ಬಚ್ಚನ್ ಬಿಡುಗಡೆಗೆ ಕ್ಷಣಗಣನೆ : ನಿರ್ದೇಶಕರ ಜೊತೆ ಹರಟೆ
ಬಹು ನಿರೀಕ್ಷಿತ ಸುದೀಪ್ ಮುಖ್ಯ ಭೂಮಿಕೆಯಲ್ಲಿರುವ ಶಶಾಂಕ್ ನಿರ್ದೇಶನದ ಬಚ್ಚನ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರದಲ್ಲಿ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿರುವ ಸುದೀಪ್ ಗೆ ಮೂವರು ಹಿರೋಯಿನ್ ಗಳು.
ಯುಗಾದಿ ಹಬ್ಬದ ರಜೆಯ ದಿನದಂದು ಬಿಡುಗಡೆಯಾಗಲಿರುವ ಚಿತ್ರಕ್ಕೆ ಈಗಾಗಲೇ ಮಲ್ಟಿಪ್ಲೆಕ್ಷ್ ಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದೆ. ಚಿತ್ರದ ವಿಮರ್ಶೆಯನ್ನು ಒನ್ ಇಂಡಿಯಾ ಕನ್ನಡದಲ್ಲಿ ನಾಳೆ (ಏ 11) ಮಧ್ಯಾಹ್ನದ ನಂತರ ಓದಲು ಮರೆಯದಿರಿ.
ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಗೆ ತರುವಲ್ಲಿ ನಿಸ್ಸೀಮರಾಗಿರುವ ಚಿತ್ರದ ನಿರ್ದೇಶಕ ಶಶಾಂಕ್ ಪ್ರಕಾರ ಸುದೀಪ್ ಅಭಿನಯದ ಬಚ್ಚನ್ ನೋಡಲೇ ಬೇಕಾದ ಚಿತ್ರ. ಶಶಾಂಕ್ ಜೊತೆ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಸಂದರ್ಶನ ನಡೆಸಿದವರು ಬಾಲರಾಜ್ ತಂತ್ರಿ.
ಪ್ರ: ಒಟ್ಟು ಎಷ್ಟು ಚಿತ್ರ ಮಂದಿರದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ?
ಶಶಾಂಕ್ : ಇದುವರೆಗೆ 195 ಚಿತ್ರಮಂದಿರ ಕನ್ಫರ್ಮ್ ಆಗಿದೆ. ಸಂಜೆಹೊತ್ತಿಗೆ ಇನ್ನಷ್ಟು ಥಿಯೇಟರುಗಳು ಸಿಗಲಿವೆ.
ಪ್ರ: ಹೊರ ರಾಜ್ಯದಲ್ಲಿ ಮತ್ತು ಹೊರ ದೇಶದಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆಯಾ?
ಶಶಾಂಕ್ : simultaneous ಆಗಿ ಚಿತ್ರ ಬಿಡುಗಡೆ ಮಾಡಬೇಕೆನ್ನುವ ಪ್ಲಾನ್ ಹಾಕಿಕೊಂಡಿದ್ವಿ. ಆದರೆ ಕೊನೇ ಕ್ಷಣದಲ್ಲಿ ಡಿಸ್ಕ್ ಕಳುಹಿಸಲಾಗಲಿಲ್ಲ. ಬರುವ ವಾರದಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ, ಮುಂಬೈ, ಚೆನ್ನೈ ಮತ್ತು ಹೈದರಾಬಾದಿನಲ್ಲಿ ಕನ್ನಡ ವರ್ಸನ್ ಬಿಡುಗಡೆಯಾಗಲಿದೆ.

ಶಶಾಂಕ್ ಸಂದರ್ಶನ
ಪ್ರ: ರಾಜ್ಯದಲ್ಲಿ ಇತರ ಭಾಷೆಗಳಿಗೆಂದೇ ಮೀಸಲಾಗಿರುವ ಯಾವುದಾದರೂ ಚಿತ್ರಮಂದಿರದಲ್ಲಿ ಬಚ್ಚನ್ ಬಿಡುಗಡೆಯಾಗುತ್ತಿದೆಯಾ?
ಶಶಾಂಕ್ : ಕಾವೇರಿ, ಎಚ್ ಎಂ ಟಿ, ಫೇಮ್, ಸಿನಿ ಮ್ಯಾಕ್ಸ್ ಮುಂತಾದ ಕಡೆ ಬಿಡುಗಡೆಯಾಗುತ್ತಿದೆ.
ಪ್ರ: ಬಿಗ್ ಬಾಸ್ ರಿಯಾಲಿಟಿ ಶೋವಿನ ಅಭೂತಪೂರ್ವ ಯಶಸ್ಸು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆಯಾ?
ಶಶಾಂಕ್ : ಸುದೀಪ್ ಈಗ ಮುಟ್ಟಿದ್ದೆಲ್ಲಾ ಚಿನ್ನ. ತೆಲುಗಿಗೆ ಹೋದ್ರು ಅಲ್ಲಿ ಹಿಟ್ ಆದ್ರು. ಕ್ರಿಕೆಟ್ ಆಡೋಕೆ ಹೋದ್ರು ಕಪ್ ತಗೊಂಡು ಬಂದ್ರು. ರಿಯಾಲಿಟಿ ಶೋ ಮಾಡಿದ್ರು, ಅದೂ ಹಿಟ್. ಹೀಗಿರುವಾಗ ಖಂಡಿತಾ ಅವರ ಸ್ಟಾರ್ ವ್ಯಾಲ್ಯೂ ಜಾಸ್ತಿ ಆಗಿದೆ. ಚಿತ್ರಕ್ಕೆ ಇದು ಪ್ಲಸ್ ಪಾಯಿಂಟ್.

