ಪುನೀತ್ ಸಾವಿನ ಬಗ್ಗೆ ಅನುಮಾನ: ದೂರು ನೀಡಲು ಮುಂದಾದ ಅಭಿಮಾನಿ
ನಟ ಪುನೀತ್ ಧಿಡೀರ್ ಸಾವು ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿದೆ. ಸಾಯುವ ಕೊನೆಕ್ಷಣದ ವರೆಗೂ ನಗುನಗುತ್ತಲೇ ಇದ್ದ ಪುನೀತ್ ಅದು ಹೇಗೆ ಸಾವನ್ನಪ್ಪಿದ್ರು ಎಂಬ ಬಗ್ಗೆ ಸಾಕಷ್ಟು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಂತೂ ಕೊಂಚ ಪ್ರಯತ್ನ ಪಟ್ಟಿದ್ದರೂ ಪುನೀತ್ ಅವರನ್ನು ಉಳಿಸಿಕೊಳ್ಳಬಹುದಿತ್ತು ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಕುಟುಂಬ ಸದಸ್ಯರು ಕೂಡ ಮಾತನಾಡಿದ್ದು ಇನ್ನೊಂದು 10 ನಿಮಿಷ ಸಮಯ ದೇವರು ಕೊಟ್ಟಿದ್ದರು ಅಪ್ಪುರನ್ನು ಉಳಿಸಿಕೊಳ್ಳಬಹುದಿತ್ತು ಎಂದು ಕಂಬನಿ ಮಿಡಿದಿದ್ದಾರೆ. ಹೀಗಿದ್ದರೂ ಪುನೀತ್ ಸಾವು ಒಂದು ಪ್ರಶ್ನೆಯಾಗೆ ಎಲ್ಲರ ಮನಸ್ಸಲ್ಲೂ ಉಳಿದು ಬಿಟ್ಟಿದೆ.
ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮನನೊಂದ ಅಭಿಮಾನಿಯೊಬ್ಬ ಪುನೀತ್ ಸಾವಿನ ಬಗ್ಗೆ ತನಿಖೆ ಆಗಬೇಕು ಎಂದು ದೂರು ನೀಡಲು ಮುಂದಾಗಿದ್ದಾನೆ. ಅರುಣ್ ಪರಮೇಶ್ವರ್ ಎಂಬ ವ್ಯಕ್ತಿ ಪುನೀತ್ರನ್ನು ಮೊದಲಿನಿಂದಲೂ ತುಂಬಾ ಇಷ್ಟ ಪಡುತ್ತಿದ್ದರು. ಪುನೀತ್ ಅಭಿನಯದ ಒಂದೂ ಸಿನಿಮಾವನ್ನು ಮಿಸ್ ಮಾಡದೇ ನೋಡುತ್ತಿದ್ದ ಅರುಣ್, ಪ್ರತೀ ವರ್ಷ ಅವರ ಬರ್ತ್ಡೇಗೆ ಕೂಡ ಬೆಂಗಳೂರಿನ ಸದಾಶಿವ ನಗರದ ಪುನೀತ್ ನಿವಾಸಕ್ಕೆ ಆಗಮಿಸುತ್ತಿದ್ದರು. ಹೀಗೆ ಪುನೀತ್ರನ್ನು ಅಪಾರವಾಗಿ ಪ್ರೀತಿಸುತ್ತಿದ್ದ, ಮತ್ತು ಅವರನ್ನೆ ಅನುಸರಿಸುತ್ತಿದ್ದ ಅರುಣ್ಗೆ ಪುನೀತ್ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋದರು ಯಾಕೆ ಪುನೀತ್ ಬದುಕುಳಿದಿಲ್ಲ ಎಂದು ಅನುಮಾನಗೊಂಡಿರುವ ಅರುಣ್ ಇದೀಗ ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ. ಪುನೀತ್ ಸಾವಿನ ಪ್ರತೀ ವಿಷಯವನ್ನು ತನಿಖೆ ಮಾಡಬೇಕು ಎಂದು ದೂರಿನ ಪ್ರತಿಯಲ್ಲಿ ಬರೆದಿದ್ದಾರೆ.

ಅರುಣ್ ಪರಮೇಶ್ವರ್ ದೂರಿನ ಪ್ರತಿಯಲ್ಲಿ ಏನಿದೆ?
