ಶ್ರೀಮುರಳಿ ಚಿತ್ರದಲ್ಲಿ ಮಲಯಾಳಂ ಸ್ಟಾರ್ ನಟ ಫಾಹದ್ ಫಾಸಿಲ್ ನಟನೆ?!
ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಜನಪ್ರಿಯತೆ ಗಳಿಸಿ ಪ್ರಾತಿನಿದ್ಯತೆ ಪಡೆದುಕೊಂಡ ಬೆನ್ನಲ್ಲೇ ನಟರು ಭಾಷೆಗಳ ಬೇಲಿ ದಾಟಿ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದು ಕಾಮನ್ ಆಗಿಬಿಟ್ಟಿದೆ. ಹೌದು, ಒಂದು ಭಾಷೆಯ ಪ್ರತಿಭಾವಂತ ಕಲಾವಿದ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದು ಸದ್ಯ ರೂಢಿಯಾಗಿದ್ದು, ಅದೊಂದು ಹೊಸ ಟ್ರೆಂಡ್ ಅಗಿ ಬದಲಾಗುತ್ತಿದೆ.
ಎಪ್ಪತ್ತು, ಎಂಬತ್ತರ ದಶಕದಲ್ಲಿಯೂ ಹಲವು ಸ್ಟಾರ್ ನಟರು ಬೇರೆ ಇಂಡಸ್ಟ್ರಿಗಳಲ್ಲಿ ಕೆಲಸ ನಿರ್ವಹಿಸಿದ ಉದಾಹರಣೆಗಳಿದ್ದರೂ ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿತ್ತು. ಆದರೆ ಮತ್ತೆ ಈ ಟ್ರೆಂಡ್ ರೂಢಿಗೆ ಬಂದಿದ್ದು, ತಮಿಳಿನ ವಿಜಯ್ ಸೇತುಪತಿ ತೆಲುಗಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಕನ್ನಡದ ನಟರಾದ ಶಿವ ರಾಜ್ಕುಮಾರ್ ಹಾಗೂ ಡಾಲಿ ಧನಂಜಯ್ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ದುನಿಯಾ ವಿಜಯ್ ಸಹ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದರು.

ಹೀಗೆ ವಿವಿಧ ಇಂಡಸ್ಟ್ರಿಗಳ ಚಿತ್ರಗಳಲ್ಲಿ ನಟಿಸುತ್ತಿರುವ ಸಕ್ರಿಯ ನಟರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ಮಲಯಾಳಂ ನಟ ಫಾಹದ್ ಫಾಸಿಲ್ ತೆಲುಗು ಹಾಗೂ ತಮಿಳು ಚಿತ್ರಗಳ ಬಳಿಕ ಈಗ ಕನ್ನಡ ಚಲನಚಿತ್ರರಂಗಕ್ಕೂ ಕಾಲಿಡುವ ಸಾಧ್ಯತೆಗಳಿವೆ. ಹೌದು, ಪುಷ್ಪ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಫಾಹದ್ ಫಾಸಿಲ್ ವಿಕ್ರಮ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ಈ ಎರಡೂ ಚಿತ್ರಗಳಲ್ಲಿಯೂ ಅಮೋಘವಾಗಿ ನಟಿಸಿದ್ದ ಫಾಹದ್ ಫಾಸಿಲ್ ಅಲ್ಲಿನ ಸಿನಿ ರಸಿಕರ ಮನಸ್ಸನ್ನು ಗೆದ್ದಿದ್ದರು.
ಸದ್ಯ ಇದೇ ಫಾಹದ್ ಫಾಸಿಲ್ ಕನ್ನಡದ ಬಹು ನಿರೀಕ್ಷಿತ ಬಘೀರ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹೌದು, ಪ್ರಶಾಂತ್ ನೀಲ್ ಬರೆದಿರುವ ಕಥೆಯಾದ ಬಘೀರಕ್ಕೆ ಡಾ ಸೂರಿ ನಿರ್ದೇಶನವಿದ್ದು, ಶ್ರೀಮುರಳಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಇದೇ ಹೊ೦ಬಾಳೆ ಫಿಲ್ಮ್ಸ್ ಫಾಹದ್ ಫಾಸಿಲ್ ನಾಯಕನಾಗಿ ನಟಿಸುತ್ತಿರುವ ಧೂಮಂ ಎಂಬ ಮಲಯಾಳಂ ಹಾಗೂ ಕನ್ನಡ ದ್ವಿಭಾಷಾ ಚಿತ್ರವನ್ನೂ ಸಹ ನಿರ್ಮಿಸುತ್ತಿದೆ. ಈ ಚಿತ್ರಕ್ಕೆ ಲೂಸಿಯಾ ಹಾಗೂ ಯೂ ಟರ್ನ್ ಖ್ಯಾತಿಯ ಪವನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.
ಸದ್ಯ ಈ ನಟ ಶ್ರೀ ಮುರಳಿ ನಟನೆಯ ಬಘೀರ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡುತ್ತಿದ್ದು, ಇತ್ತೀಚೆಗಷ್ಟೆ ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಗಂಭೀರ ಪೆಟ್ಟಾದ ಕಾರಣ ಶ್ರೀ ಮುರಳಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸದ್ಯ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಶ್ರೀ ಮುರಳಿ ಚೇತರಿಸಿಕೊಂಡ ನಂತರ ಚಿತ್ರೀಕರಣ ಮುಂದುವರಿಯಲಿದೆ.


Click it and Unblock the Notifications