ಶಶಾಂಕ್ ಸಂದರ್ಶನ
ಪ್ರ: ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದೀರಾ?
ಶಶಾಂಕ್ : ಚಿತ್ರದ ಹೆಚ್ಚಿನ ಭಾಗ ಶೂಟಿಂಗ್ ಮಾಡಿದ್ದು ಬೆಂಗಳೂರಿನಲ್ಲಿ. ಜನ ಈ ಚಿತ್ರದ ಮೂಲಕ ಹೊಸ ಬೆಂಗಳೂರು ನೋಡಲಿದ್ದಾರೆ. ಮಿಕ್ಕಂತೆ ಉತ್ತರ ಕರ್ನಾಟಕ, ಬಳ್ಳಾರಿಯಲ್ಲಿ ಶೂಟಿಂಗ್ ಮಾಡಿದ್ದೇವೆ. ಎರಡು ಹಾಡಿಗೆ ಸೆಟ್ ಹಾಕಿದ್ರೆ, ಇನ್ನೆರಡು ಹಾಡನ್ನು ಮಸ್ಕತ್ ಮತ್ತು ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಿದ್ದೇವೆ.
ಪ್ರ: ಬಚ್ಚನ್ ಚಿತ್ರದ ವಿಶೇಷತೆಯೇನು?
ಶಶಾಂಕ್ : ಇದು ಬರೀ action oriented ಚಿತ್ರವಲ್ಲ. ವಿಶಿಷ್ಟ ರೀತಿಯಲ್ಲಿ ಚಿತ್ರವನ್ನು ತೆರೆಗೆ ತಂದಿದ್ದೇವೆ. ನಮ್ಮ ಪರಿಶ್ರಮ ಒಂದೊಂದು ಫ್ರೇಮಿನಲ್ಲೂ ಎದ್ದು ಕಾಣುತ್ತಿದೆ. ತುಂಬಾ ಪ್ರೀತಿಯಿಂದ ಚಿತ್ರವನ್ನು ಮಾಡಿದ್ದೇವೆ.

ಶಶಾಂಕ್ ಸಂದರ್ಶನ
ಪ್ರ: ಚಿತ್ರದ ಮೇಕಿಂಗ್ ಬಗ್ಗೆ?
ಶಶಾಂಕ್ : ಫ್ಯಾಷನ್ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಬರೀ ಕಮರ್ಶಿಯಲ್ ದೃಷ್ಟಿಯಲ್ಲಿ ನೋಡದೇ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಇದು ಕನ್ನಡದ ಮಟ್ಟಿಗೆ ಭಾರೀ ಬಜೆಟಿನ ಚಿತ್ರ. ಒಂದು ಒಳ್ಳೆ ಚಿತ್ರಕ್ಕೆ ಕೈಹಾಕಿದ್ದೇವೆ, ಹಣದ ಬಗ್ಗೆ ಚಿಂತೆ ಮಾಡದೆ ನಿರ್ಮಾಪಕರು ದುಡ್ಡು ಸುರಿದಿದ್ದಾರೆ. ಒಳ್ಳೆ ಚಿತ್ರವನ್ನು ಎಂದೂ ಕನ್ನಡಿಗರು ಕೈಬಿಟ್ಟಿಲ್ಲ ಎನ್ನುವ ಅಚಲ ನಂಬಿಕೆಯಲ್ಲಿದ್ದೇವೆ.
ಪ್ರ: ಸುದೀಪ್ ಜೊತೆ ನಿಮ್ಮ ವರ್ಕ್ ಎಕ್ಸ್ ಪೀರಿಯನ್ಸ್ ಬಗ್ಗೆ?
ಶಶಾಂಕ್ : down to earth artist. ಈ ಚಿತ್ರಕ್ಕಾಗಿ ಬೇರೆ ಯಾರಿಗೂ ಕಾಲ್ ಶೀಟ್ ನೀಡಿಲ್ಲ. ಚಿತ್ರದ ಒಂದೊಂದು ಹಂತದಲ್ಲೂ, ಪ್ರಚಾರದಲ್ಲೂ ಚಿತ್ರ ತಂಡದೊಂದಿಗೆ ಸುದೀಪ್ ಸಹಕರಿಸುತ್ತಿದ್ದಾರೆ. ನಟನೆಯಲ್ಲಿ ಎಷ್ಟು ತಲ್ಲೀನರಾಗುತ್ತಾರೆಂದರೆ ಕೆಲವೊಮ್ಮೆ ಶೂಟಿಂಗ್ ಸ್ಪಾಟಿನಲ್ಲಿ ಸಹ ಕಲಾವಿದರು ಚಪ್ಪಾಳೆ ಹೊಡೆಯುತ್ತಿದ್ದರು.

