮೆಯ ಕುಡಿ ದಿವಂಗತ ಅಪ್ಪು ಅವರನ್ನು ಗುರಿಯಾಗಿಸುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ . ಇಲ್ಲಿಗೇ ನಿಲ್ಲಿಸದೇ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಟ್ಟ ಭಾಷೆಯ ಪದಪ್ರಯೋಗಿಸುತ್ತಿದ್ದಾರೆ . ಇದಂತೂ ಯಾರೂ ಕ್ಷಮಿಸಲಾರದಂತಹ ಕೆಟ್ಟ ನಡೆ." ಎಂದು ದುನಿಯಾ ವಿಜಯ್ ವಿಷಾದ ವ್ಯಕ್ತಪಡಿಸಿದ್ದಾರೆ.

'ಅಣ್ಣಾವ್ರ ಪುತ್ರನ ಬಗ್ಗೆ ಮಾತಾಡೋ ಯೋಗ್ಯತೆನೂ ಇಲ್ಲ'
"ಒಂದಂತು ಸತ್ಯ ನಾವು ಮನುಷ್ಯರಾಗಿ ಎಷ್ಟೇ ಜನುಮವೆತ್ತಿದರೂ ಆ ದೇವತಾ ಮನುಷ್ಯನ ಬಗ್ಗೆಯಾಗಲಿ ಅವರ ಕುಟುಂಬದವರ ಬಗ್ಗೆಯಾಗಲಿ ಮಾತಾಡೋ ಯೋಗ್ಯತೇನೂ ಇಲ್ಲದವರು ' . ಇಂತಹ ಪರಿಸ್ಥಿತಿಯಲ್ಲಿ ಕಲಾವಿದರಾಗಿ ನಾವು ನಿಲ್ಲದೇ ಇದ್ದರೆ ಇದು ನಿಲ್ಲದೇ ಇನ್ನೊಂದು ಮಜಲನ್ನು ತಲುಪುವ ಅಪಾಯವಿದೆ." ಎಂದು ದುನಿಯಾ ವಿಜಯ್ ಪತ್ರದ ಮೂಲಕ ಹೇಳಿದ್ದಾರೆ.

ದರ್ಶನ್ ಬಳಿ ಕೇಳಿಕೊಂಡ ಮಾತೇನು?
"ನಾನು ದರ್ಶನ್ ಅವರಲ್ಲಿ ಕೇಳಿಕೊಳ್ಳುವುದು ಒಂದೇ ಮಾತು... ಅಂತಹ ಪರಿಸ್ಥಿತಿಯಲ್ಲೂ " ಪರ್ವಾಗಿಲ್ಲ ಬಿಡು ಚಿನ್ನ " ಎಂಬ ಸಹನೆಯ ಮಾತಾಡಿ ಹೃದಯವನ್ನೇ ಗೆದ್ದಿದ್ದೀರಿ. ಇನ್ನೊಂದು ಮಾತು ನಿಮ್ಮನ್ನು ಇಷ್ಟಪಡುವ ಮತ್ತು ನಿಮ್ಮ ಮಾತನ್ನು ಎಂದೂ ದಾಟದ ನಿಮ್ಮ ಅಭಿಮಾನಿಗಳಿಗೆ ಹೇಳಿದರೆ ಎಲ್ಲವೂ ಸರಿಹೋಗುತ್ತದೆ." ಎಂದು ದರ್ಶನ್ ಬಳಿಕ ದುನಿಯಾ ವಿಜಯ್ ಮನವಿ ಮಾಡಿಕೊಂಡಿದ್ದಾರೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಳಿಕವೂ ವಿಜಯ್ ಅವರ ಬೆಂಬಲಕ್ಕೆ ನಿಂತಿದ್ದರು.

'ದಯವಿಟ್ಟು ನಮ್ಮ ನಡುವೆ ದ್ವೇಷವನ್ನು ಹರಡದಿರಿ'
"ಹೊಸಪೇಟೆಯಲ್ಲಿ ನಡೆದ ಅಮಾನವೀಯ ಘಟನೆ ನಿಜಕ್ಕೂ ಮನಸ್ಸಿಗೆ ತುಂಬಾನೇ ನೋವುಂಟು ಮಾಡಿದೆ . ನಾವು ಕಲಾವಿದರು ....ಹಾಡುತ್ತೇವೆ ಕುಣಿಯುತ್ತೇವೆ ಏಳುತ್ತೇವೆ ಬೀಳುತ್ತೇವೆ ಎಲ್ಲವನ್ನೂ ಮಾಡುವುದು ಅಭಿಮಾನಿಗಳನ್ನು ರಂಜಿಸಲು ಮಾತ್ರ . ಕಲಾವಿದರ ಮಧ್ಯೆ ಅಣ್ಣತಮ್ಮಂದಿರ ಸಂಬಂಧವಿದ್ದರೆ , ಕಲಾವಿದರು ಮತ್ತು ಅಭಿಮಾನಿಗಳ ಮಧ್ಯೆ ಅವ್ವ ಮಕ್ಕಳ ಸಂಬಂಧವಿರುತ್ತದೆ . ಹೌದು ಅಭಿಮಾನಿಗಳು ಅಂದ್ರೆ ನಮ್ಮ ತಟ್ಟೆಗೆ ಅನ್ನ ಬಡಿಸುವ ಅವ್ವಂದಿರೇ . ಯಾರೋ ಒಬ್ಬ ಸಣ್ಣಮನಸ್ಸಿನ ವ್ಯಕ್ತಿಯು ಮಾಡಿದ ಹೇಯ ಕೃತ್ಯದಿಂದ ಈ ಅನ್ಯೋನ್ಯ ಸಂಬಂಧ ಹಾಳಾಗಬಾರದು . ನಾನು ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ..... ದಯವಿಟ್ಟು ನಮ್ಮ ನಡುವೆಯೇ ಆಗಲಿ ನಮ್ಮ ಅಭಿಮಾನಿಗಳ ಮಧ್ಯೆಯೇ ಆಗಲಿ ದ್ವೇಷವನ್ನು ಹರಡದಿರಿ." ಎಂದು ದುನಿಯಾ ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.


Click it and Unblock the Notifications