ನಟ ಪುನೀತ್ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ದಿನಾಂಕ 29-10-21 ರಂದು ಪುನೀತ್ ಅವರ ಸಾವಿನ ಸುದ್ದಿಯನ್ನು ಮಾಧ್ಯಮದ ಮುಖೇನ ಸಮಗ್ರ ನಾಡಿನ ಜನತೆಗೆ ತಿಳಿದಿರುತ್ತದೆ. ಹಾಗೂ ಅವರು ಮನೆಯಿಂದ ಕ್ಲೀನಿಕ್ಗೆ ಹೋಗುವಾಗ ಆರೋಗ್ಯವಾಗಿಯೇ ಹೋಗಿರುತ್ತಾರೆ. ಹಾಗಿದ್ದರೇ ಕ್ಲಿನಿಕ್ನಲ್ಲಿ ಪುನೀತ್ ಅವರನ್ನು ಯಾವ ರೀತಿ ತಪಾಸಣೆ ಮಾಡಲಾಯಿತು,ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ಹೋಗಲು ಯಾಕೆ ತಡವಾಯಿತು,ಈ ಎಲ್ಲಾ ವಿಚಾರದಲ್ಲಿ ಅನುಮಾನಗಳಿದ್ದು, ರಮಣಶ್ರೀ ಕ್ಲಿನಿಕ್ ಹಾಗೂ ಅಲ್ಲಿ 15 ನಿಮಿಷ ಯಾಕೆ ಆಯಿತು, ಅಲ್ಲಿಂದ ಅವರು ವಿಕ್ರಂ ಆಸ್ಪತ್ರೆಗೆ ತೆರಳಿರೋ ಸಮಯ ಇವೆಲ್ಲವನ್ನು ಬಹಿರಂಗ ಪಡಿಸಬೇಕು. ಹಾಗೇ ಕೂಲಂಕುಶವಾಗಿ ಪರಿಶೀಲಿಸಬೇಕು. ರಮಣಶ್ರೀ ಆಸ್ಪತ್ರೆಯಲ್ಲಿ ಪುನೀತ್ ಬಂದಾಗಿನ ಸಿಸಿಟಿವಿ ದೃಶ್ಯವನ್ನು ಇನ್ನೂ ರಿಲೀಸ್ ಮಾಡಿಲ್ಲ. ಅದನ್ನು ಮಾಧ್ಯಮಗಳಿಗೆ ನೀಡಬೇಕು. ಹಾಗೇ ಅಲ್ಲಿನ ವೈದ್ಯರ ನಿರ್ಲಕ್ಷ್ಯವೇ ಪುನೀತ್ ಸಾವಿಗೆ ಕಾರಣವಾಯಿತಾ? ಅಂತಹ ತುರ್ತು ಪರಿಸ್ಥಿತಿಯಲ್ಲಿಯೂ ಆಂಬುಲೆನ್ಸ್ನಲ್ಲಿ ಯಾಕೆ ಕಳುಹಿಸಲಿಲ್ಲಾ ಎಂಬೆಲ್ಲಾ ಗೊಂದಲಗಳಿವೆ. ಹಾಗೇ ಈ ಗೊಂದಲಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕು, ಹೀಗಾಗಿ ಸಮಗ್ರ ತನಿಖೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ" ಎಂದು ಅರುಣ್ ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಪ್ರತಿಯೊಂದಿಗೆ ಸದಾಶಿವ ನಗರ ಪೋಲೀಸ್ ಠಾಣೆಗೆ ದೂರು ನೀಡಲು ಮುಂದಾಗಿರುವ ಅರುಣ್ ಪರಮೇಶ್ವರ್ ಈ ಮೂಲಕವಾದರು ಪುನೀತ್ ಸಾವಿನ ಬಗ್ಗೆ ಇರುವ ಗೊಂದಲಗಳು ಸರಿಯಾಗಬೇಕು ಎಂದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಂತಹ ದೊಡ್ಡ ವ್ಯಕ್ತಿಗಳು ಸೇರಿದಂತೆ ಯಾರೇ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತೆರಳಿದಾಗ ಯಾರು ನಿರ್ಲಕ್ಷ್ಯ ಮಾಡಬಾರದು . ಜೀವಕ್ಕೆ ಪ್ರಾಮುಖ್ಯತೆ ಕೊಟ್ಟು ಜೀವ ಉಳಿಸುವ ಕೆಲಸಗಳು ವೈದ್ಯರಿಂದ ಆಗಬೇಕು ಎಂದಿದ್ದಾರೆ. ಪುನೀತ್ ಸಾವಿನ ನೋವಿಲ್ಲೂ ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಹೋರಾಟಕ್ಕೆ ಮುಂದಾಗಿದ್ದಾರೆ.


Click it and Unblock the Notifications