ಶಶಾಂಕ್ ಸಂದರ್ಶನ
ಪ್ರ: ಚಿತ್ರದ ಶೂಟಿಂಗ್ ಸಮಯದಲ್ಲಿನ ಮರೆಯಲಾಗದ ಘಟನೆ ಏನಾದರೂ ಹೇಳೋಕೆ ಇಷ್ಟ ಪಡ್ತೀರಾ?
ಶಶಾಂಕ್ : ಇಡೀ ಚಿತ್ರದ ಚಿತ್ರೀಕರಣ ನನಗೆ ಮರೆಯಲಾಗದ ಘಟನೆ. ಚಿತ್ರದಲ್ಲಿನ ಎಲ್ಲಾ ಕಲಾವಿದರ ನಟನೆ ನನ್ನನ್ನು ಕಾಡುತ್ತಿದೆ. ರವಿಶಂಕರ್, ಆಶಿಸ್ ವಿದ್ಯಾರ್ಥಿ, ಜಗಪತಿಬಾಬು, ನಾಯಕಿಯರು ಮತ್ತು ಇತರ ಕಲಾವಿದರ ನಟನೆಯೇ 'ನನಗೆ ಮರೆಯಲಾಗದ ಘಟನೆ'.
ಪ್ರ: ಕೊನೆಗೆ, ಬಚ್ಚನ್ ಚಿತ್ರದ ಬಗ್ಗೆ ಚಿತ್ರರಸಿಕರಿಗೆ ಏನು ಹೇಳೋಕೆ ಇಷ್ಟ ಪಡ್ತೀರಾ?
ಶಶಾಂಕ್ : ಎಲ್ಲರಿಗೂ ಯುಗಾದಿ ಹಬ್ಬದ ಶುಭಾಷಯಗಳು. ಈಗಾಗಲೇ ಹೇಳಿದಂತೆ ಪ್ರೀತಿಯಿಂದ, ತಾಂತ್ರಿಕವಾಗಿ ಗುಣಮಟ್ಟದ ಚಿತ್ರವನ್ನು ನೀಡಿದ್ದೇವೆ. ಒಳ್ಳೆ ಚಿತ್ರಕ್ಕೆ ನೀವು ಬೆನ್ನು ತಟ್ಟುತ್ತೀರಾ ಎನ್ನುವ ನಂಬಿಕೆಯಿದೆ. ಚಿತ್ರ ನೋಡಿ, ಸಣ್ಣ ಪುಟ್ಟ ತಪ್ಪಿದ್ದರೆ ಕ್ಷಮಿಸಿ. ನಮ್ಮನ್ನು ಪ್ರೋತ್ಸಾಹಿಸಿ.

ಶಶಾಂಕ್ ಸಂದರ್ಶನ
ಪ್ರ: ಕನ್ನಡ ಚಿತ್ರಗಳು ಕಳೆದ ಎರಡು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಬಗ್ಗೆ?
ಶಶಾಂಕ್ : ಒಳ್ಳೆ ಕಲಾವಿದರನ್ನು ಗುರುತಿಸುವ ಕೆಲಸವನ್ನು ನಿರ್ದೇಶಕರು ಮಾಡುತ್ತಿದ್ದಾರೆ. ಹೊಸ ಪ್ರಯತ್ನಗಳು ನಡೆಯುತ್ತಿದೆ. ಹೊಸ ಮುಖಗಳ ಪರಿಚಯವಾಗುತ್ತಿದೆ. ಗುಡ್, ನಮ್ಮ ಚಿತ್ರಗಳು ಯಶಸ್ವಿಯಾಗುತ್ತಿದೆ ಎನ್ನುವುದಕ್ಕೆ ನಿರ್ದೇಶಕನಾಗಿ ನನಗೆ ಬಹಳ ಸಂತೋಷವಾಗುತ್ತಿದೆ.


Click it and Unblock the Notifications











