ಸ್ಟಾರ್ ನಟರ ಕಡೆಯಿಂದ ಸ್ವಾತಂತ್ರ್ಯ ದಿನದಂದು ಸಿಗಲಿದೆ ಅಚ್ಚರಿ
Recommended Video

ನಾಳೆ (ಆಗಸ್ಟ್ 15) ಭಾರತಾಂಭೆಯ ದಿನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಈ ಮಹಾ ದಿನವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ಎನ್ನುವುದು ಜಾತಿ ಧರ್ಮಗಳನ್ನು ವೀರಿದ ಶ್ರೇಷ್ಠ ಹಬ್ಬ.
ಇನ್ನು ಸಿನಿಮಾ ನಟರು ಕೂಡ ಈ ಬಾರಿಯ ಸ್ವಾತಂತ್ರ್ಯ ದಿನಕ್ಕೆ ಅಚ್ಚರಿ ನೀಡುತ್ತಿದ್ದಾರೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸುದೀಪ್, ಶ್ರೀಮುರಳಿ ಸೇರಿದಂತೆ ಕೆಲ ನಟರು ಸಿನಿಮಾಗಳು ಸ್ವಾತಂತ್ರ್ಯ ದಿನದಂದು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ.
ಅಂದಹಾಗೆ, ನಾಳೆ ಸ್ವಾತಂತ್ರ್ಯ ದಿನದ ಅಂಗವಾಗಿ ಕನ್ನಡ ಚಿತ್ರರಂಗದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಮುಂದಿದೆ ಓದಿ..

ರಾಘವೇಂದ್ರ ರಾಜ್ ಕುಮಾರ್ ಸಿನಿಮಾ ಲಾಂಚ್
ನಾಳೆ ನಟ ರಾಘವೇಂದ್ರ ರಾಜ್ ಕುಮಾರ್ ಸಿನಿಮಾ ಅವರ ಹೊಸ ಸಿನಿಮಾ ಲಾಂಚ್ ಆಗುತ್ತಿದೆ. ವಿಶೇಷ ಅಂದರೆ ನಾಳೆ ಅವರ ಹುಟ್ಟುಹಬ್ಬ ಕೂಡ ಹೌದು. 14 ವರ್ಷಗಳ ನಂತರ ನಟನೆಗೆ ಮರಳಿರುವ ರಾಘಣ್ಣ 'ಅಮ್ಮನ ಮನೆ' ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು ನಿರ್ದೇಶನ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ತಾಯಿಯ ಪಾತ್ರಕ್ಕೆ ಬಿ ಜಯಶ್ರೀ ಹಾಗೂ ಹೆಂಡತಿಯ ಪಾತ್ರಕ್ಕೆ ಮಾನಸಿ ಸುಧೀರ್ ಆಯ್ಕೆ ಆಗಿದ್ದಾರೆ.

'ದಿ ವಿಲನ್' ನಾಲ್ಕನೇ ಹಾಡು
'ದಿ ವಿಲನ್' ಸಿನಿಮಾದ ನಾಲ್ಕನೇ ಹಾಡು ನಾಳೆ ಬಿಡುಗಡೆಯಾಗಲಿದೆ. ಈ ಹಾಡು ಶ್ರೇಯಾ ಘೋಷಾಲ್ ಹಾಗೂ ಅರ್ಮನ್ ಮಲ್ಲಿಕ್ ಅವರ ಕಾಂಬಿನೇಶನ್ ನಲ್ಲಿ ಬರಲಿದೆ. ಈಗಾಗಲೇ ಸಿನಿಮಾದ ಆಡಿಯೋ ಹಿಟ್ ಆಗಿದ್ದು, ನಾಲ್ಕನೇ ಹಾಡಿನ ಬಗ್ಗೆ ನಿರೀಕ್ಷೆ ಇದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಪ್ರೇಮ್ ನಿರ್ದೇಶನದ ಚಿತ್ರ ಇದಾಗಿದೆ.

'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಟ್ರೇಲರ್
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾದ ಟ್ರೇಲರ್ ಸ್ವಾತಂತ್ರ್ಯ ದಿನ ವಿಶೇಷವಾಗಿ ರಿಲೀಸ್ ಆಗಲಿದೆ. ಇದು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಮೈಸೂರಿನ ಕೋಟೆ ಆಂಜನೆಯಸ್ವಾಮಿ ದೇವಸ್ಥಾನದಲ್ಲಿ ನೆಡೆಯಲಿರುವ ‘Midnight Freedom Run' ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

'ಭರಾಟೆ' ಮೋಷನ್ ಪೋಸ್ಟರ್
ಶ್ರೀ ಮುರಳಿ ನಟನೆಯ 'ಭರಾಟೆ' ಸಿನಿಮಾದ ಮೋಷನ್ ಪೋಸ್ಟರ್ ಕೂಡ ನಾಳೆ ಹೊರಬರಲಿದೆ. ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾದ ಮೇಕಿಂಗ್ ವಿಡಿಯೋ ಹಾಗೂ ಪೋಸ್ಟರ್ ಗಳು ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, 'ಭರಾಟೆ' ಚೇತನ್ ಕುಮಾರ್ ನಿರ್ದೇಶನದ ಮೂರನೇ ಸಿನಿಮಾವಾಗಿದೆ.

ಭಾರತಿ ವಿಷ್ಣುವರ್ಧನ್ ಹುಟ್ಟುಹಬ್ಬ
ಹಿರಿಯ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭಾರತಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ನಾಳೆ ಇದೆ. ಈ ವರ್ಷದ ಅವರ ಹುಟ್ಟುಹಬ್ಬದ ವಿಶೇಷವಾಗಿ ಅವರ ಬಗ್ಗೆ ಒಂದು ಸಾಕ್ಷ್ಯ ಚಿತ್ರ ಮಾಡಲಾಗುತ್ತಿದೆ. ಈ ಸಾಕ್ಷ್ಯ ಚಿತ್ರದ ಮುಹೂರ್ತ ಕಾರ್ಯಕ್ರಮ ನಾಳೆ ಅವರ ನಿವಾಸದಲ್ಲಿ ನಡೆಯಲಿದೆ.

ವಾಣಿಜ್ಯ ಮಂಡಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ ನಾಳೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಧ್ವಜಾರೋಹಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಫಿಲ್ಮ್ ಚೆಂಬರ್ ಅಧ್ಯಕ್ಷರಾದ ಚಿನ್ನೇಗೌಡ್ರು ಹಾಗೂ ಹಿರಿಯ ಬರಹಗಾರ ದೊಡ್ಡ ರಂಗೇಗೌಡರು ಭಾಗಿಯಾಗಲಿದ್ದಾರೆ.

'ಅಗ್ರಸೇನಾ' ಚಿತ್ರದ ಮುಹೂರ್ತ
ಈ ಎಲ್ಲ ಕಾರ್ಯಕ್ರಮಗಳ ಜೊತೆಗೆ ಅಗ್ರಸೇನಾ ಎಂಬ ಹೊಸ ಸಿನಿಮಾ ನಾಳೆ ಮುಹೂರ್ತ ಮಾಡಿಕೊಳ್ಳುತ್ತಿದೆ. ಎನ್.ಕೆ.ಮುರುಗೇಶ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಹೆತ್ವಿಕ್ ಕೃಷ್ಣ, ಗೌರವ್ ಗಂಗಾಲು, ಬೇಬಿ ತನಿಷ್ಕ ರೆಡ್ಡಿ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಲಿದ್ದಾರೆ.


Click it and Unblock the Notifications











